ಜೆಡಿಎಸ್ ನಿಂದ ಬಂಡಾಯವೆದ್ದು ಬಿಜೆಪಿ ಬೆಂಬಲಿಸಿದ ನಗರಸಭೆ ಸದಸ್ಯರು ಅನರ್ಹರು: ಡಿಸಿ ನೀಡಿದ್ದ ತೀರ್ಪು ಎತ್ತಿಹಿಡಿದ ಹೈಕೋರ್ಟ್

Prasthutha|

ಹಾಸನ: ಜೆಡಿಎಸ್ ನಿಂದ ಬಂಡಾಯವೆದ್ದು, ಬಹುಮತವಿಲ್ಲದಿದ್ದರೂ ಮೀಸಲಾತಿ ಆಧಾರದ ಮೇಲೆ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಬೆಂಬಲಿಸಿದ ಅರಸೀಕೆರೆ ನಗರಸಭೆಯ ಏಳು ಸದಸ್ಯರನ್ನು ಜಿಲ್ಲಾಧಿಕಾರಿಗಳು ಅನರ್ಹಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿ ಏಳು ಮಂದಿ ನಗರಸಭೆ ಸದಸ್ಯರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸುದೀರ್ಘ ವಿಚಾರಣೆ ಬಳಿಕ ಉಚ್ಚ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ಜಿಲ್ಲಾಧಿಕಾರಿಯ ತೀರ್ಪುನ್ನು ಎತ್ತಿ ಹಿಡಿದಿದೆ.

- Advertisement -

ಅರಸೀಕೆರೆ ನಗರಸಭೆ ಒಂದನೇ ವಾರ್ಡ್ ಸದಸ್ಯ ಹರ್ಷವರ್ಧನ್ ರಾಜ್, 25ನೇ ವಾರ್ಡ್ ಸದಸ್ಯ ಬಿ.ಎನ್.ವಿದ್ಯಾಧರ್, 19ನೇ ವಾರ್ಡ್ನ ಸದಸ್ಯ ದರ್ಶನ್, 18ನೇ ವಾರ್ಡ್ ಸದಸ್ಯೆ ಕವಿತಾದೇವಿ, 28ನೇ ವಾರ್ಡ್ ಸದಸ್ಯೆ ಆಯೇಶಾ ಸಿಕಂದರ್, 9ನೇ ವಾರ್ಡ್ ಸದಸ್ಯ ಚಂದ್ರಶೇಖರ್ ಜೆಡಿಎಸ್ ನಿಂದ ಗೆದ್ದಿದ್ದು, ಆನಂತರದ ಬೆಳವಣಿಗೆಯಲ್ಲಿ ಜೆಡಿಎಸ್ ನಿಂದ ಬಂಡಾಯವೆದ್ದಿದ್ದರು

ಬಹುಮತವಿಲ್ಲದಿದ್ದರೂ ಮೀಸಲಾತಿ ಆಧಾರದ ಮೇಲೆ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಈ ಆರು ನಗರಸಭೆ ಸದಸ್ಯರು ಬೆಂಬಲ ನೀಡಿದ್ದರು. ಇವರ ಜೊತೆಗೆ 15ನೇ ವಾರ್ಡ್ ನಿಂದ ಪಕ್ಷೇತರ ಸದಸ್ಯನಾಗಿ ಆಯ್ಕೆಯಾಗಿದ್ದ ಪುಟ್ಟಸ್ವಾಮಿ ಮೊದಲು ಜೆಡಿಎಸ್ ಗೆ ಬೆಂಬಲ ಘೋಷಿಸಿದ್ದು, ಆ ನಂತರ ಜೆಡಿಎಸ್ ಗೆ ನೀಡಿದ್ದ ಬೆಂಬಲ ವಾಪಸ್ ಪಡೆದು ಆರು ಮಂದಿ ಸದಸ್ಯರ ಜೊತೆ ಪುಟ್ಟಸ್ವಾಮಿ ಕೂಡ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು.

- Advertisement -

ಏಳು ಮಂದಿ ಸದಸ್ಯರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ಇವರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಅರಸೀಕೆರೆ ಜೆಡಿಎಸ್ ತಾಲೂಕು ಅಧ್ಯಕ್ಷ ಬಿಳಿಚೌಡಯ್ಯ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಡಿಸಿ ಆರ್.ಗಿರೀಶ್ ಏಳು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ತೀರ್ಪು ನೀಡಿದ್ದರು.

ಜಿಲ್ಲಾಧಿಕಾರಿ ತೀರ್ಪನ್ನು ಪ್ರಶ್ನಿಸಿ ಏಳು ಮಂದಿ ನಗರಸಭೆ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದು, ಸುದೀರ್ಘ ವಿಚಾರಣೆ ಬಳಿಕ ಉಚ್ಚ ನ್ಯಾಯಾಲಯ ಅರ್ಜಿ ವಜಾ ಮಾಡಿ ಈ ಏಳು ನಗರಸಭೆ ಸದಸ್ಯರನ್ನು ಅನರ್ಹಗೊಳಿಸಿದೆ.

Join Whatsapp