ಯುವತಿಯರ ಮದುವೆ ವಯಸ್ಸು ಹೆಚ್ಚಿಸುವ ನಿರ್ಧಾರ ಮಹಿಳಾ ಸ್ವಾತಂತ್ರ್ಯ ದ ದಮನ: WIM ಆಕ್ರೋಶ

Prasthutha|

ವಿಮೆನ್  ಇಂಡಿಯಾ ಮೂವ್ಮೆಂಟ್ ನ ರಾಜ್ಯ ಸಮಿತಿ ಸಭೆಯು (19-12- 2021) ರಂದು ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ರವರ  ಅಧ್ಯಕ್ಷತೆಯಲ್ಲಿ ನಡೆದು  ರಾಜ್ಯದ ಮಹಿಳಾ ಸಂಬಂಧಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳು.

- Advertisement -

ಯುವತಿಯರ ಮದುವೆ ವಯಸ್ಸನ್ನು ಹೆಚ್ಚಿಸುವ ಸರಕಾರದ ನಿರ್ಧಾರವು ಮಹಿಳಾ ಸ್ವಾತಂತ್ರ್ಯದ ದಮನ ವಾಗಿದ್ದು ವಿಮೆನ್ ಇಂಡಿಯಾ ಮೂವ್ಮೆಂಟ್ ಇದನ್ನು ತೀವ್ರವಾಗಿ ಖಂಡಿಸುತ್ತದೆ.  ಮದುವೆ ವಯಸ್ಸನ್ನು 21ಕ್ಕೆ ಏರಿಸುವುದರಿಂದ ಅನೈತಿಕತೆಯು ಹೆಚ್ಚಾಗಲು ಸರಕಾರವು ಪ್ರೇರಣೆ ನೀಡಿದಂತಾಗುತ್ತದೆ. 18 ವರ್ಷ ತುಂಬಿದರೆ ಮತಚಲಾಯಿಸುವ ಹಕ್ಕು ನೀಡುವ ಸರಕಾರವು ಅವಳ ಮದುವೆ ಸ್ವಾತಂತ್ರವನ್ನು ಕಸಿಯುತ್ತಿದೆ. ಯಾವುದೇ ಸಾರ್ವಜನಿಕ ಚರ್ಚೆಗೆ ಆಸ್ಪದ ನೀಡದೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿರುವುದು ಅಸಂವಿಧಾನಿಕ.  ಅಪೌಷ್ಟಿಕತೆ ,ಅಭದ್ರತೆ, ಬಡತನ, ಬೆಲೆಏರಿಕೆ  ಇತ್ಯಾದಿ  ಮಹಿಳಾ ಸಂಬಂಧಿ ಜ್ವಲಂತ ಸಮಸ್ಯೆಗಳ ಬಗ್ಗೆ  ಚರ್ಚಿಸದೀರುವುವದು ಖಂಡನೀಯ.  ಮುಂದೆ ಲೋಕಸಭೆಯಲ್ಲಿ ಮಂಡಿಸುವ ಮುನ್ನ ಇದರ ಸಾಧಕ-ಬಾಧಕಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಕರೆ ನೀಡಬೇಕೆಂದು ಸಭೆಯು ಒತ್ತಾಯಿಸುತ್ತದೆ. ಇಂತಹ ಅನಾವಶ್ಯಕ ವಿಷಯಗಳ ಬಗ್ಗೆ ಸರಕಾರವು ರಾಜ್ಯದ  ಅಮೂಲ್ಯ ಸಂಪನ್ಮೂಲಗಳನ್ನು ಪೋಲು ಮಾಡುತ್ತಿರುವುದು ಅಕ್ಷಮ್ಯ.

ಧಾರ್ಮಿಕ ಆಯ್ಕೆಯು ಭಾರತೀಯ ಪ್ರಜೆಯ ಸಂವಿಧಾನಿಕ ಹಕ್ಕಾಗಿದೆ. ಇದನ್ನು ಕಸಿಯುವುದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಚಳಿಗಾಲದ ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಇದು ಮಹಿಳೆಯರಿಗೆ ಅತ್ಯಂತ ಹೆಚ್ಚು ಅಪಾಯಕಾರಿಯಾಗಲಿದೆ. ಆಮಿಷ, ಬೆದರಿಕೆಗಳ ಮುಖಾಂತರ ಮತಾಂತರಿಸುವವರಿಗೆ ಈಗಾಗಲೇ ಕಾನೂನು ಜಾರಿಯಲ್ಲಿದ್ದು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಆದರೆ ಸರಕಾರವು ಹೊಸ ಕಾಯ್ದೆಯನ್ನು ಜಾರಿಗೆ ತರುವುದರಲ್ಲಿ ಯಾವ ಹುನ್ನಾರ ಅಡಗಿದೆ? ಆದ್ದರಿಂದ ಇದನ್ನು ರದ್ದುಪಡಿಸಬೇಕೆಂದು ಸಭೆಯು ಒತ್ತಾಯಿಸುತ್ತದೆ.

- Advertisement -

ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆಯು ಕರ್ನಾಟಕವನ್ನು ಕಿತ್ತು ತಿನ್ನುತ್ತಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 5 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಲ್ಲಿ ಶೇಕಡಾ 36 ಕುಂಠಿತ ಬೆಳವಣಿಗೆ,  5 ವರ್ಷಕ್ಕಿಂತ ಕಡಿಮೆ ಪ್ರಾಯದ ಶೇಕಡಾ 26 ಮಕ್ಕಳು ಕ್ಷೀಣ ಬೆಳವಣಿಗೆ ಹಾಗೂ ಶೇಕಡಾ 10.5  ಮಕ್ಕಳು ತೀವ್ರ ಕ್ಷೀಣತೆ ಹೊಂದಿದ್ದಾರೆ. ಇದು ರಾಜ್ಯವನ್ನು ಕಾಡುವ ಗಂಭೀರ ಸಮಸ್ಯೆಯಾಗಿದ್ದು ಸರಕಾರವು ಅಪೌಷ್ಠಿಕತೆಗೆ ಪೂರಣ ವ್ಯವಸ್ಥೆಯನ್ನು ಮಾಡಬೇಕಿದೆ. ಈ ಮಧ್ಯೆ ಶಾಲೆಗಳಲ್ಲಿ ಮೊಟ್ಟೆ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದ್ದು ಇದಕ್ಕೆ ಸರಕಾರವು ವಿರೋಧ ಕಿವಿಗೊಡಬಾರದು. ಮೊಟ್ಟೆ ತಿನ್ನದವರಿಗೆ ಪೂರಕ ಆಹಾರ ಒದಗಿಸಿ ಆದರೆ ಮೊಟ್ಟೆ ತಿನ್ನುವ ಮಕ್ಕಳನ್ನು   ಪೌಷ್ಟಿಕ ಆಹಾರದಿಂದ ತಡೆಯಬಾರದೆಂದು ಈ ಸಭೆಯು ಒತ್ತಾಯಿಸುತ್ತದೆ..

ಅದೇ ತರಹ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿ  ಮಹಿಳೆಯರು ಒಂದು ಹೊತ್ತಿನ ಊಟಕ್ಕಾಗಿ ವಿದೂರ ಪ್ರದೇಶಗಳಲ್ಲಿರುವ ಅಂಗನವಾಡಿಗಳಿಗೆ ಇನ್ನೊಬ್ಬರ ಸಹಾಯವಿಲ್ಲದೇ ತೆರಳುವುದು ಪ್ರಾಯೋಗಿಕವಲ್ಲ. ಮತ್ತು ಪ್ರಯಾಣಿಸುವ ಖರ್ಚು ಭರಿಸಲು ಅಸಾಧ್ಯವಾಗಿದೆ. ಆದ್ದರಿಂದ ಸರಕಾರವು ಲಾಕ್ಡೌನ್ ಸಂದರ್ಭದಲ್ಲಿ  ಜಾರಿಗೊಳಿಸಿದಂತೆ ಮನೆಮನೆಗೆ ಪೌಷ್ಟಿಕ ಆಹಾರಗಳನ್ನು ಒದಗಿಸಬೇಕೆಂದು ಸಭೆಯು ಒತ್ತಾಯಿಸುತ್ತದೆ.

ಈ ಸಭೆಯಲ್ಲಿ ವಿಮ್  ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆಯಿಶಾ ಬಜ್ಪೆ ಸ್ವಾಗತಿಸಿ  ರಾಜ್ಯ ಸಮಿತಿ ಸದಸ್ಯರಾದ ನಸ್ರಿಯಾ ಬೆಳ್ಳಾರೆ ಧನ್ಯವಾದಗಳನ್ನು ಸಲ್ಲಿಸಿದರು.

Join Whatsapp