ಕೇವಲ ಮಿಸ್ಡ್ ಕಾಲ್ ಮೂಲಕ ಸೈಬರ್ ದರೋಡೆ: ಬ್ಯಾಂಕ್ ಖಾತೆಯಿಂದ 50 ಲಕ್ಷ ರೂ. ಮಾಯ

Prasthutha|

ಹೊಸದಿಲ್ಲಿ: ಕೇವಲ ಮಿಸ್ಡ್ ಕಾಲ್‌ ಮೂಲಕ ಸೈಬರ್ ವಂಚಕರು ಭದ್ರತಾ ಸೇವೆಗಳ ಕಂಪೆನಿಯೊಂದರ ನಿರ್ದೇಶಕರ ಬ್ಯಾಂಕ್ ಖಾತೆಯಿಂದ 50 ಲಕ್ಷ ರೂಪಾಯಿ ಮೊತ್ತವನ್ನು ಎಗರಿಸಿದ ಘಟನೆ ದಕ್ಷಿಣ ದಿಲ್ಲಿಯಲ್ಲಿ ನಡೆದಿದೆ.
ಭಾರತದಲ್ಲಿ ವ್ಯಕ್ತಿಯೊಬ್ಬನ ಖಾತೆಯಿಂದ ಸೈಬರ್ ಕ್ರಿಮಿನಲ್‌ಗಳು ಎಗರಿಸಿದ ಗರಿಷ್ಠ ಮೊತ್ತದ ಪ್ರಕರಣವಾಗಿದೆ.

- Advertisement -

ಈ ವಂಚನೆಯ ಸೂತ್ರಧಾರಿಗಳು ಜಾರ್ಖಂಡ್ ರಾಜ್ಯದ ಜಮ್ತಾರ ಪಟ್ಟಣದವರು ಎಂದು ತನಿಖೆಯಿಂದ ತಿಳಿದು ಬಂದಿದೆ. ಹಣ ಸ್ವೀಕರಿಸಿದವರು ತಮ್ಮ ಖಾತೆಗಳನ್ನು ಕಮಿಶನ್ ಆಧಾರದಲ್ಲಿ ವಂಚಕರಿಗೆ ಬಾಡಿಗೆಗೆ ಕೊಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ವ್ಯಕ್ತಿ, ಕೆಲವು ದಿನಗಳ ಹಿಂದೆ ಸಂಜೆ 7 ಗಂಟೆಯಿಂದ ರಾತ್ರಿ 8:45ರ ನಡುವಿನ ಅವಧಿಯಲ್ಲಿ ಮಿಸ್ಡ್ ಕಾಲ್‌ಗಳು ಬಂದಿತ್ತು. ಅವುಗಳಲ್ಲಿ ಕೆಲವು ಕರೆಗಳನ್ನು ಮಾತ್ರ ಸ್ವೀಕರಿಸಿದ್ದು, ಕರೆ ಮಾಡಿದ ಮಾತನಾಡುತ್ತಿರದ ಕಾರಣದಿಂದ ಕೆಲವು ಕರೆಗಳನ್ನು ನಿರ್ಲಕ್ಷಿಸಿದ್ದೆ. ಬಳಿಕ ಫೋನ್ ಪರಿಶೀಲಿಸಿದಾಗ ಸುಮಾರು 50 ಲಕ್ಷ ರೂಪಾಯಿ ಮೊತ್ತವು ಆರ್‌ಟಿಜಿಎಸ್ ಮೂಲಕ ವರ್ಗಾವಣೆಯಾಗಿರುವುದನ್ನು ಕಂಡು ಗಾಬರಿಗೊಂಡಿದ್ದೇನೆ ಎಂದು ಹೇಳಿದ್ಧಾರೆ.

- Advertisement -

ಆರಂಭಿಕ ಪರಿಶೀಲನೆಯ ವೇಳೆ, 12 ಲಕ್ಷ ರೂಪಾಯಿ ಭಾಸ್ಕರ್ ಮಂಡಲ್ ಎಂಬಾತನ ಖಾತೆಗೆ, 4.6 ಲಕ್ಷ ರೂಪಾಯಿ ಅವಿಜಿತ್ ಗಿರಿ ಎಂಬಾತನ ಖಾತೆಗೆ ಹೋಗಿರುವುದು ತಿಳಿದು ಬಂತು. ತಲಾ ಸುಮಾರು 10 ಲಕ್ಷ ರೂಪಾಯಿ ಎರಡು ಖಾತೆಗಳಿಗೆ ಹೋಗಿದೆ. ಸಣ್ಣ ಮೊತ್ತಗಳ ಇತರ ಹಲವಾರು ವ್ಯವಹಾರಗಳೂ ನಡೆದಿವೆ. ಆದರೆ ಈ ಮಧ್ಯೆ ನನಗೆ ಬ್ಯಾಂಕ್‌ನಿಂದ ಯಾವುದೇ ಒಟಿಪಿ ಬಂದಿಲ್ಲ ಎಂದು ತಿಳಿಸಿದ್ಧಾರೆ.

ಸಾಮಾನ್ಯವಾಗಿ, ಹಣ ವರ್ಗಾವಣೆಗೆ ಬ್ಯಾಂಕ್‌ಗಳಲ್ಲಿ ನಿರ್ಬಂಧಗಳಿರುವುದರಿಂದ, ಸೈಬರ್ ವಂಚಕರು ಸಾವಿರಗಳ ಲೆಕ್ಕದಲ್ಲಿ ಸಣ್ಣ ಮೊತ್ತವನ್ನು ಅಪಹರಿಸುವುದಲ್ಲಿ ಯಶಸ್ವಿಯಾಗುತ್ತಾರೆ. ಆದರೆ, ದುರದೃಷ್ಟವಶಾತ್, ಈ ಪ್ರಕರಣದಲ್ಲಿ ಸಂತ್ರಸ್ತ ವ್ಯಕ್ತಿಯು ಕರೆಂಟ್ ಅಕೌಂಟ್ ನಲ್ಲಿ ಹಣವನ್ನು ಇಟ್ಟಿದ್ದರು. ಹಾಗಾಗಿ, ಬೃಹತ್ ಮೊತ್ತದ ಹಣವನ್ನು ಯಾವುದೇ ಅಡೆತಡೆಯಿಲ್ಲದೆ ವರ್ಗಾಯಿಸಲು ವಂಚಕರಿಗೆ ಸಾಧ್ಯವಾಗಿದೆ.

ಕೇವಲ ಫೋನ್ ಕರೆಗಳನ್ನು ಮಾಡಿ ಹಣ ಎಗರಿಸುವಲ್ಲಿ ಯಶಸ್ವಿಯಾಗಿರುವ ಸೈಬರ್ ಕಳ್ಳರು ‘ಸಿಮ್ ಸ್ವ್ಯಾಪ್’ ತಂತ್ರವನ್ನು ಬಳಸಿ ವಂಚನೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

‘‘ಈ ವಂಚನಾ ವಿಧಾನದಲ್ಲಿ, ವಂಚಕರು ಸಂತ್ರಸ್ತರ ಮೊಬೈಲ್ ಸೇವೆ ಪೂರೈಕೆದಾರ ಕಂಪೆನಿಯನ್ನು ಸಂಪರ್ಕಿಸಿ ಸಂತ್ರಸ್ತನ ಮೊಬೈಲ್ ಸಂಖ್ಯೆಯನ್ನೇ ಹೊಂದಿರುವ ಬೇರೆ ಸಿಮ್ ಕಾರ್ಡ್‌ಗೆ ಚಾಲನೆ ನಿಡುವಂತೆ ಕೋರುತ್ತಾರೆ. ಹಾಗೂ ವಂಚನಾ ವಿಧಾನಗಳ ಮೂಲಕ ಈ ಪ್ರಕ್ರಿಯೆಯ ಶರತ್ತುಗಳನ್ನು ಪೂರೈಸುತ್ತಾರೆ. ಇದಾದ ಬಳಿಕ ಅವರು ಸಂತ್ರಸ್ತನ ಫೋನ್‌ನ ನಿಯಂತ್ರಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ‘‘ಫೋನ್ ಅಪಹರಣ ಸೇರಿದಂತೆ ಇತರ ವಿಧಾನಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp