ಗ್ರಾಮಸ್ಥರ ಮನೆ ಲಾಕ್‌ ಮಾಡಿ, ದೇವಾಲಯ ಪ್ರವೇಶಿಸಿದ ದಲಿತರು

Prasthutha|

ಚಿಕ್ಕಮಗಳೂರು: ದಲಿತ ಸಮುದಾಯದವರನ್ನು ದೇವಸ್ಥಾನದ ಒಳಗೆ ಬಿಡುವುದಿಲ್ಲ ಎಂದು ಹೇಳಿ ದಲಿತ ಯುವಕನಿಗೆ ಗ್ರಾಮಸ್ಥರು ಥಳಿಸಿದ್ದರು. ಅದೇ ಯುವಕ ನೂರಾರು ದಲಿತರೊಂದಿಗೆ ಗ್ರಾಮಕ್ಕೆ ಪ್ರವೇಶಿಸಿ ಎಲ್ಲರ ಮನೆಗಳನ್ನೂ ಲಾಕ್‌ ಮಾಡಿ, ದೇವಾಲಯಕ್ಕೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ. ದೇವಾಲಯದ ಗರ್ಭಗುಡಿಯಲ್ಲಿ ನಿಂತು ರಂಗನಾಥಸ್ವಾಮಿ ದೇವರಿಗೆ ದಲಿತರು ಪೂಜೆ ಸಲ್ಲಿಸಿದ್ದಾರೆ. ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

- Advertisement -

ಪೊಲೀಸರು, ತಹಶೀಲ್ದಾರ್, ಎಸಿ ನೇತೃತ್ವದಲ್ಲಿ ದಲಿತ ಸಮುದಾಯದವರು ದೇವಾಲಯ ಪ್ರವೇಶ ಮಾಡಿದ್ದಾರೆ.

ದೇವಾಲಯದೊಳಗೆ ಪ್ರವೇಶಿಸಲು ಮುಂದಾದ ದಲಿತ ಯುವಕನನ್ನು ಗ್ರಾಮಸ್ಥರು ತಡೆದು ನಿಲ್ಲಿಸಿ ಆತನನ್ನು ಥಳಿಸಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ತರೀಕೆರೆ ತಾಲೂಕಿನ ತಹಸೀಲ್ದಾರ್ ದಲಿತರಿಗೆ ದೇವಸ್ಥಾನದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

- Advertisement -

ದಲಿತರ ದೇವಸ್ಥಾನ ಪ್ರವೇಶದ ವೇಳೆ ಪರಿಸ್ಥಿತಿ ವಿಕೋಪಕ್ಕೆ ತೆರಳಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು.

ಜನವರಿ 1 ರಂದು ದಲಿತ ಊರೊಳಗೆ ಬಂದನೆಂದು ಹಲ್ಲೆ ಮಾಡಲಾಗಿತ್ತು. ದೇವರಿಗೆ ಮೈಲಿಗೆಯಾಗಿದೆ ಎಂದು ಗೊಲ್ಲರಹಟ್ಟಿ ಜನ ಹಲ್ಲೆ ಮಾಡಿದ್ದರು. ನಂತರ ದಲಿತ ಸಂಘಟನೆಯಿಂದ ಗೊಲ್ಲರಹಟ್ಟಿ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಜೊತೆಗೆ, ದಲಿತ ಯುವಕನ ಮೇಲೆ ಹಲ್ಲೆಗೈದ 15 ಜ‌ನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿತ್ತು.

ಈ ಕುರಿತು ಮಾತನಾಡಿದ ಯುವಕ‌ ಮಾರುತಿ, ಅವತ್ತು ನನಗೆ ಹೊಡೆದು, ಹಲ್ಲೆ ಮಾಡಿದ್ದರು. ನನಗೆ ಹೊಡೆದವರಿಗೂ ಭಗವಂತ ಒಳಿತೇ ಮಾಡಲಿ. 30-40 ಜನ ನನಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಅವರನ್ನು ದ್ವೇಷ ಮಾಡಲ್ಲ. ಇಂದು ಅದೇ ದೇಗುಲದ ಪೂಜೆ ಮಾಡಿದ್ದು ಸಂತೋಷ ತಂದಿದೆ. ದೇವರು ಎಲ್ಲರಿಗೂ ಒಳಿತನ್ನು ಮಾಡಲಿ. ಎಂದು ಹೇಳಿದ್ದಾರೆ.

Join Whatsapp