ದೇವರಾಜ ಅರಸು ಅವರ ದೂರದೃಷ್ಟಿತ್ವದಿಂದ ರಾಜ್ಯದಲ್ಲಿ ಮಹತ್ತರ ಬದಲಾವಣೆ: ಡಿಸಿ ಮುಲ್ಲೈ ಮುಗಿಲನ್

Prasthutha|

- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರು, ಹಿಂದುಳಿದವರು ಸೇರಿದಂತೆ ಸಮಾಜದಲ್ಲಿ ಬಲ ಇಲ್ಲದವರಿಗೆ ಭೂ ಸುಧಾರಣೆ ಕಾಯ್ದೆಯ ಮೂಲಕ ಉಳುಮೆಗೆ ಭೂಮಿ ಒದಗಿಸಿಕೊಟ್ಟು, ಆ ಮೂಲಕ ಅವರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಏಳಿಗೆಗೆ ಕಾರಣರಾದವರು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು. ಅವರು ಸದಾ ಸ್ಮರಣೀಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಅಭಿಪ್ರಾಯಪಟ್ಟರು.

ಅವರು ಆ.20ರ ಭಾನುವಾರ ನಗರದ ಜಿಲ್ಲಾ ಪಂಚಾಯತ್ ನ
ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

- Advertisement -

ತಮ್ಮ ಆಡಳಿತಾವಧಿಯಲ್ಲಿ ಅವರು ಜಾರಿಗೊಳಿಸಿದ ಹಲವಾರು ಕಾರ್ಯಕ್ರಮಗಳಿಂದಾಗಿ ರಾಜ್ಯದಲ್ಲಿಂದು ಮಹತ್ತರ ಬದಲಾವಣೆಗಳಾಗಿವೆ, ಆ ಮೂಲಕ ಹಿಂದುಳಿದ ವರ್ಗದವರು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಲ್ಲರೊಂದಿಗೆ ಸರಿಸಮನಾಗಿ ನಿಲ್ಲಲು ಸಾಧ್ಯವಾಗಿದೆ ಎಂದರು.

ದೇಶದಲ್ಲೇ ಅಧುನಿಕ, ಅರ್ಥಿಕ ಶೈಕ್ಷಣಿಕವಾಗಿ ಮುಂದುವರಿದ ರಾಜ್ಯವಾಗಿ ಕರ್ನಾಟಕ ಮೂಡಿಬರಲು ದೇವರಾಜ ಅರಸು ಅವರ ದೂರದೃಷ್ಟಿತ್ವವೇ ಕಾರಣ. ಹಳ್ಳಿ ಹಳ್ಳಿಗಳಲ್ಲಿ ಶಾಲೆ, ಶಿಕ್ಷಣವನ್ನು ಪರಿಣಾಮಕಾರಿಯಾಗಿ ರೂಪಿಸಲು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳ ನಿರ್ಮಾಣ ಇವೆಲ್ಲ ದೇವರಾಜ ಅರಸು ಚಿಂತನೆ ಫಲಗಳಾಗಿವೆ ಎಂದರು.

ರಾಜ್ಯದಲ್ಲಿ ಮೊದಲ ಬದಲಾವಣೆ ತಂದಿರುವುದು ಭೂ ಸುಧಾರಣೆ ಕಾಯ್ದೆ ಮೂಲಕ. ಇದರಿಂದಾಗಿ ಬಡವನೂ ಭೂಮಿ ಹೊಂದುವಂತಾಯಿತು. ಕೇವಲ ಭೂಮಿ ಸಿಗುವಂತೆ ಮಾಡಿರುವುದು ಮಾತ್ರವಲ್ಲ, ಅವರ ಬದುಕನ್ನು ಅವರೇ ರೂಪಿಸಲು ಕೊಟ್ಟ ಅವಕಾಶ. ಅದರಿಂದ ಇಂದು ನಾವು ಸಮಾಜದಲ್ಲಿ ಶಿಕ್ಷಣ ಪಡೆದು, ಉತ್ತಮ ಜೀವನ ನಡೆಸುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ದೇವರಾಜ ಅರಸು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಡಾ. ಅಣ್ಣಯ್ಯ ಕುಲಾಲ್ ಅವರು ಮಾತನಾಡಿ, ಸಮಾಜದಲ್ಲಿ ಹಿಂದುಳಿದವರು, ಧ್ವನಿ ಇಲ್ಲದ ಸಮುದಾಯಕ್ಕೆ ಧ್ವನಿಯಾದವರು ದೇವರಾಜ ಅರಸರು. ಅದೇ ಅವರ ಪರಿಕಲ್ಪನೆಯೂ ಆಗಿತ್ತು, ಎಲ್ಲಿ ಹೋದರೂ ಅವರು ಜನರ ಸಮಸ್ಯೆ ಕೇಳಿ ಬಗೆಹರಿಸುತ್ತಿದ್ದರು. ಅವರ ಸುಧಾರಣೆ ಪಟ್ಟಿ ದೊಡ್ಡದಿದೆ. ಉಳುವವನೇ ಹೊಲದೊಡೆಯ ಎನ್ನುವ ನೀತಿಯಿಂದಾಗಿ ಕರಾವಳಿಯಲ್ಲಿ ಉಳುವವರಿಗೆ ಭೂಮಿ ದೊರೆತಿರುವುದು ಮಾತ್ರವಲ್ಲದೆ, ಭೂಮಿ ಕಳೆದುಕೊಂಡ ಮೇಲ್ವರ್ಗದವರು ಊರು ಬೇರೆ ಕಡೆ ಉದ್ಯೋಗಕ್ಕೆ ಹೋಗಿ ಅಲ್ಲಿ ತಮ್ಮ ಬದುಕು ಕಟ್ಟಿಕೊಂಡು ಇಂದು ಕರಾವಳಿಯ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಭಾಗವಹಿಸಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿಯವರು ಸದ್ಭಾವನಾ ದಿನದ ಪ್ರತಿಜ್ಞೆಯನ್ನು ಬೋಧಿಸಿದರು.

ಸನ್ಮಾನ:
ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು, ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಮೆಡಿಕಲ್ ಇಂಜಿನಿಯರಿಂಗ್ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Join Whatsapp