ಭರ್ಜರಿ ಗೆಲುವಿನ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ ಚೆನ್ನೈ ಸೂಪರ್​ ಕಿಂಗ್ಸ್

Prasthutha|

ಚೆನ್ನೈ: ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಸತತ ಎರಡು ಸೋಲು ಕಂಡು ನಿರಾಶವಾಗಿದ್ದ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಭರ್ಜರಿ ಗೆಲುವಿನ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ 78 ರನ್​ಗಳ ಗೆಲುವು ಸಾಧಿಸಿದೆ.

- Advertisement -

ಚೆನ್ನೈಯ ಚೆಪಾಕ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಐಪಿಎಲ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಚೆನ್ನೈ ತಂಡ ನಾಯಕ ಋತುರಾಜ್​ ಗಾಯಕ್ವಾಡ್​, ಡೇರಿಯಲ್​ ಮಿಚೆಲ್​ ಮತ್ತು ಶಿವಂ ದುಬೆ ಅವರ ಆಕ್ರಮಣಕಾರಿ ಬ್ಯಾಟಿಂಗ್​ ಸಾಹಸದಿಂದ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ ನಷ್ಟಕ್ಕೆ 212 ರನ್​ ಬಾರಿಸಿತು. ಈ ಹಿಂದಿನ ಪಂದ್ಯಗಳಲ್ಲಿ ಸಲೀಸಾಗಿ ಮೂರು ಬಾರಿ 250ರ ಗಡಿ ದಾಟಿದ್ದ ಸನ್​ರೈಸರ್ಸ್​ ತಂಡಕ್ಕೆ ಈ ಮೊತ್ತ ಎಲ್ಲಿಂದಲೂ ಸಾಲದು ಎಂದು ನಿರೀಕ್ಷೆ ಮಾಡಿದ್ದವರಿಗೆ ಚೆನ್ನೈ ತಂಡದ ಮಧ್ಯಮ ವೇಗಿ ತುಷಾರ್​ ದೇಶ್​ಪಾಂಡೆ ಘಾತಕ ಸ್ಫೆಲ್ ಮೂಲಕ ಕಟ್ಟಿಹಾಕಿದರು. ಅಂತಿಮವಾಗಿ ಹೈದರಾಬಾದ್​ 18.5 ಓವರ್​ಗಳಲ್ಲಿ 134 ರನ್​ಗೆ ಸರ್ವಪತನ ಕಂಡು ಹೀನಾಯವಾಗಿ ಸೋಲೊಪ್ಪಿಕೊಂಡಿದೆ.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ಗೆ ಮೊದಲ ಎಸೆತದಲ್ಲೇ ಟ್ರಾವಿಸ್​ ಹೆಡ್​ ಬೌಂಡರಿ ಮೂಲಕ ರನ್​ ಖಾತೆ ತೆರೆದರು. ಮುಂದಿನ ಓವರ್​ನಲ್ಲಿ ತುಷಾರ್​ ದೇಶ್​ಪಾಂಡೆಗೆ ಸಿಕ್ಸರ್​ ರುಚಿ ತೋರಿಸಿದರು. ಅಭಿಷೇಕ್​ ಶರ್ಮ ಕೂಡ ಒಂದು ಸಿಕ್ಸರ್​ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಈ ವೇಳೆ ಧೋನಿ ನೀಡಿದ ಸಲಹೆಯನ್ನಾಧರಿಸಿ ಇದೇ ಓವರ್​ನಲ್ಲಿ ತುಷಾರ್​ ದೊಡ್ಡ ಬೇಟೆಯಾಡುವಲ್ಲಿ ಯಶಸ್ವಿಯಾದರು. ಟ್ರಾವಿಸ್​ ಹೆಡ್(13)​ ಮತ್ತು ಅನ್ಮೋಲ್ಪ್ರೀತ್ ಸಿಂಗ್​(0) ಖಾತೆ ತರೆಯುವ ಮುನ್ನವೇ ವಿಕೆಟ್​ ಕಿತ್ತು ಪೆವಿಲಿಯನ್​ ಕಡೆಗೆ ದಾರಿ ತೋರಿದರು. 21 ರನ್​ಗೆ 2 ವಿಕೆಟ್​ ಕಳೆದುಕೊಂಡ ಹೈದರಾಬಾದ್​ ಈ ಆಘಾತವನ್ನು ಅರಗಿಸಿಕೊಳ್ಳುವ ಮುನ್ನವೇ ಅಭಿಷೇಕ್​ ಶರ್ಮ(15) ವಿಕೆಟ್​ ಕೂಡ ಪತನಗೊಂಡಿತು. ಈ ವಿಕೆಟ್​ ಕೂಡ ತುಷಾರ್ ಪಾಲಾಯಿತು. ಅಲ್ಲಿಗೆ ಅಗ್ರ ಕ್ರಮಾಂಕದ ಮೂರು ವಿಕೆಟ್​ ಕೂಡ ತುಷಾರ್​ ಕಿತ್ತರು.

- Advertisement -

40 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಐಡೆನ್​ ಮಾರ್ಕ್ರಮ್​ ಮತ್ತು ನಿತೀಶ್​ ರೆಡ್ಡಿ ಕೆಲ ಕಾಲ ಆಸರೆಯಾದರೂ ಕೂಡ ಇವರಿಂದ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಕೇವಲ 4 ಬೌಂಡರಿ ನೆರವಿನಿಂದ ಮಾರ್ಕ್ರಮ್​ 32 ರನ್​ ಗಳಿಸಿ ಪತಿರಾಣ ಯಾರ್ಕರ್​ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ನಿತೀಶ್​ ರೆಡ್ಡಿ ಎಸೆತವೊಂದರಂತೆ 15 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು.

ಆಕ್ರಮಣಕಾರಿ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಹೆನ್ರಿಚ್​ ಕ್ಲಾಸೆನ್​ ಮತ್ತು ಅಬ್ದುಲ್​ ಸಮದ್​ ಕೂಡ ಈ ಪಂದ್ಯದಲ್ಲಿ ರನ್​ ಗಳಿಸಲು ಪರದಾಡಿದರು. ಕ್ಲಾಸೆನ್​ 21 ಎಸೆತ ಎದುರಿಸಿ 20 ರನ್​ ಗಳಿಸಿದರು. ಸಿಡಿದದ್ದು 1 ಸಿಕ್ಸರ್​ ಮಾತ್ರ. ಅಬ್ದುಲ್​ ಸಮದ್ 18 ಎಸೆತಗಳಿಂದ 19 ರನ್​ ಕಲೆಹಾಕಿದರು. ಡೇರಿಯಲ್​ ಮಿಚೆಲ್​ ಈ ಪಂದ್ಯದಲ್ಲಿ 5 ಕ್ಯಾಚ್​ ಹಿಡಿದು ಮಿಂಚಿದರು.

ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಆರಂಭದಲ್ಲೇ ಅಜಿಂಕ್ಯಾ ರಹಾನೆ ವಿಕೆಟ್​ ಕಳೆದುಕೊಂಡರೂ ಕೂಡ ಇದರಿಂದ ವಿಚಲಿತರಾಗಲಿಲ್ಲ. ನಾಯಕ ಋತುರಾಜ್​ ಗಾಯಕ್ವಾಡ್​ ಮತ್ತು ಡೇರಿಯಲ್​ ಮಿಚೆಲ್​ ಸೇರಿಕೊಂಡು ಹೈದರಾಬಾದ್​ ಬೌಲರ್​ಗಳ ಮೇಲೆ ಸವಾರಿ ನಡೆಸಿ ಅರ್ಧಶತಕ ಬಾರಿಸಿದರು. ಗಾಯಕ್ವಾಡ್​ ಕೇವಲ 27 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೂ ಜಯ್​ದೇವ್​ ಉನಾದ್ಕತ್​ ಬೇರ್ಪಡಿಸುವಲ್ಲಿ ಯಶಸ್ಸು ಕಂಡರು. ಗಾಯಕ್ವಾಡ್ ಮತ್ತು ಮಿಚೆಲ್​ ದ್ವಿತೀಯ ವಿಕೆಟ್​ಗೆ 107 ರನ್​ಗಳ ಅಮೋಘ ಜತೆಯಾಟ ನಡೆಸಿತು. ಮಿಚೆಲ್​ ಅವರು ​ಉನಾದ್ಕತ್ ಎಸೆತ ಲೋ ಫುಲ್​ಟಾಸ್ ಎಸೆತಕ್ಕೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. 7 ಬೌಂಡರಿ ಮತ್ತು 1 ಸಿಕ್ಸರ್​ ಬಾರಿಸಿದ ಮಿಚೆಲ್​ 52 ರನ್​ ಗಳಿಸಿದರು.

​ಮಿಚೆಲ್​ ವಿಕೆಟ್​ ಬಿದ್ದರೂ ಕೂಡ ಚೆನ್ನೈ ತಂಡದ ರನ್​ ಗಳಿಕೆಗೆ ಯಾವುದೇ ಹಿನ್ನಡೆಯಾಗಲಿಲ್ಲ. ಶಿವಂ ದುಬೆ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ ನಡೆಸಿ ತಮ್ಮ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು. 19.2 ಓವರ್​ ತನಕ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಗಾಯಕ್ವಾಡ್​ 98 ರನ್​ ಗಳಿಸಿ ವಿಕೆಟ್​ ಕಳೆದುಕೊಂಡು ಕೇವಲ 2 ರನ್​ ಅಂತರದಿಂದ ಶತಕ ವಂಚಿತರಾದರು. ಕಳೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಶತಕ ಸಿಡಿಸಿದ್ದರು. ಸತತವಾಗಿ 2ನೇ ಶತಕ ಬಾರಿಸುವ ಅವಕಾಶ ಕೈ ಚೆಲ್ಲಿದರು. ಒಟ್ಟು 54 ಎಸೆತ ಎದುರಿಸಿದ ಗಾಯಕ್ವಾಡ್​ 10 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 98 ರನ್​ ಗಳಿಸಿದರು.

ಶಿವಂ ದುಬೆ 4 ಬಿಗ್​ ಹಿಟ್ಟಿಂಗ್​ ಸಿಕ್ಸರ್​ ಮತ್ತು 1 ಬೌಂಡರಿ ಬಾರಿಸಿ ಅಜೇಯ 39 ರನ್​ ಗಳಿಸಿದರು. ಧೋನಿ ಕೂಡ 5 ರನ್ ಬಾರಿಸಿ ಅಜೇಯರಾಗಿ ಉಳಿದರು. ಹೈದರಾಬಾದ್​ ಪರ ಭುವನೇಶ್ವರ್ ಕುಮಾರ್​, ಟಿ. ನಟರಾಜನ್​ ಮತ್ತು ಉನಾದ್ಕತ್​ ತಲಾ ಒಂದು ವಿಕೆಟ್​ ಕಿತ್ತರು.​​

Join Whatsapp