ಗುಜರಾತ್ | ಕ್ಷತ್ರಿಯ ಜಾತಿ ಸೂಚಕ ಉಪನಾಮ ಹೊಂದಿದ್ದಕ್ಕೆ ದಲಿತ ಯುವಕನ ಥಳಿಸಿದ ಜಾತಿವಾದಿ ಭಯೋತ್ಪಾದಕರು

Prasthutha|

ನವದೆಹಲಿ : ಕ್ಷತ್ರಿಯ ವರ್ಗದ ಜಾತಿ ಸೂಚಕ ಹೆಸರನ್ನು ತನ್ನ ಉಪನಾಮವಾಗಿ ಬಳಸಿಕೊಂಡಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ, ಆತನ ಸಹೋದ್ಯೋಗಿಗಳು ಥಳಿಸಿದ ಘಟನೆ ಗುಜರಾತ್ ನ ಸನಂದ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ಸನಂದ್ ನ ಮ್ಯಾಗ್ನೆಟಿ ಮರೆಲ್ಲಿ ಮದರ್ಸನ್ ಆಟೊ ಸಿಸ್ಟಮ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಭರತ್ ಜಾದವ್ (20) ಎಂಬಾತನ ಮೇಲೆ ಹಲ್ಲೆ ನಡೆದಿದೆ. ಡಿ.2ರಂದು ಜಾದವ್ ಕೆಲಸಕ್ಕೆ ಬಂದಾಗ ಆತನ ಹೆಸರಿನ ಬಗ್ಗೆ ಹರ್ಷದ್ ರಜಪೂತ್ ಎಂಬಾತ ವಿಚಾರಿಸಿದ್ದ. ಜಾದವ್ ತನ್ನ ಹೆಸರು ಹೇಳಿ ಸುಮ್ಮನಿದ್ದ. ಆದರೆ, ಸಂಜೆ 4 ಗಂಟೆಗೆ ಮತ್ತೆ ಹರ್ಷದ್ ರಜಪೂತ್ ಹೀಗೆ ಮಾತನಾಡುತ್ತಾ, ಜಾದವ್ ಹಿನ್ನೆಲೆ ಕೇಳಿದ್ದಾನೆ. ಜಾತಿ ಬಗ್ಗೆಯೂ ಕೇಳಿದ್ದಾನೆ. ಆಗ ತಾನೊಬ್ಬ ದಲಿತ ಎಂಬುದಾಗಿ ಜಾದವ್ ಹೇಳಿದ್ದಾನೆ.

ಆಗ ನೀನು ದಲಿತನಾಗಿದ್ದು, ಕ್ಷತ್ರಿಯರ ರೀತಿ ಯಾಕೆ ಹೆಸರಿಟ್ಟುಕೊಂಡಿದ್ದೀಯಾ? ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ, ಜಾದವ್ ಅಂಗಿ ಬಟನ್ ಗಳನ್ನು ಹಾಕದಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದ.

- Advertisement -

ತಾನೂ ನಿನ್ನ ಸಹೋದರನಿದ್ದಂತೆ ಎಂದು ಜಾದವ್ ಅರ್ಥ ಮಾಡಿಸಲು ನೋಡಿದ್ದಾನೆ. ಆದರೆ, ಫ್ಯಾಕ್ಟರಿಯಿಂದ ಹೊರಗೆ ಸಿಗು ಎಂದು ಆತನಿಗೆ ಸೂಚಿಸಿದ್ದ. ಕೆಲಸ ಮುಗಿದ ಬಳಿಕ, ಅದೇ ವಿಚಾರದಲ್ಲಿ ತಗಾದೆ ತೆಗೆದ ಹರ್ಷದ್ ರಜಪೂತ್, ಇತರ ನಾಲ್ವರೊಂದಿಗೆ ಕೂಡಿಕೊಂಡು ಜಾದವ್ ಗೆ ಮಾರಣಾಂತಿಕ ಹಲ್ಲೆ ನಡೆಸುತ್ತಾನೆ. ನೀನು ದಲಿತನಾಗಿದ್ದು, ನಿನ್ನನ್ನು ನೀನು ‘ರಜಪೂತನ ಸಹೋದರ’ ಎಂದು ಹೇಳಲು ನಿನಗೆಷ್ಟು ಧೈರ್ಯ ಎಂದು ಆತ ಜಾದವ್ ನನ್ನು ಪ್ರಶ್ನಿಸಿದ್ದಾನೆ.

ಬಳಿಕ ಜಾದವ್ ತಪ್ಪಿಸಿಕೊಂಡು ಬಸ್ ಹತ್ತಿ ಹೋಗಿ ಪೊಲೀಸ್ ದೂರು ದಾಖಲಿಸಿದ್ದಾನೆ. ಹರ್ಷದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಯಾರೆಂದು ಪತ್ತೆಹಚ್ಚಲಾಗಿಲ್ಲ.   

Join Whatsapp