ಪ್ರೀತಿಗೆ ಬಿದ್ದ ವಿವಾಹಿತರಿಂದ ವಿಷ ಸೇವನೆ: ಮಹಿಳೆ ಸಾವು, ಪುರುಷನ ಸ್ಥಿತಿ ಗಂಭೀರ

Prasthutha|

ಕುಶಾಲನಗರ: ಪ್ರೀತಿಗೆ ಬಿದ್ದ ವಿವಾಹಿತರಿಬ್ಬರು ಸ್ವಗ್ರಾಮದಿಂದ ಬಂದು ಒಂದು ತಿಂಗಳು ಸಂಸಾರ ನಡೆಸಿದ್ದು, ಆನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೆಬ್ಬಾಲೆಯಲ್ಲಿ ನಡೆದಿದೆ. ವಿಷ ಸೇವನೆಯಿಂದ ಮಹಿಳೆ ವಿದ್ಯಾ ಸಾವನ್ನಪ್ಪಿದರೆ, ವಿಶ್ವನಾಥ್ ಸ್ಥಿತಿ ಚಿಂತಾಜನಕವಾಗಿದೆ.

- Advertisement -

ಘಟನೆಯ ವಿವರ: ಮೂಲತಃ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ವಿಶ್ವನಾಥ್ (35) ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಚಿಕ್ಕನೇರಳೆ ಗ್ರಾಮದ ವಿದ್ಯಾ ( 29) ಎಂಬವರಿಗೂ ಎರಡು ಮಕ್ಕಳಿದ್ದಾರೆ. ವಿದ್ಯಾ ಗಾರೆ ಕೆಲಸಕ್ಕೆಂದು ವಿಶ್ವನಾಥ್ ಬಳಿ ತೆರಳಿದ ಸಂದರ್ಭ ಇಬ್ಬರ ನಡುವೆ ಪ್ರೀತಿ ಮೂಡಿದೆ. ಇಬ್ಬರು ಕೂಡ ಸಂಗಾತಿ, ಕುಟುಂಬ, ಮಕ್ಕಳು, ಊರನ್ನು ತೊರೆದು ಕುಶಾಲನಗರ ಬಳಿಯ ಸುಂದರನಗರಕ್ಕೆ ಓಡಿ ಬಂದಿದ್ದಾರೆ. ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಂದು ತಿಂಗಳ ಕಾಲ ಜೀವನ ನಡೆಸಿದ್ದಾರೆ. ಸೋಮವಾರ ಸಂಜೆ ವಿಶ್ವನಾಥನ ಕಾರಿನಲ್ಲಿ ಮನೆಯಿಂದ ಹೊರಟ ಇಬ್ಬರು ಹೆಬ್ಬಾಲೆ ಬಳಿ ಕಾರಿನಲ್ಲಿಯೇ ವಿಷ ಸೇವಿಸಿದ್ದಾರೆ.

ಬಳಿಕ ವಿಶ್ವನಾಥ್ ಹೆಬ್ಬಾಲೆಯ ಸ್ನೇಹಿತನೊಬ್ಬನಿಗೆ ಕರೆಮಾಡಿ ತಾವು ವಿಷ ಸೇವಿಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಆತನ ಸ್ನೇಹಿತ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಕೂಡ ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ವಿದ್ಯಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರೆ, ವಿಶ್ವನಾಥನ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp