ಚಾರ್ಮಾಡಿ ಘಾಟಿಯಲ್ಲಿ ಶವ ಎಸೆದ ಪ್ರಕರಣ; ಫಲ ನೀಡದ ಕಾರ್ಯಾಚರಣೆ

Prasthutha|

ಮೂಡಿಗೆರೆ: ಬೆಂಗಳೂರಿನಲ್ಲಿ ನಡೆದ ಅಪಹರಣ ಹಾಗೂ ನಿಗೂಢ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಚಾರ್ಮಾಡಿ ಘಾಟಿ ಪ್ರದೇಶಕ್ಕೆ ಶವ ಶೋಧಕ್ಕಾಗಿ ಆಗಮಿಸಿದ್ದ  ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಗುರುವಾರವೂ ಕಾರ್ಯಾಚರಣೆ ನಡೆಸಿದ್ದು ಯಾವುದೇ ರೀತಿಯ ಸುಳಿವು ಕಂಡುಬಂದಿಲ್ಲ.

- Advertisement -

ಹಣಕಾಸು ವಿಚಾರದಲ್ಲಿ 9 ತಿಂಗಳ ಹಿಂದೆ ಕೊಲೆ ನಡೆದಿದ್ದು ಚಿಕ್ಕಬಳ್ಳಾಪುರದ ಪ್ರಭಾವಿ ಮುಖಂಡನೋರ್ವನ ಪುತ್ರನ ಸಹಿತ 10 ಮಂದಿ ಸೇರಿ ಎಚ್. ಶರತ್ ಎಂಬಾತನನ್ನು ಕೊಲೆಗೈದು ಶವವನ್ನು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಎಸೆದಿರುವುದಾಗಿ ಬಂಧನದ ವೇಳೆ ತಿಳಿಸಿದ್ದರು. ಆರೋಪಿಗಳ ಹೇಳಿಕೆ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಕರೆತಂದು ಕಳೆದ ಮೂರು ದಿನಗಳಿಂದ ಶೋಧ ಕಾರ್ಯ ನಡೆಸಿದ್ದಾರೆ. ಸ್ಥಳೀಯ ಬಣಕಲ್,ಚಾರ್ಮಾಡಿ, ಉಜಿರೆ,ಬೆಳ್ತಂಗಡಿ ಮೊದಲಾದ ಕಡೆಯ ಅನೇಕರು ಶೋಧ ಕಾರ್ಯಕ್ಕೆ ಸಹಕಾರ ನೀಡಿದ್ದರು.

ಕಣಿವೆ ಪ್ರದೇಶದ ಚಾರ್ಮಾಡಿ ಘಾಟಿಯಲ್ಲಿ ಕಾರ್ಯಾಚರಣೆ ನಡೆಸಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಇಲ್ಲಿನ ಆಳವಾದ ಕಣಿವೆಗಳಿಗೆ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಇಳಿದು ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಒಂದಿಷ್ಟು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಪರಿಸರದಲ್ಲಿ ಸಾಕಷ್ಟು ಬಿಸಿಲು, ಮೊಬೈಲ್ ನೆಟ್ ವರ್ಕ್ ಸಮಸ್ಯೆ, ಸರಿಯಾದ ನೀರು, ಆಹಾರ ಲಭ್ಯತೆ  ಇಲ್ಲದ ಕಾರಣ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ. ಆಳವಾದ ಕಣಿವೆಗಳಲ್ಲಿ ಇಳಿದು ಹುಡುಕುವುದು ಸುಲಭದ ಕೆಲಸವಲ್ಲ. ಘಾಟಿ ಪರಿಸರದಲ್ಲಿ ಕಾಡಾನೆ ಸಹಿತ  ವನ್ಯಜೀವಿಗಳು, ಅಪಾಯಕಾರಿ ಸರೀಸೃಪಗಳು ಸುಳಿದಾಡುತ್ತಿರುತ್ತವೆ.

- Advertisement -

ಆರೋಪಿಗಳು ಘಾಟಿ ಪ್ರದೇಶದ ಮೈಲುಗಲ್ಲಿನ ನಿಗದಿತ ಅಂಕೆಯೊಂದನ್ನು ಹೇಳುತ್ತಿದ್ದು ಈ ಮೈಲುಗಲ್ಲಿನ ಬಳಿಯ ಕಣಿವೆ ಪ್ರದೇಶದಲ್ಲಿ ಶವ ಎಸೆದಿರುವುದಾಗಿ ಹೇಳುತ್ತಿದ್ದಾರೆ. ಆದರೆ ಆ ಅಂಕಿಯ ಹತ್ತಾರು ಮೈಲುಗಲ್ಲುಗಳಿದ್ದು,ಅಲ್ಲೆಲ್ಲಾ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿಲ್ಲ.

ಪ್ರಕರಣ ನಡೆದು 9 ತಿಂಗಳು ಕಳೆದಿರುವುದರಿಂದ ಶವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಅಥವಾ ವನ್ಯಪ್ರಾಣಿಗಳ ಪಾಲಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆಯೇ ಎಂಬ ವಿಚಾರವು ಚರ್ಚೆಗೊಳಗಾಗಿದೆ.

ಶುಕ್ರವಾರ  ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಲಿರುವ ಕಾರಣ ಪೊಲೀಸರು ಬೆಂಗಳೂರಿಗೆ ಹಿಂದಿರುಗಿದ್ದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಕೋರ್ಟಿನ ಆದೇಶದ ಮೇರೆಗೆ ಮುಂದಿನ ಕಾರ್ಯಾಚರಣೆಯ ವಿಚಾರ ತಿಳಿದು ಬರಬೇಕಿದೆ. ಈ ಕಾರ್ಯಾಚರಣೆಯಲ್ಲಿ ಬೆಂಗಳೂರು ಕಬ್ಬನ್ ಪಾರ್ಕ್ ಸರ್ಕಲ್ ಇನ್ಸ್’ಪೆಕ್ಟರ್ ಚೈತನ್ಯ, ಮಹಿಳಾ ಸಬ್ ಇನ್ಸ್’ಪೆಕ್ಟರ್ ಅಶ್ವಿನಿ, ಸಿ.ಸಿ.ಬಿ. ನಂದೀಶ್, ಹಾಗೂ ಹಲವಾರು ಪೊಲೀಸ್ ಅಧಿಕಾರಿಗಳು ಇದ್ದರು.

Join Whatsapp