ಪಿಎಸ್ ಐ ನೇಮಕಾತಿ ಅಕ್ರಮ: ಚನ್ನರಾಯಪಟ್ಟಣ ಪುರಸಭೆ ಸದಸ್ಯ ಬಂಧನ

Prasthutha|

ಹಾಸನ: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪುರಸಭೆಯ ಹಾಲಿ ಸದಸ್ಯ ಸಿ.ಎನ್.ಶಶಿಧರ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಶಶಿಧರನನ್ನು ವಿಚಾರಣೆಗಾಗಿ 10 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು ಹೆಚ್ಚಿನ ವಿಚಾರಣೆಯನ್ನು ಕೈಗೊಳ್ಳಲಾಗಿದೆ.
ಬೆಕ್ಕ ಗ್ರಾಮದ ವೆಂಕಟೇಶ್ ಪಿಎಸ್ ಐ ಹುದ್ದೆಗೆ ಆಯ್ಕೆಯಾಗಲು ಡೀಲ್ ಮಾಡಿಸಿದ್ದ ಆರೋಪದ ಮೇಲೆ ಶಶಿಯನ್ನು ಬಂಧಿಸಲಾಗಿದೆ. ಈ ಹಿಂದೆ ಜೆಡಿಎಸ್ನಲ್ಲಿದ್ದ ಶಶಿ, ನಂತರದ ದಿನಗಳಲ್ಲಿ ಜೆಡಿಎಸ್ ತೊರೆದು ಬಿಜೆಪಿ ನಾಯಕರ ಜೊತೆಗೆ ಸಖ್ಯ ಬೆಳೆಸಿಕೊಂಡರು.
ಶಶಿ ಸಂಬಂಧಿಯೂ ಆಗಿರುವ ಬೆಕ್ಕ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೇಶವಮೂರ್ತಿ ಅವರನ್ನು ಮೂರು ದಿನಗಳ ಹಿಂದೆ ಬಂಧಿಸಲಾಗಿತ್ತು. ನಂತರ ಪಿಎಸ್ಐ ಆಗಿ ಆಯ್ಕೆ ಆಗಿದ್ದ ವೆಂಕಟೇಶ್ ಮತ್ತು ಆತನ ತಂದೆ ಚಂದ್ರಶೇಖರ್ ಅವರನ್ನು ಬಂಧಿಸಲಾಗಿತ್ತು.
ಪ್ರಭಾವಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಸಂಬಂಧ ಹೊಂದಿ ಡೀಲ್ ಕುದುರಿಸಿರುವ ಆರೋಪದ ಮೇಲೆ ಶಶಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಶಶಿ ವಿಚಾರಣೆ ನಂತರ ಮತ್ತಷ್ಟು ವಿಚಾರ ಬಹಿರಂಗಗೊಳ್ಳುವ ಸಾಧ್ಯತೆಯಿದೆ.
ರುದ್ರಗೌಡ ಕಿಂಗ್ಪಿನ್:
ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ರುದ್ರಗೌಡ ಪಾಟೀಲ್ ಈ ಹಿಂದೆ ನಡೆದಿದ್ದ ಪಿಡಬ್ಲ್ಯುಡಿ ನೇಮಕಾತಿ ಅಕ್ರಮದಲ್ಲಿಯೂ ಮುಖ್ಯ ಪಾತ್ರ ವಹಿಸಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಕಳೆದ ಡಿಸೆಂಬರ್ 14ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಡಬ್ಲ್ಯುಡಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ರುದ್ರಗೌಡ 7ನೇ ಆರೋಪಿಯಾಗಿದ್ದ. ಈ ಸಂಬಂಧ ಬೆಂಗಳೂರಿನ ಸೇಂಟ್ಜಾನ್ಸ್ ಶಾಲೆಯ ಸಿಬ್ಬಂದಿ ದೂರು ನೀಡಿದ್ದರು.
ಅಭ್ಯರ್ಥಿಯೊಬ್ಬ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ್ದ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಅನೇಕರಿಗೆ ಅಕ್ರಮವಾಗಿ ಪರೀಕ್ಷೆ ಬರೆಸಿರುವ ರುದ್ರಗೌಡನಿಗೆ ಇದೀಗ ಕೇಸ್ ರೀ ಓಪನ್ ಆದ ಹಿನ್ನೆಲೆಯಲ್ಲಿ ಹೊಸ ಸಂಕಷ್ಟ ಎದುರಾಗಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ರುದ್ರಗೌಡನನ್ನು ವಶಕ್ಕೆ ಪಡೆದುಕೊಳ್ಳಲು ಕಲಬುರಗಿಗೆ ಬಂದಿದ್ದಾರೆ. ಸದ್ಯ ಪಿಎಸ್ಐ ಅಕ್ರಮ ನೇಮಕಾತಿ ಅಕ್ರಮದ ಆರೋಪ ಹೊತ್ತಿರುವ ರುದ್ರಗೌಡ ಜೈಲು ಸೇರಿದ್ದಾರೆ.

Join Whatsapp