ದಲಿತ ವಿದ್ಯಾರ್ಥಿಯನ್ನು 18 ಗಂಟೆ ಕಾಲ ಶೌಚಾಲಯದಲ್ಲಿ ಕೂಡಿ ಹಾಕಿದ ಶಿಕ್ಷಕರು !

Prasthutha|

►ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ

- Advertisement -

ಔರೈಯಾ( ಉತ್ತರಪ್ರದೇಶ): ತನ್ನ ಹೂಜಿಯಿಂದ ನೀರು ಕುಡಿದ ಕಾರಣಕ್ಕೆ ಮೇಲ್ಜಾತಿಯ ಶಿಕ್ಷಕನೊಬ್ಬ ದಲಿತ ಬಾಲಕನನ್ನು ಥಳಿಸಿ ಕೊಂದಿರುವ ಘಟನೆಯ ರಾಜಸ್ತಾಣದಲ್ಲಿ ನಡೆದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ದಲಿತ ವಿದ್ಯಾರ್ಥಿಯೊಬ್ಬನನ್ನು 18 ಗಂಟೆಗಳ ಕಾಲ ಶೌಚಾಲಯದಲ್ಲಿ ಕೂಡಿ ಹಾಕಿರುವ ಆಘಾತಕಾರಿ ಘಟನೆ ನಡೆದ ಬಗ್ಗೆ ವರದಿಯಾಗಿದೆ.

ಉತ್ತರ ಪ್ರದೇಶದ ಔರೈಯಾದ ಬಿದುನಾ ತಾಲೂಕಿನ ಪಿಪ್ರೌಲಿ ಶಿವ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

- Advertisement -

ಮರುದಿನ ಶಾಲೆ ತಲುಪಿದ ಶಿಕ್ಷಕರು ಬೀಗ ತೆಗೆದಾಗ ಬಾಲಕ ಹೊರಗೆ ಬಂದಿದ್ದಾನೆ. ಮನೆಗೆ ತಲುಪಿದ ಬಳಿಕ ವಿದ್ಯಾರ್ಥಿ ತನಗಾದ ನೋವಿನ ಘಟನೆಯನ್ನು ಕುಟುಂಬಸ್ಥರಿಗೆ ತಿಳಿಸಿದ್ದಾನೆ.

ಪೂರ್ವ ದೂಜೆ ಗ್ರಾಮದ 11 ವರ್ಷದ ವಿದ್ಯಾರ್ಥಿಯು ಈ ಶಾಲೆಯಲ್ಲಿ 6 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದ ಆ.5 ರಂದು ತನ್ನ ಮಗ ಶಾಲೆಗೆ ಹೋಗಿದ್ದನು ಮತ್ತು ಶಾಲೆ ಬಿಟ್ಟರೂ ಮನೆಗೆ ಹಿಂದಿರುಗಲಿಲ್ಲ ಎಂದು ವಿದ್ಯಾರ್ಥಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ರಾತ್ರಿಯಿಡೀ ಊರಿನಲ್ಲಿ ಮತ್ತು ಬಂಧು ಬಳಗದಲ್ಲಿ ವಿಚಾರಿಸಿದರೂ ಮಗನ ಬಗ್ಗೆ ಏನೂ ವಿಷಯ ತಿಳಿಯಲಿಲ್ಲ. ಆಗಸ್ಟ್ 6 ರಂದು ಬೆಳಗ್ಗೆ 8 ಗಂಟೆಗೆ ಶಾಲೆ ತೆರೆಯಲು ಶಿಕ್ಷಕರು ಬಂದಾಗ ಕೊಠಡಿಗಳ ಜತೆಗೆ ಶೌಚಾಲಯದ ಬೀಗವನ್ನೂ ತೆರೆಯಲಾಗಿತ್ತು. ಈ ವೇಳೆ, ಮಗ ಶೌಚಾಲಯದಿಂದ ಹೊರಗೆ ಬಂದಿದ್ದಾನೆ ಎಂದು ಸಂತ್ರಸ್ತ ಬಾಲಕನ ತಂದೆ ಹೇಳಿದ್ದಾರೆ.

ರಜೆ ಇದ್ದ ಕಾರಣ ನಾನು ಮನೆಗೆ ಬರುತ್ತಿದ್ದೆ. ಆಗ ಶಿಕ್ಷಕ ವಿಜಯ್ ಕುಶ್ವಾಹ ಅವರು ನನ್ನನ್ನು ತಡೆದು ಮಧ್ಯಾಹ್ನ 2 ಗಂಟೆಗೆ ಶೌಚಾಲಯಕ್ಕೆ ತಳ್ಳಿದರು ಮತ್ತು ಹೊರಗಿನಿಂದ ಬಾಗಿಲು ಮುಚ್ಚಿದರು. ಆ ಬಳಿಕ ಶೌಚಾಲಯಕ್ಕೂ ಬೀಗ ಹಾಕಲಾಗಿತ್ತು. ಎಲ್ಲರೂ ಹೊರಟು ಹೋಗಿದ್ದರು. ನಾನು ರಾತ್ರಿಯಿಡೀ ಸಹಾಯಕ್ಕಾಗಿ ಕಿರುಚುತ್ತಿದ್ದೆ ಎಂದು ಮಗ ನನ್ನ ಬಳಿ ಹೇಳಿದ್ದಾನೆ.  ಶಾಲೆಯ ಬಳಿ ಯಾವುದೇ ಮನೆ ಇಲ್ಲ. ಹೀಗಾಗಿ ಮಗನ ಧ್ವನಿ ಯಾರಿಗೂ ಕೇಳಿಸದೇ 18 ಗಂಟೆಗಳ ಕಾಲ ಶೌಚಗೃಹದಲ್ಲೇ ಇದ್ದ ಎಂದು ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ

ದಲಿತ ಮಕ್ಕಳೊಂದಿಗೆ ಶಿಕ್ಷಕರ ವರ್ತನೆ ಮತ್ತು ಶಿಕ್ಷಕರ ಅಭ್ಯಾಸ ಸರಿಯಿಲ್ಲ. ಶಾಲೆಯ ಎಲ್ಲ ದಲಿತ ಮಕ್ಕಳೊಂದಿಗೆ ಅವರು ಅನುಚಿತವಾಗಿ ವರ್ತಿಸುತ್ತಾರೆ. ಊಟದಲ್ಲಿ ಪಲ್ಲೆ ಬಡಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಬಾಲಕ ಆರೋಪಿಸಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಗ್ರಾಮದ ಜನರೊಂದಿಗೆ ಶಾಲೆಗೆ ತಲುಪಿದ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಸಂತ್ರಸ್ತ ಕುಟುಂಬದ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಿಒ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಶಿಕ್ಷಕನ ವಿರುದ್ಧ ಎಸ್ ಸಿ-ಎಸ್ ಟಿ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Join Whatsapp