ನವದೆಹಲಿ । ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್’ನಿಂದ ‘ಮೆಹೆಂಗಾಯಿ ಮುಕ್ತ್ ಭಾರತ್’ ರಾಷ್ಟ್ರೀಯ ಅಭಿಯಾನ

Prasthutha|

ನವದೆಹಲಿ: ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್’ನಿಂದ ಶನಿವಾರ ಮೂರು ಹಂತದ ರಾಷ್ಟ್ರೀಯ ಅಭಿಯಾನವನ್ನು ಘೋಷಿಸಿದ್ದು, ‘ಮೇಹೆಂಗಾಯಿ ಮುಕ್ತ್ ಭಾರತ್ ಅಭಿಯಾನ’ ಅಡಿಯಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 7 ರವರೆಗೆ ದೇಶಾದ್ಯಂತ ಜಾಥಾವನ್ನು ಆಯೋಜಿಸಿದೆ.

- Advertisement -

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರೆ ರಣದೀಪ್ ಸುರ್ಜೇವಾಲಾ ಅವರು ಮೊದಲ ಹಂತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾಮಾನ್ಯ ಜನರೊಂದಿಗೆ ಸೇರಿಕೊಂಡು ಮಾರ್ಚ್ 31 ರಂದು ಪ್ರತಿ ಮನೆಗಳ ಹೊರಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಜನರು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹಾರ ಹಾಕಿ, ಡ್ರಮ್ ಬಾರಿಸುತ್ತಾರೆ. ಆ ಮೂಲಕ ಹಣದುಬ್ಬರದ ಸಮಸ್ಯೆಯನ್ನು ಎತ್ತಿ ತೋರಿಸುತ್ತಿದ್ದಾರೆ. ಅಂತೆಯೇ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಹೆಚ್ಚಳದ ವಿರುದ್ಧ ಕಿವುಡ ಬಿಜೆಪಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದ್ದಾರೆ.

- Advertisement -

“ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳೊಂದಿಗೆ ಸಮಾಲೋಚಿಸಿ, ಮೂರು-ಹಂತದ ಕಾರ್ಯಕ್ರಮದಲ್ಲಿ – ಮೆಹಂಗೈ-ಮುಕ್ತ್ ಭಾರತ್ ಅಭಿಯಾನ್‌ನಲ್ಲಿ ಜನರ ಪರವಾಗಿ ಹೋರಾಡಲು ನಿರ್ಧರಿಸಿದ್ದಾರೆ” ಎಂದು ಸುರ್ಜೆವಾಲಾ ಹೇಳಿದ್ದಾರೆ.

ಏಪ್ರಿಲ್ 2 ರಿಂದ ಏಪ್ರಿಲ್ 4 ರವರೆಗೆ, ಕಾಂಗ್ರೆಸ್, ಎನ್‌ಜಿಒಗಳು, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು ಮತ್ತು ನಿವಾಸಿ ಕಲ್ಯಾಣ ಸಂಸ್ಥೆಗಳೊಂದಿಗೆ ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಧರಣಿ ಮತ್ತು ಮೆರವಣಿಗೆಗಳನ್ನು ಆಯೋಜಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 7 ರಂದು, ಪಕ್ಷವು ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು, ಎನ್‌ಜಿಒಗಳು ಮತ್ತು ಜನರ ಸಹಾಯದಿಂದ “ಮೆಹಂಗೈ-ಮುಕ್ತ್ ಭಾರತ್” ಧರಣಿ ಮತ್ತು ಮೆರವಣಿಗೆಗಳನ್ನು ಎಲ್ಲಾ ರಾಜ್ಯ ಪ್ರಧಾನ ಕಚೇರಿಗಳಲ್ಲಿ ಆಯೋಜಿಸುತ್ತದೆ ಎಂದು ಸುರ್ಜೆವಾಲಾ ಹೇಳಿದರು.



Join Whatsapp