ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಮಾಡಿರುವ ಸಿ.ಟಿ.ರವಿ: ಎಂ.ಲಕ್ಷ್ಮಣ್ ಆರೋಪ

Prasthutha|

►ಸಿ.ಟಿ.ರವಿ ಚರಿತ್ರೆ ಬಿಚ್ಚಿಟ್ಟ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ 

- Advertisement -

►ರಿಪಬ್ಲಿಕ್ ಆಫ್ ಚಿಕ್ಕಮಗಳೂರು ಮಾಡಿಕೊಂಡಿರುವ ಸಿ.ಟಿ.ರವಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಳಿ 1996ರಿಂದ 1999ರವರೆಗೆ ಅವರ ಬಳಿ ಏನೂ ಇರಲಿಲ್ಲ. ಅವರು ರೌಡಿಶೀಟರ್ ಆಗಿದ್ದು, ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಇವರ ರೌಡಿ ಶೀಟರ್ ಪಟ್ಟಿಯಲ್ಲಿತ್ತು. ಇದು ಇತ್ತೀಚಿನವರೆಗೂ ಹೆಸರಿತ್ತು. ಈಗ ಅದನ್ನು ತೆಗೆಸಿದ್ದಾರೆ. ಈಗ ಅವರಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಇದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಅವರ ಮೇಲೆ 4 ಕ್ರಿಮಿನಲ್ ಮೊಕದ್ದಮೆಗಳಿವೆ. ಅವರು ಚುನಾವಣಾ ಅಫಿದವಿಟ್’ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ನಮೂದಿಸಿದ್ದಾರೆ. ಐಪಿಸಿ ಸೆಕ್ಷನ್ 409, 420, 120, 463, 466, 123 ಅಡಿಲ್ಲಿ ಕೇಸು ದಾಖಲಾಗಿವೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಸೇರಿದಂತೆ ಅನೇಕ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿವೆ. ಅವರೇ ನಮೂದಿಸಿರುವ ಹಿನ್ನೆಲೆಯಲ್ಲಿ ನಾನು ಇನ್ನುಮುಂದೆ ಅವರನ್ನು ಕ್ರಿಮಿನಲ್ 420 ರವಿ ಎಂದು ಕರೆಯುತ್ತೇನೆ ಎಂದು ಹೇಳಿದರು.

ಇವರು ಚಿಕ್ಕಮಗಳೂರು ಜಿಲ್ಲೆಯನ್ನು ರಿಪಬ್ಲಿಕ್ ಆಫ್ ಚಿಕ್ಕಮಗಳೂರು ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನ ಶೇ.95ರಷ್ಟು ಕಾಮಗಾರಿಗಳನ್ನು ಇವರ ಭಾವ ಎಚ್.ಪಿ ಸುದರ್ಶನ್ ಅವರೇ ಪಡೆದಿದ್ದಾರೆ. ಕೆಲವನ್ನು ಅವರ ಹೆಸರಿನಲ್ಲಿ ಪಡೆದರೆ ಮತ್ತೆ ಕೆಲವು ಬೇನಾಮಿ ಹೆಸರಲ್ಲಿ ಪಡೆದಿದ್ದಾರೆ. ಚಿಕ್ಕಮಗಳೂರು ಮೆಡಿಕಲ್ ಕಾಲೇಜು ನಿರ್ಮಾಣದ ಒಟ್ಟಾರೆ ಮೊತ್ತ 350 ಕೋಟಿ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 190 ಕೋಟಿ ಕಾಮಗಾರಿಯನ್ನು ಸುದರ್ಶನ್ ಅವರೇ ಮಾಡುತ್ತಿದ್ದಾರೆ. ಬಾಲಾಜಿ ಶೇಖರ್ ಎಂಬ ಗುತ್ತಿಗೆದಾರರ ಜತೆ ಸಹಭಾಗಿತ್ವದಲ್ಲಿ ಮಾಡುತ್ತಿದ್ದಾರೆ. ಇದಕ್ಕೆ ಟೆಂಡರ್ ಹಾಕಲು ಈ ಯೋಜನೆಯ ಮೊತ್ತದ ಅರ್ಧದಷ್ಟು ಯೋಜನೆಯನ್ನು ಮಾಡಿರಬೇಕು. ಆದರೆ ಇವರು ಮಾಡದ ಕಾರಣ ರಾಮಲಿಂಗಂ ಕನ್ಟ್ರಕ್ಷನ್ ಅವರ ಸಹಾಯ ಪಡೆದಿದ್ದಾರೆ. ಇದರ ಜತೆಗೆ ಬಸವರಳ್ಳಿ ಕೆರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ 36 ಕೋಟಿ ಅನುದಾನ ನೀಡಿದೆ. ಇದು ಕೂಡ ಸುದರ್ಶನ್ ಅವರೇ ತೆಗೆದುಕೊಂಡಿದ್ದಾರೆ. ಈ ಕೆರೆ ಹೂಳು ತೆಗೆಯಲು 7.5 ಕೋಟಿ ಪಡೆದಿದ್ದಾರೆ. ಈ ಹೂಳು ಮಳೆಯಲ್ಲಿ ಕೊಚ್ಚಿ ಹೋಗಿದೆಯಂತೆ. ಇನ್ನು 60 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಇವರು ಬೇನಾಮಿ ಹೆಸರಲ್ಲಿ ಮಾಡುತ್ತಿದ್ದಾರೆ. ಇನ್ನು ಮುಂದಿನ ತಿಂಗಳು ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಆರಂಭವಾಗುತ್ತಿದ್ದು, ಪ್ರಹ್ಲಾದ್ ಜೋಷಿ ಅವರಿಂದ ಈ ಗುತ್ತಿಗೆಯನ್ನು ಸುದರ್ಶನ್ ಅವರಿಗೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ನೇರ ಆರೋಪ ಮಾಡಿದರು.

ರವಿ ಅವರ ತಂದೆ ಹೆಸರು ತಿಮ್ಮೇಗೌಡರು, ಅವರು ರೈತರು, ಹತ್ತಿಕಟ್ಟೆ ಜಗನ್ನಾಥ್ ಎಂಬುವವರ ಮನೆಯಲ್ಲಿ ಟ್ರ್ಯಾಕ್ಟರ್ ಚಾಲಕರಾಗಿದ್ದರು. ಈಗ ಜಗನ್ನಾಥ್ ಅವರನ್ನೇ ತನ್ನ ಡ್ರೈವರ್ ಆಗಿ ಮಾಡಿಕೊಳ್ಳುವುದಾಗಿ ರವಿ ಅವರು ಹೇಳಿದ್ದಾರೆ.

ಸುದರ್ಶನ್ ಅವರು ಡಿಸಿ, ಪೊಲೀಸ್ ಕಮಿಷನರ್, ಎಸ್ ಪಿ, ಡಿವೈಎಸ್ ಪಿಗಳಿಗೆ ಕರೆ ಮಾಡಿ ಅವರನ್ನು ತಮ್ಮ ಮನೆಗೆ ಕರೆಸಿ ಅನಧಿಕೃತ ಸಭೆ ಮಾಡುತ್ತಾರೆ. ಅವರ ನಿರ್ದೇಶನದಂತೆ ಅಧಿಕಾರಿಗಳು ಕೆಲಸ ಮಾಡುತ್ತಾರೆ. ನಮ್ಮ ಮಾಹಿತಿ ಪ್ರಕಾರ ಬೇನಾಮಿ ಹೆಸರಲ್ಲಿ ದುಬೈನಲ್ಲಿ 2 ಹೋಟೆಲ್, ದೇವನಹಳ್ಳಿಯಲ್ಲಿ 2-3 ಅಪಾರ್ಟ್ ಮೆಂಟ್, ಎಚ್ಎಎಲ್ ರಸ್ತೆ ಬಳಿ 10 ಮನೆಗಳಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದೆಲ್ಲವೂ ಹೇಗೆ ಬಂತು ಎಂಬುದನ್ನು 100ಕ್ಕೆ 100ರಷ್ಟು ಮಾಡುತ್ತೇವೆ. ಸಿ.ಟಿ ರವಿ ಎಂಬ ಪ್ರಬಲ ವ್ಯಕ್ತಿಯ ಚರಿತ್ರೆಯನ್ನು ನಾವು ಜನರ ಮುಂದೆ ಇಡಬೇಕು. ಅವರು ಇಂದು 3 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಬೇನಾಮಿ ಹೆಸರಲ್ಲಿದೆ. ಚಿಕ್ಕಮಗಳೂರಿನಲ್ಲಿ ಯಾವುದೇ ಕಾಮಗಾರಿ, ಯಾರೇ ಮನೆ ಕಟ್ಟಬೇಕಾದರೆ ಸುದರ್ಶನ್ ಅವರ ಅಂಗಡಿಯಲ್ಲೇ ಸಿಮೆಂಟ್, ಇಟ್ಟಿಗೆ ಹಾಗೂ ಸೀಮೆಂಟ್ ಖರೀದಿ ಮಾಡಬೇಕು ಎಂದು ಎಂ.ಲಕ್ಷ್ಮಣ್ ಹೇಳಿದರು.

1996ರಿಂದ ಇಂದಿಗೂ ದತ್ತ ಜಯಂತಿ ನಡೆಯುವಾಗ ಈತ ವಸೂಲಿ ಮಾಡುತ್ತಿದ್ದಾರೆ. ಹಣ ನೀಡದವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ.  ಪ್ರತಿ ಅಂಗಡಿಯಲ್ಲಿ ಈಗಲೂ ವಸೂಲಿ ಇಟ್ಟುಕೊಂಡಿದ್ದಾರೆ. ರವಿ ಅವರೇ ನಿಮ್ಮ ಸರ್ಕಾರವೇ ಬೇನಾಮಿ ಕಾಯ್ದೆ ತಂದಿದೆ. ನೀವು ಕೂಡ ಉನ್ನತ ಮಟ್ಟದ ತನಿಖೆ ನಡೆಸಿ. ನೀವು ಮಾತೆತ್ತಿದರೆ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಮಾತನಾಡುತ್ತೀರಿ. ನೀವು ಸತ್ಯವಂತರಾಗಿದ್ದರೆ ನಿಮ್ಮ ಆದಾಯ, ಆಸ್ತಿಗಳು ಎಲ್ಲಿಂದ ಹೇಗೆ ಬಂತು ಎಂದು ತನಿಖೆ ಮಾಡಿಸಿ ಎಂದು ಎಂ.ಲಕ್ಷ್ಮಣ್ ಸವಾಲು ಹಾಕಿದರು.

ಇದು ಕೇವಲ ಪ್ರಾಸ್ತಾವಿಕ ಸಂಚಿಕೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಚಿಕೆಗಳಲ್ಲಿ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ನಾನು ಬೇಕಾದರೆ ನಿಮ್ಮ ಕಚೇರಿಗೆ ಒಬ್ಬನೇ ಬರುತ್ತೇನೆ. ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ. ನಿಮ್ಮ ಇತಿಹಾಸವೇನು? 20 ವರ್ಷ ನೀವು ಏನಾಗಿದ್ದಿರಿ? ನಿಮ್ಮ ವಿರುದ್ಧ ಯಾವ ಕಾರಣಕ್ಕೆ ಕ್ರಿಮಿನಲ್ ಪ್ರಕರಣಗಳಿವೆ? ಯಾವ ಕಾರಣಕ್ಕೆ ನೀವು ರೌಡಿ ಶೀಟರ್ ಆಗಿದ್ದೀರಿ? ರೌಡಿಶೀಟರ್ ಯಾಕೆ ಸಮರ್ಥಿಸಿಕೊಂಡಿದ್ದೀರಿ? ಎಂದು ಚರ್ಚೆ ಆಗಲಿ. ಇಲ್ಲದಿದ್ದರೆ ಈ ಬಗ್ಗೆ ತನಿಖೆ ಮಾಡಿಸಿ ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.

ಚಿಕ್ಕಮಗಳೂರು ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿ ಗುತ್ತಿಗೆಗೆ ಬೇರೆಯವರು ಶೇ.100ಕ್ಕಿಂತ ಹೆಚ್ಚಿನ ಮೊತ್ತವನ್ನು ಬಿಡ್ ಮಾಡಿದ್ದಾರೆ. ಹೆಚ್ಚಿನ ಮೊತ್ತ ಬಿಡ್ ಮಾಡಿದವರಿಗೆ ಬಿಟ್ಟು ನಿಮ್ಮ ಭಾವನವರಿಗೆ ಹೇಗೆ ಗುತ್ತಿಗೆ ಸಿಗುವಂತೆ ಮಾಡಿದ್ದೀರಿ? ನೀವು ಹಿಟ್ ಅಂಡ್ ರನ್ ಮಾಡಬಾರದು. ನಾವು ಕೇಳುವ ಪ್ರಶ್ನೆಗೆ ನೇರ ಉತ್ತರ ನೀಡಬೇಕು. ನಿಮ್ಮ ವಿರುದ್ಧ ಮೋಸ ಪ್ರಕರಣ, ಕ್ರಿಮಿನಲ್ ಕೇಸ್ ಯಾಕೆ ಹಾಕಿದ್ದಾರೆ? ಅದು ಮುಕ್ತಾಯವಾಗಿದೆಯಾ? ಎಂದು ಚರ್ಚೆ ಮಾಡೋಣ ಎಂದು ಅವರು ಹೇಳಿದರು.

Join Whatsapp