ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ: RSS ಕಾರ್ಯಕರ್ತನ ಕೈಗಳು ಛಿದ್ರ

Prasthutha|

ವಡಗರ: ಮನೆಯ ಟೆರೇಸ್’ನಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಉಂಟಾದ ಸ್ಫೋಟದಲ್ಲಿ RSS ಕಾರ್ಯಕರ್ತನೋರ್ವನಿಗೆ ಗಂಭೀರ ಗಾಯಗಳಾಗಿದ್ದು, ಎರಡೂ ಕೈಗಳು ಛಿದ್ರವಾಗಿರುವ ಘಟನೆ ಕೇರಳದ ವಡಗರದ ಮಣಿಯೂರ್ ಎಂಬಲ್ಲಿ ನಡೆದಿದೆ.
ವಡಗರದ ಚೆರಂದತ್ತೂರಿನ ಐಎಚ್‌ಡಿಪಿ ಕಾಲೋನಿ ನಿವಾಸಿ, ಬಿಜೆಪಿ-ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿದ್ದ ಮಣಿಕುಟ್ಟನ್‌ ಅಲಿಯಾಸ್‌ ಹರಿಪ್ರಸಾದ್‌ (28) ಎಂಬಾತ ತನ್ನ ಮನೆಯ ಟೆರೇಸ್‌ನಲ್ಲಿ ಬಾಂಬ್ ತಯಾರಿಸುವ ವೇಳೆ ಸ್ಫೋಟ ಸಂಭವಿಸಿದೆ. ಗಂಭೀರ ಗಾಯಗೊಂಡ ಹರಿಪ್ರಸಾದ್’ನನ್ನು ಕೂಡಲೇ ಪಯ್ಯೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಘಟನೆ ನಡೆದ ವೇಳೆ ಹರಿಪ್ರಸಾದ್ ತಾಯಿ ಮನೆಯಲ್ಲಿದ್ದರು. ಆದರೆ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಸ್ಫೋಟದ ಭಾರಿ ಶಬ್ದಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದು, ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ‌ ದಳ ಸ್ಥಳದಲ್ಲಿ ಶೋಧ ನಡೆಸಿದೆ.
ವಡಗರ ಡಿವೈಎಸ್ಪಿ ಅಬ್ದುಲ್ ಶರೀಫ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.

Join Whatsapp