ಪುತ್ತೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

Prasthutha|

ಪುತ್ತೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕೂರ್ನಡ್ಕ ಮತ್ತು ರೋಟರಿ ರಕ್ತನಿಧಿ ಪುತ್ತೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಕೂರ್ನಡ್ಕದಲ್ಲಿ ನಡೆಯಿತು.

- Advertisement -

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೂರ್ನಡ್ಕ ಮಸೀದಿಯ ಖತೀಬರಾದ ಹುನೈಸ್ ಫೈಝಿ, ಕಾರ್ಯಕ್ರಮವನ್ನು ಶ್ಲಾಘಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮಾತನಾಡಿ, ದೇಶದಲ್ಲಿ ಕೊರೊನಾದ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಅನೇಕ ಜೀವಗಳು ಬಲಿಯಾದ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ರಚನೆ ಮಾಡಿ, ದೇಶದಾದ್ಯಂತ ರಕ್ತದಾನ ಹಾಗೂ ಇತರ ಆರೋಗ್ಯ ಶಿಬಿರ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ. ಜಾತಿ ಧರ್ಮಗಳ ಮಧ್ಯೆ ಕೋಮು ದ್ವೇಷ ಹರಡುತ್ತಿರುವ ಈ ಸಂದರ್ಭದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತಾ, ಸೌಹಾರ್ದತೆಯ ಸಮಾಜ ನಿರ್ಮಿಸೋಣ ಎಂದು ಹೇಳಿದರು.

- Advertisement -

ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಅಲಿ ಮಾತನಾಡಿ, ಇಂದಿನ ಕಾಲದಲ್ಲಿ ಹೆಚ್ಚಿನ ಯುವಕರು ರಕ್ತದಾನ ಮಾಡಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ. ಜೀವ ಉಳಿಸಲು ಬೇಕಾಗಿ ಎಲ್ಲರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.

ರೋಟರಿ ರಕ್ತ ನಿಧಿ ಪುತ್ತೂರು ಇದರ ವೈದ್ಯಾಧಿಕಾರಿ ರಾಮಚಂದ್ರ ಭಟ್ ಮಾತನಾಡಿ, “ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್‌ನಂತಹ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಯುವಕರು ನಮ್ಮ ರಕ್ತನಿಧಿಗೆ ರಕ್ತ ಪೂರೈಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಶ್ಲಾಘಿಸಿದರು.

ಜಿಲ್ಲಾ ಟಿ.ಬಿ ಅಧಿಕಾರಿ ಡಾ| ಬದ್ರುದ್ದೀನ್ ಅವರು ಆಗಮಿಸಿ ರಕ್ತದಾನ ಶಿಬಿರಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕೂರ್ನಡ್ಕ ಘಟಕದ ಅಧ್ಯಕ್ಷರಾದ ಮಹಮ್ಮದ್ ಸಾದಿಕ್ ವಹಿಸಿದ್ದರು.

ವೇದಿಕೆಯಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕೇತ್ರ ಅಧ್ಯಕ್ಷ ಇಬ್ರಾಹಿಂ ಸಾಗರ್, ಪಿಎಫ್ಐ ಸಿಟಿ ಡಿವಿಝನ್ ಅಧ್ಯಕ್ಷ ಉಮ್ಮರ್ ಕೆ.ಎಸ್, ಕೂರ್ನಡ್ಕ ಮಸೀದಿಯ ಅಧ್ಯಕ್ಷ ಕೆ.ಹೆಚ್.ಕಾಸಿಂ ಹಾಜಿ, ಸ್ಥಳೀಯ ನಗರ ಸಭಾ ಸದಸ್ಯ ಯೂಸುಫ್ ಡ್ರೀಮ್, ಪಿಎಫ್ಐ ಪುತ್ತೂರು ಕಮ್ಯುನಿಟಿ ಡೆವಲಪ್ಮೆಂಟ್ ಉಸ್ತುವಾರಿ ಅಶ್ರಫ್ ಬಾವು ಉಪಸ್ಥಿತರಿದ್ದರು. ಲೆಬೀಬ್ ಸ್ವಾಗತಿಸಿ,  ಯಹ್ಯಾ ಕೆ.ಹೆಚ್ ವಂದಿಸಿದರು. ಸಿದ್ದೀಕ್ ಕೆ.ಎ ಹಾಗೂ ನಝೀರ್ ಕಾರ್ಯಕ್ರಮ ನಿರೂಪಿಸಿದರು.

ರಕ್ತದಾನ ಶಿಬಿರದಲ್ಲಿ ಸುಮಾರು 54 ಯುನಿಟ್ ರಕ್ತ ಸಂಗ್ರಹವಾಯಿತು.

Join Whatsapp