ಎಲ್ಲಾ ವರ್ಗದ ಜನರಿಗೆ ಸೇವೆ ನೀಡಲು ಬದ್ಧ: ಇನಾಯತ್ ಅಲಿ

Prasthutha|

ಮಂಗಳೂರು: ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಂದು ಮನೆಗೆ ತಲುಪಿಸಲು ಮಂಗಳೂರು ಉತ್ತರ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯೋನ್ಮುಖರಾಗಿದ್ದಾರೆ. ಎಲ್ಲಾ ವರ್ಗದ ಜನರಿಗೆ ಪ್ರಾಮಾಣಿಕವಾಗಿ ಸೇವೆಯನ್ನು ತಲುಪಿಸಲು ಬದ್ಧರಾಗಿದ್ದೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದರು.

- Advertisement -

ಗುರುಪುರ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ ಗ್ಯಾರಂಟಿ ಯೋಜನೆಗಳ ನೋಂದಣಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದೆ. ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೊಂಡಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭಗೊಂಡಿವೆ, ಮುಂದಿನ ತಿಂಗಳಿನಿಂದ ಹಣ ಜಮಾ ಆಗಲಿದೆ. ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಂದು ಮನೆಗೆ ತಲುಪಿಸಲು ಮಂಗಳೂರು ಉತ್ತರ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯನ್ಮುಖರಾಗಿದ್ದಾರೆ. ಕ್ಷೇತ್ರದ ಪ್ರತಿ ವಲಯ ಮತ್ತು ವಾರ್ಡ್ ಮಟ್ಟದಲ್ಲಿ ಇಂದಿರಾ ಸೇವಾ ಕೇಂದ್ರವನ್ನು ಆರಂಭಿಸಿದ್ದೇವೆ. ಎಲ್ಲಾ ವರ್ಗದ ಜನರಿಗೆ ಪ್ರಾಮಾಣಿಕವಾಗಿ ಸೇವೆಯನ್ನು ತಲುಪಿಸಲು ಬದ್ಧರಾಗಿದ್ದೇವೆ ಎಂದು ಇನಾಯತ್ ಅಲಿ ತಿಳಿಸಿದರು.

- Advertisement -

ಶುಕ್ರವಾರ ಹಾಗೂ ಶನಿವಾರದಂದು ದೇರೆಬೈಲ್ ಕೋಡಿಕಲ್, ಮುಕ್ಕ, ನೀರುಮಾರ್ಗ, ಬಿತ್ತುಪಾದೆ, ಪಣಂಬೂರು, ಬೈಕಂಪಾಡಿಯಲ್ಲಿ ಇಂದಿರಾ ಸೇವಾ ಕೇಂದ್ರಕ್ಕೆ ಇನಾಯತ್ ಅಲಿ ಚಾಲನೆ ನೀಡಿದರು‌.

ಕಾರ್ಯಕ್ರಮದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಗಿರೀಶ್ ಆಳ್ವ, ಯಶವಂತ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಕೃಷ್ಣ ಅಮೀನ್, ಸುನೀಲ್ ಗಂಜಿಮಠ, ಬಾಷ ಗುರುಪುರ, ಗಣೇಶ್ ಪೂಜಾರಿ, ಹರೀಶ್ ಭಂಡಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Join Whatsapp