ಛಾಪ್ರ ಕಳ್ಳ ಭಟ್ಟಿ ದುರಂತ; ಜೆಡಿಯು ನಾಯಕನ ಮನೆಯಲ್ಲಿ ಬಾಟಲಿ-ಆರೋಪ

Prasthutha|

ಪಾಟ್ನ: ಜೆಡಿಯು ನಾಯಕ ಕಾಮೇಶ್ವರ ಸಿಂಗ್ ಮನೆಯಲ್ಲಿ ಕಳ್ಳಭಟ್ಟಿ ಬಾಟಲಿಗಳು ದೊರಕಿದ್ದಾಗಿ ವರದಿಯಾಗಿವೆ. ಆದರೆ ನಿಮ್ಮಂತೆಯೇ ವರದಿ ಓದಿಯೇ ನನ್ನ ಮನೆಯಲ್ಲಿ ಕಳ್ಳ ಭಟ್ಟಿ ಬಾಟಲಿಗಳು ಪತ್ತೆಯಾಗಿರುವುದು ನನಗೆ ಗೊತ್ತಾಗಿರುವುದು ಎಂದು ಕಾಮೇಶ್ವರ ಸಿಂಗ್ ಸ್ಪಷ್ಟಪಡಿಸಿದ್ದಾರೆ.

- Advertisement -

ಬಿಹಾರದ ಛಾಪ್ರಾದ ಮದೌರಾ ನಗರ್ ಪ್ರದೇಶದಲ್ಲಿ ಜೆಡಿಯು ನಾಯಕ ಕಾಮೇಶ್ವರ ಸಿಂಗ್ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಮನೆಯಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳ ಭಟ್ಟಿ ಮದ್ಯ ತುಂಬಿದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮನೆಯಲ್ಲಿ ಈಗ ಸರೋಜ್ ಮಹತೋ ಮತ್ತಾತನ ಮಡದಿ ಬಾಡಿಗೆಗೆ ಇದ್ದಾರೆ ಎಂದು ಇನ್ಸ್’ಪೆಕ್ಟರ್ ರಾಕೇಶ್ ಸಿಂಗ್ ಮಾಧ್ಯಮದವರಿಗೆ ಹೇಳಿದರು. ಒಬ್ಬ ಮಹಿಳೆಯನ್ನು ವಶಕ್ಕೆ ಪಡೆದಿರುವುದಾಗಿಯೂ ಅವರು ತಿಳಿಸಿದ್ದಾರೆ.

ನನ್ನ ಮನೆಯಲ್ಲಿ ಕಳ್ಳ ಭಟ್ಟಿ ಮದ್ಯದ ಬಾಟಲಿಗಳು ಇದ್ದವೆಂಬ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ ಎಂದು ಜೆಡಿಯು ನಾಯಕ ಕಾಮೇಶ್ವರ ಸಿಂಗ್ ಹೇಳಿದ್ದಾರೆ. ನಮ್ಮ ರಾಜ್ಯ ಸರಕಾರದ ಹೆಸರು ಕೆಡಿಸಲು ಆ ಮನೆಯಲ್ಲಿ ಯಾರು ಮದ್ಯದ ಬಾಟಲಿಗಳನ್ನು ಇಟ್ಟರು ಎಂಬ ಬಗ್ಗೆ ಕೂಡಲೆ ತನಿಖೆ ನಡೆಯಬೇಕು ಎಂದೂ ಅವರು ಹೇಳಿದರು.

- Advertisement -

“ಆ ಮನೆಯಲ್ಲಿ ಮದ್ಯದ ಬಾಟಲಿ ದೊರಕಿದ ಸುದ್ದಿ ಮಾಧ್ಯಮಗಳ ಮೂಲಕ ನನಗೆ ಗೊತ್ತಾಯಿತು. ನಾನು ಆ ಮನೆಯಿಂದ ಬಂದು 32 ವರ್ಷಗಳಾಗಿವೆ. ನಮ್ಮ ಸರಕಾರದ ಹೆಸರು ಕೆಡಿಸಲು ಆ ಮನೆಯಲ್ಲಿ ಯಾರು ಮದ್ಯದ ಬಾಟಲಿಗಳನ್ನು ಇಟ್ಟರು ಎಂಬುದು ತನಿಖೆಯಾಗಬೇಕು” ಎಂದು ಕಾಮೇಶ್ವರ ರಾವ್ ಮಾಧ್ಯಮದವರಿಗೆ ತಿಳಿಸಿದರು.

ಇದರ ನಡುವೆ ಕಳ್ಳ ಭಟ್ಟಿ ದುರಂತದ ಬಗ್ಗೆ ಶೋಧ ಕೈಗೊಳ್ಳಲು ಎನ್’ಎಚ್’ಆರ್’ಸಿ- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡವು ಡಿಸೆಂಬರ್ 20ರಂದು ಛಾಪ್ರಾ ಸದರ್ ಆಸ್ಪತ್ರೆಗೆ ಬಂದಿದೆ. ವಿಷ ಅಂಶದ ಮದ್ಯದ ಸೇವೆನೆಯಿಂದ ಸಾವಿಗೀಡಾದ ಜನರ ಮತ್ತು ಮದ್ಯದ ಬಗ್ಗೆ ಅವರು ಸದರ್ ಆಸ್ಪತ್ರೆಯ ವೈದ್ಯರಿಂದ ಮಾಹಿತಿ ಸಂಗ್ರಹಿಸಿದರು.

60 ಜನರ ಸಾವಿಗೆ ಕಾರಣವಾದ ಕಳೆದ ವಾರ ಬಿಹಾರದ ಸರಣ್ ಜಿಲ್ಲೆಯಲ್ಲಿ ನಡೆದ ಕಳ್ಳ ಭಟ್ಟಿ ದುರಂತದ ಬಗ್ಗೆ ಒಂಬತ್ತು ಜನರ ಎನ್’ಎಚ್’ಆರ್’ಸಿ ತಂಡವು ತನಿಖೆ ನಡೆಸುತ್ತಿದೆ. ಈ ಸಾವುಗಳಿಂದ ಕೆರಳಿದ ಸ್ಥಳೀಯರು ಬಿಹಾರ ರಾಜ್ಯ ಹೆದ್ದಾರಿ 90ರ ಮಸ್ರಾಕ್ ಹನುಮಾನ್ ಚೌಕದಲ್ಲಿ ಸೇರಿ ಹೆದ್ದಾರಿ ಬಂದ್ ಮಾಡಿದರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಯು ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ವಿರೋಧ ಪಕ್ಷಗಳು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತುದಿಗಾಲಲ್ಲಿ ನಿಲ್ಲಿಸಿದೆ.

Join Whatsapp