ಸಾವಿರ ಕಿ.ಮೀ ದೂರ ಬಿಟ್ಟು ಬಂದಿದ್ದರೂ 1ವರ್ಷ ನಡೆದು ದುಬಾರೆ ಸೇರಿದ ಕುಶ

Prasthutha|

ಕೊಡಗು:  ಸಾಕಾನೆ ಕುಶನನ್ನು ದುಬಾರೆಯಿಂದ 4 ಸಾವಿರ ಕಿ.ಮೀ ದೂರ ಬಿಟ್ಟು ಬಂದಿದ್ದರೂ ಮತ್ತೆ ತನ್ನ ಗೂಡಿಗೆ ನಡೆದುಕೊಂಡು ಬಂದು ಅಚ್ಚರಿ ಮೂಡಿಸಿದ್ದಾನೆ.!

- Advertisement -

ಸಾಕಾನೆ ಕುಶನನ್ನು ತಾನು ಹುಟ್ಟಿ ಬೆಳೆದ ದಬಾರೆಯಿಂದ ಮೇಲಧಿಕಾರಿಗಳ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ 4 ಸಾವಿರ ಕಿ.ಮೀ ದೂರದವರೆಗೆ ಬಿಟ್ಟು ಬಂದಿದ್ದು, ಧೃತಿಗೆಡದ ಕುಶ 1 ವರ್ಷ 7 ದಿನಗಳಲ್ಲಿ ತಾನು ಹುಟ್ಟಿ ಬೆಳೆದಿರುವ ಜಾಗವನ್ನು ನೆನಪು ಮಾಡಿಕೊಂಡು  ನಡೆದುಕೊಂಡು ಬಂದು ತಾನಿದ್ದ ಸ್ಥಳಕ್ಕೆ ತಲುಪಿದ್ದಾನೆ.

ಮತ್ತೆ ಕುಶನ ನೋಡಿದ  ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮಾವುತ ಕಾವಾಡಿಗರಿಗೆ ಆಶ್ಚರ್ಯ ಉಂಟು ಮಾಡಿದೆ.

- Advertisement -

ಕಳೆದ 2021 ಜೂನ್ ತಿಂಗಳಲ್ಲಿ ದುಬಾರೆ ಸಾಕಾನೆ ಶಿಬಿರದಿಂದ ಬಂಡೀಪುರಕ್ಕೆ ಸ್ಥಳಾಂತರ ಮಾಡಿದ ಸಾಕಾನೆ ಮತ್ತೆ ಪ್ರತ್ಯಕ್ಷವಾಗಿದೆ. ಬಂಡೀಪುರದಿಂದ ದುಬಾರೆ ಶಿಬಿರಕ್ಕೆ ಕುಶ 4 ಸಾವಿರ ಕಿಲೋ ಮೀಟರ್ ಕ್ರಮಿಸಿ ಮರಳಿದೆ. ಕುಶಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿದ ಹಿನ್ನೆಲೆಯಲ್ಲಿ ಅದರ ಚಲನವಲನ ಪತ್ತೆಯಾಗಿದೆ.

ವರ್ಷದ ಹಿಂದೆ ಕೆಲವು ವನ್ಯಜೀವಿ ಪ್ರೇಮಿಗಳ ಒತ್ತಾಯದಿಂದ ರಾಜ್ಯ ಸರ್ಕಾರ ಕುಶನನ್ನು ಅರಣ್ಯ ಇಲಾಖೆ ಮೂಲಕ ರೇಡಿಯೋ ಕಾಲರ್ ಅಳವಡಿಸಿ 2021 ಜೂನ್ ತಿಂಗಳಲ್ಲಿ ಬಂಡೀಪುರಕ್ಕೆ ಸ್ಥಳಾಂತರ ಮಾಡುವ ಕಾರ್ಯ ನಡೆಸಿತ್ತು. ಆದರೆ ಬಂಡೀಪುರದಲ್ಲಿ ನೆಲೆ ನಿಲ್ಲಲು ಇಚ್ಛಿಸದ ಕುಶ ಅಲ್ಲಿನ ಕೆಲವು ಸಂಗಡಿಗರೊಂದಿಗೆ ಕೇರಳ ಮೂಲಕ ಕೊಡಗಿನ ಗಡಿ ದಾಟಿ, ತಿತಿಮತಿ ದೊಡ್ಡಹರವೆ ಮೀಸಲು ಅರಣ್ಯ ಮಾರ್ಗವಾಗಿ ಇದೀಗ ಮಾಲ್ದಾರೆ ಸಮೀಪದ ದುಬಾರೆ ಶಿಬಿರದ ಸಮೀಪದಲ್ಲಿ ನೆಲೆಯೂರಿದೆ.

ಕುಶ ಶಿಬಿರದಲ್ಲಿದ್ದ ಸಂದರ್ಭ ಅಧಿಕಾರಿಗಳು ಮತ್ತು ಮಾವುತರು ತುಂಬಾ ಚೆನ್ನಾಗಿ ಆರೈಕೆ ಮಾಡಿದ ಹಿನ್ನೆಲೆಯಲ್ಲಿ ಅದನ್ನು ನೆನಪಿಸಿಕೊಂಡು ಶಿಬಿರಕ್ಕೆ ಮತ್ತೆ ಹಿಂತಿರುಗುವ ಮನಸ್ಸು ಮಾಡಿದೆ ಎನ್ನುವುದು ಕೆಲವರ ಅಭಿಪ್ರಾಯ. 2016ರಲ್ಲಿ ಜಿಲ್ಲೆಯ ಚೆಟ್ಟಳ್ಳಿ ಅರಣ್ಯದಿಂದ ಹಿಡಿದು ಶಿಬಿರಕ್ಕೆ ತಂದ ಕುಶ ದುಬಾರೆ ಸಾಕಾನೆ ಶಿಬಿರ ಸೇರಿತ್ತು. 2017 ರ ನವೆಂಬರ್ ತಿಂಗಳಲ್ಲಿ ಏಕಾಏಕಿ ಕುಶ ಶಿಬಿರದಿಂದ ನಾಪತ್ತೆಯಾಗಿತ್ತು. ನಂತರ ಆನೆಯನ್ನು ಮರಳಿ ತರುವಲ್ಲಿ ದುಬಾರೆ ಸಾಕಾನೆ ಶಿಬಿರದ ಅಧಿಕಾರಿಗಳು ಸಿಬ್ಬಂದಿ ಹರಸಾಹಸಪಟ್ಟು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ವನ್ಯಜೀವಿ ಪ್ರೇಮಿ ಮನೇಕಾ ಗಾಂಧಿ ನೇತೃತ್ವದ ತಂಡದ ಆಗ್ರಹದಂತೆ ಸರ್ಕಾರ ಕುಶ ಆನೆಯನ್ನು ಅದರ ಇಚ್ಛೆಗೆ ವಿರುದ್ಧವಾಗಿ ಮತ್ತೆ ಅರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಸಿತ್ತು. ಆದರೆ ಅಂದು ಕುಶ ವಲ್ಲದ ಮನಸ್ಸಿನಲ್ಲೇ ಬಂಡಿಪುರ ಅರಣ್ಯದಲ್ಲೇ ಸುತ್ತಾಡಿಕೊಂಡು ಇತ್ತು.

ಒಟ್ಟಿನಲ್ಲಿ ಬಂಡೀಪುರದಿಂದ ನೂರಾರು ಕಿಲೋ ಮೀಟರ್ ದೂರದ ದುಬಾರೆಗೆ ಮತ್ತೆ ಆಗಮಿಸಿದ ಕುಶ ಇದೀಗ ಶಿಬಿರದ ಕೆಲವೇ ಅಂತರದಲ್ಲಿ 5-6 ಕಾಡಾನೆಗಳ ಜೊತೆಗೆ ಓಡಾಡುತ್ತಿದೆ. ತಾನು ಹುಟ್ಟಿ ಬೆಳೆದ ಸ್ಥಳಕ್ಕೆ ಸಾವಿರಾರು ಕಿಲೋ ಮೀಟರ್ ನಡೆದು ಬಂದಿರುವುದು ನಿಜಕ್ಕೂ ಆಶ್ಚರ್ಯ. ಮೂಕಪ್ರಾಣಿಯೊಂದರ ಪ್ರೀತಿ ಹೇಗೆ ಇದೆ ಎಂದು ಸಾಕಾನೆಯನ್ನು ಪಳಗಿಸಿದ ಮಾವುತ ಕಾವಡಿಗಳ ಮಾತಾಗಿದೆ.

Join Whatsapp