ಕಾರು ಅಪಘಾತ; ಕಾಸರಗೋಡಿನ ಯುವಕ ಸಾವು

Prasthutha|

ಹಾಸನ: ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಜಾಗ ಬಿಡಲು ರಸ್ತೆಯಂಚಿಗೆ ಸರಿದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಉಳಿದ ನಾಲ್ವರು ಗಾಯಗೊಂಡಿರುವ ಘಟನೆ ಬೇಲೂರು-ಮೂಡಿಗೆರೆ ರಸ್ತೆಯ ನಾಗೇನಹಳ್ಳಿ ಸಮೀಪದ ದಬ್ಬೆ ಗ್ರಾಮದ ಬಳಿ ನಡೆದಿದೆ.

- Advertisement -

ಮೃತ ಚಾಲಕನನ್ನು ಕೇರಳದ ಕಾಸರಗೋಡು ಜಿಲ್ಲೆಯ ಚೆಲ್ಲಡ್ಕ ನೆಲ್ತಡ್ಕ ನಿವಾಸಿ ರಾಜೀವ್ ಅವರ ಪುತ್ರ  ಆದರ್ಶ್ ಎಂದು ಗುರುತಿಸಲಾಗಿದೆ.

ಶಿವಮೊಗ್ಗದ ಪ್ರದೀಪ್, ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಣಸವಳ್ಳಿಯ ನಿತೇಶ್ ಮತ್ತು ಬೆಂಗಳೂರಿನ ಯಶಸ್ವಿನಿ, ದರ್ಶಿನಿ ಬೆಂಗಳೂರಿನಲ್ಲಿ ಎಂಜನಿಯರ್ ಆಗಿದ್ದು, ಹಾಸನದಲ್ಲಿ ಸ್ನೇಹಿತರೊಬ್ಬರ ಮದುವೆಗೆಂದು ಆ.6ರಂದು ಬಾಡಿಗೆ ಕಾರು (ಕೆಎ -04 ಎಎ 9077 ಮಾರುತಿ ಸ್ವಿಫ್ಟ್ ಡಿಸೈರ್) ಮಾಡಿಕೊಂಡು ಆಗಮಿಸಿದ್ದು, ಮದುವೆ ಮುಗಿಸಿಕೊಂಡು ನಿತೇಶ್ ಅವರ ಮನೆಗೆ ತೆರಳಿದ್ದರು.

- Advertisement -

ನಂತರ ಅದೇ ಕಾರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆದರ್ಶ್ ಕಾರನ್ನು ಚಾಲನೆ ಮಾಡುತ್ತಿದ್ದು, ಮಧ್ಯಾಹ್ನ 2 ಗಂಟೆ ಸಮಯದಲ್ಲಿ ನಾಗೇನಹಳ್ಳಿ ಬಳಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಕೊಡಲು ಡಾಂಬರು ರಸ್ತೆಯಿಂದ ಮಣ್ಣಿನ ರಸ್ತೆಗೆ ಇಳಿಸಿದಾಗ ಮಳೆಯ ಹಿನ್ನೆಲೆಯಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ  ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ.  ಡಿಕ್ಕಿ ಹೊಡೆದ ವೇಗಕ್ಕೆ ಕಾರು ಜಖಂಗೊಂಡಿದ್ದು, ಚಾಲಕ ಆದರ್ಶ್ಗೆ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ  ಉಳಿದ ನಾಲ್ವರಿಗೆ ಗಾಯಗಳಾಗಿದ್ದು, ಬೇಲೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಪ್ರದೀಪ್ ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Join Whatsapp