ಚಿಕ್ಕಪೇಟೆ ಶಾಲೆ ಮಾರಾಟ: ಶಾಸಕ ದಿನೇಶ್ ಗುಂಡೂರಾವ್ ಪಾತ್ರವೇನು? – ಮಥಾಯಿ ಪ್ರಶ್ನೆ

Prasthutha|

ಬೆಂಗಳೂರು: ಚಿಕ್ಕಪೇಟೆಯ ಸರ್ಕಾರಿ ಶಾಲೆ ಕಟ್ಟಡವನ್ನು ಮಾರಾಟ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಾಜಿ ಕೆಎಎಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಾರ್ಟಿಯ ರಾಜ್ಯ ವಕ್ತಾರ ಹಾಗೂ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ  ಕೆ.ಮಥಾಯಿ ತೀವ್ರ ವಿರೋಧ ವ್ಯಕ್ತಪಡಿಸಿದರು.

- Advertisement -

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ.ಮಥಾಯಿ, “ಸ್ವಾತಂತ್ರ್ಯ ಪೂರ್ವದಲ್ಲಿ ದಾನಿಗಳು ನೀಡಿದ ಜಾಗದಲ್ಲಿ ಚಿಕ್ಕಪೇಟೆಯ ಸರ್ಕಾರಿ ಶಾಲೆಯನ್ನು ನಿರ್ಮಿಸಲಾಗಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಕಟ್ಟಡವನ್ನು ರಾಜ್ಯ ಬಿಜೆಪಿ ಸರ್ಕಾರವು ಮಾರಾಟ ಮಾಡಲು ನಿರ್ಧರಿಸಿರುವುದು ಭ್ರಷ್ಟಾಚಾರ ಕರಾಳ ಸ್ವರೂಪ. ಕೋಟಿಗಟ್ಟಲೆ ಕಮಿಷನ್ ಆಸೆಗಾಗಿ ಅಮೂಲ್ಯ ಸಂಪತ್ತನ್ನು ಮಾರುವ ನಿರ್ಧಾರವನ್ನು ಸರ್ಕಾರ ಕೈಬಿಡದಿದ್ದರೆ ಎಎಪಿಯು ಬೃಹತ್ ಹೋರಾಟ ಮಾಡಲಿದೆ” ಎಂದು ಹೇಳಿದರು.

“ಆಡಳಿತ ಪಕ್ಷವು 40 % ಕಮೀಷನ್ ಭ್ರಷ್ಟಾಚಾರದ ಮುಂದುವರಿದ ಭಾಗವಾಗಿ 10 ಸಾವಿರ ಚದರ ಅಡಿ ಇರುವಂತಹ, ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಶಾಲೆಯನ್ನು ಮಾರುವ ದುಸ್ಸಾಹಸಕ್ಕೆ ಕೈಹಾಕಿದ್ದರೂ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ವಿರೋಧಿಸುತ್ತಿಲ್ಲ. ಸರ್ಕಾರಿ ಆಸ್ತಿಯನ್ನು ರಕ್ಷಿಸುವುದು ಶಾಸಕರ ಕರ್ತವ್ಯವಾಗಿದ್ದು, ಸ್ಥಳೀಯ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಸುಮ್ಮನಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಲೆಯ ಮಾರಾಟದಲ್ಲಿ ಅವರ ಪಾತ್ರವೇನು ಎಂಬುದು ಜನರಿಗೆ ತಿಳಿಯಬೇಕು” ಎಂದು ಕೆ.ಮಥಾಯಿ ಹೇಳಿದರು.

- Advertisement -

ಒಂದೆಡೆ ಸರ್ಕಾರಿ ಶಾಲೆ ಆಸ್ತಿ ಸಂರಕ್ಷಣಾ ಅಭಿಯಾನಕ್ಕೆ ರಾಜ್ಯ ಶಿಕ್ಷಣ ಇಲಾಖೆ ಕರೆ ಕೊಟ್ಟಿದ್ದರೆ, ಮತ್ತೊಂದೆಡೆ ಐತಿಹಾಸಿಕ ಶಾಲೆಯ ಕಟ್ಟಡವನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸದೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ರವರು ಇಬ್ಬಂದಿತನ ಪ್ರದರ್ಶಿಸುತ್ತಿದ್ದಾರೆ. ಸಚಿವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿದ್ದರೆ ಶಾಲಾ ಕಟ್ಟಡವನ್ನು ಸರ್ಕಾರದ ವಶದಲ್ಲೇ ಉಳಿಸಿಕೊಳ್ಳಲಿ” ಎಂದು ಕೆ.ಮಥಾಯಿ ಹೇಳಿದರು.

ಆಮ್ ಆದ್ಮಿ ಪಾರ್ಟಿಯ ಸ್ಥಳೀಯ ಮುಖಂಡರಾದ ಗೋಪಿನಾಥ್ ಮಾತನಾಡಿ, “ಸರ್ಕಾರಿ ಶಾಲೆಯನ್ನು ಮಾರಾಟ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಕಟ್ಟಡದಲ್ಲಿ ಶಾಲೆ ಮಾತ್ರವಲ್ಲದೇ 141 ಮಳಿಗೆಗಳು, ಬ್ಯಾಂಕ್ ಹಾಗೂ ವಸತಿಗೃಹವಿದೆ. ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಈ ಆಸ್ತಿಯನ್ನು ಕೇವಲ 50 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಪ್ರತಿಯಾಗಿ ಖರೀದಿದಾರರಿಂದ ಶಾಸಕರು, ಸಚಿವರು ಹಾಗೂ ಸಿಎಂಗೆ ಕೋಟಿಗಟ್ಟಲೆ ಕಮಿಷನ್ ಸಿಗಲಿದೆ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಬೆಂಗಳೂರು ವಕ್ತಾರರಾದ ಉಷಾ ಮೋಹನ್ ಭಾಗವಹಿಸಿದ್ದರು.

Join Whatsapp