ಸುಧಾಕರ್ ಸೇರಿ 6 ಸಚಿವರ ವಜಾಕ್ಕೆ ಕಾಂಗ್ರೆಸ್ ಶಾಸಕಿಯರ ಆಗ್ರಹ | ‘ಅವರು ಶಾಸಕರಾಗಿರಲು ಯೋಗ್ಯರಲ್ಲ’ !

Prasthutha|

ಬೆಂಗಳೂರು: ಸಿಡಿ ಪ್ರಕರಣದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ತಮ್ಮ ಹೆಗಲು ತಾವೇ ಮುಟ್ಟುಕೊಂಡಿರುವ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿರುವ 6 ಸಚಿವರು ತಮ್ಮ ಸ್ಥಾನದ ಜತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್, ಶಾಸಕಿಯರ ಸಮೂಹ ಆಗ್ರಹಿಸಿದೆ.

- Advertisement -

ಸಚಿವ ಸುಧಾಕರ್ ಅವರ ಹೇಳಿಕೆ ವಿಚಾರವಾಗಿ ಗುರುವಾರ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹಾಗೂ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯಾರೆಡ್ಡಿ, ಕುಸುಮಾ ಶಿವಳ್ಳಿ ಹಾಗೂ ರೂಪಾ ಶಶಿಧರ್ ಅವರು ಜಂಟಿ ಪತ್ರಿಕಾಗೋಷ್ಠಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಪುಷ್ಪಾ ಅಮರನಾಥ್ ಅವರು, ಸಿಡಿ ಪ್ರಕರಣದಲ್ಲಿ 6 ಸಚಿವರುಗಳು ತಡೆಯಾಜ್ಞೆ ತರುವ ಮೂಲಕ ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸೇರಿದಂತೆ ನಮ್ಮ ಪಕ್ಷದ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

- Advertisement -

ಇವರು ನೈತಿಕತೆ, ಯೋಗ್ಯತೆ ಕಳೆದುಕೊಂಡಿದ್ದು, ಕೇವಲ ಸಚಿವ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು. ಇವರಿಗೆ ಮತ್ತೆ ಅವಕಾಶವೇ ನೀಡಬಾರದು. ಇವರು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ. ಲಂಚಕ್ಕೆ ಮಂಚಕ್ಕೆ ಹೆಸರಾಗಿರುವ ಸರ್ಕಾರದ ನಾಲಾಯಕ್ ಸಚಿವರು ಈ ರೀತಿ ಹೇಳಿಕೆ ನೀಡಿದ್ದಾರೆ.

ಸಚಿವ ಸುಧಾಕರ್ ಅವರಿಗೆ ತಮ್ಮ ಹೆತ್ತ ತಾಯಿ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಇವರು ರಾಜೀನಾಮೆ ನೀಡದಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಅವರನ್ನು ವಜಾ ಮಾಡಿ ಮನೆಗೆ ಕಳುಹಿಸಬೇಕು. ಇಂತಹ ಸಚಿವರನ್ನು ಸಂಪುಟದಲ್ಲಿಟ್ಟುಕೊಂಡು ಹೇಗೆ ಕೆಲಸ ಮಾಡುತ್ತಾರೆ? 225 ಶಾಸಕರ ಬಗ್ಗೆ ಪ್ರಶ್ನೆ ಎತ್ತಿದಾಗ ಸ್ಪೀಕರ್ ಅವರೂ ಕೂಡ ಸೇರಿಕೊಳ್ಳುತ್ತಾರೆ. ಅವರ ಘನತೆ ಏನಾಗಬೇಕು? ಸ್ಪೀಕರ್ ಅವರು ಏನು ಮಾಡುತ್ತಿದ್ದಾರೆ? ಅವರಾದರೂ ಈ ಸಚಿವರನ್ನು ಶಾಸಕ ಸ್ಥಾನದಿಂದಲೇ ವಜಾ ಮಾಡಬೇಕು.

Join Whatsapp