ಕೊಳವೆ ಬಾವಿಗೆ ನೀರು ತರಲು ಹೋಗಿದ್ದ ದಲಿತ ವ್ಯಕ್ತಿಯನ್ನು ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿ ಕೊಲೆ

Prasthutha|

ಜೋಧಪುರ: ಗ್ರಾಮದಲ್ಲಿರುವ ಕೊಳವೆ ಬಾವಿಗೆ ನೀರು ತರಲು ಹೋಗಿದ್ದ ದಲಿತ ಸಮುದಾಯದ ವ್ಯಕ್ತಿಯ ಮನೆಗೆ ನುಗ್ಗಿ ಗುಂಪೊಂದು ಕಟ್ಟಿಗೆ ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಿದ ಘಟನೆ ರಾಜಸ್ಥಾನದ ಸೂರ್ಸಾಗರದ ಭೋಮಿಯಾಜಿ ಕಿ ಘಾಟಿಯಲ್ಲಿ ನಡೆದಿದೆ.

- Advertisement -


ಕಿಶನ್ ಲಾಲ್ ಭೀಲ್ (46) ಮೃತಪಟ್ಟ ದುರ್ದೈವಿ.


ಕೊಳವೆ ಬಾವಿ ಮೇಲೆ ನಿಯಂತ್ರಣ ಹೊಂದಿರುವ ಗ್ರಾಮದ ಕೆಲವು ಮಂದಿ ಅದಕ್ಕೆ ಪಂಪ್ಸೆಟ್ ಕೂಡ ಅಳವಡಿಸಿದ್ದರು. ಗ್ರಾಮದ ಇತರ ನಿವಾಸಿಗಳಿಗೆ ಬಾವಿಯ ನೀರು ಬಳಸಲು ಅವಕಾಶ ನೀಡುತ್ತಿರುತ್ತಿಲ್ಲ ಮಾತ್ರವಲ್ಲ ನೀರು ತೆಗೆದರೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕಿಶನ್ ಲಾಲ್ ಭೀಲ್ ಎಂಬವರು ಕೊಳವೆ ಬಾವಿಯಿಂದ ನೀರು ತೆಗೆದಿದ್ದಕ್ಕಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ.

- Advertisement -

ಯುವಕನಿಗೆ ಹಲ್ಲೆ ನಡೆಸಿದ್ದಲ್ಲದೆ, ಗಂಭೀರವಾಗಿ ಗಾಯಗೊಂಡಿದ್ದ ಭೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಆರೋಪಿಗಳು ಅವಕಾಶ ನೀಡಲಿಲ್ಲ. ಪೊಲೀಸರು ಬಂದ ನಂತರ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ಭೀಲ್ ಅವರ ಸಹೋದರ ಅಶೋಕ್ ಆರೋಪಿಸಿದ್ದಾರೆ.

ಘಟನೆ ಸಂಬಂಧ ಶಕೀಲ್, ನಾಸೀರ್ ಮತ್ತು ಬಬ್ಲು ಎಂಬುವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಐಪಿಸಿ ಸೆಕ್ಷನ್ 302ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಸೂರ್ಸಾಗರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಗೌತಮ್ ದೊತಾಸರಾ ಹೇಳಿದ್ದಾರೆ.

ಘಟನೆ ಖಂಡಿಸಿ ಭೀಲ್ ಅವರ ಕುಟುಂಬದ ಸದಸ್ಯರು ಹಾಗೂ ಸಮುದಾಯದವರು ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನೆಲ್ಲಾ ಕೂಡಲೇ ಬಂಧಿಸಬೇಕು. ಮೃತರ ಕುಟುಂಬದವರಿಗೆ ಹಣಕಾಸಿನ ನೆರವು ಹಾಗೂ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರುವವರೆಗೂ ಮೃತರ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಮರಣೋತ್ತರ ಪರೀಕ್ಷೆ ನಡೆಸಲು ಅನುವು ಮಾಡಿಕೊಡುವಂತೆ ಕುಟುಂಬದ ಸದಸ್ಯರಿಗೆ ಮನವಿ ಮಾಡಿದ್ದೇವೆ. ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಿದ್ದೇವೆ ಎಂದು ಪೊಲೀಸ್ ಠಾಣೆಯ ಅಧಿಕಾರಿ ಗೌತಮ್ ದೊತಾಸರಾ ತಿಳಿಸಿದ್ದಾರೆ.

Join Whatsapp