ಬಜಪೆ: ಅವೈಜ್ಞಾನಿಕ ರಸ್ತೆ ಕಾಮಗಾರಿ; ಕೂಡಲೇ ಮಧ್ಯೆ ಪ್ರವೇಶಿಸಿ ಸರಿಪಡಿಸಲು ಜಿಲ್ಲಾಧಿಕಾರಿಗೆ ಎಸ್.ಡಿ.ಪಿ.ಐ ಒತ್ತಾಯ

Prasthutha|

ಬಜಪೆ: ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಕೂಡಲೇ ಮಧ್ಯೆ ಪ್ರವೇಶಿಸಿ ಸರಿಪಡಿಸಲು ಜಿಲ್ಲಾಧಿಕಾರಿಗೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಒತ್ತಾಯಿಸಿದೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಎಸ್.ಡಿ.ಪಿ.ಐ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಇರ್ಷಾದ್ ಬಜ್ಪೆ, ಬಜಪೆ ಗ್ರಾಮ ಪಂಚಾಯತ್ ಈಗ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತ್ ಆದ ಮೇಲೆ ನೂರಾರು ಸಮಸ್ಯೆಗಳ ಆಗರವಾಗಿ ಮಾರ್ಪಾಟಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಮುಖ್ಯ ರಸ್ತೆಯ ಅಗಲೀಕರಣದಲ್ಲಿ ಭಾರಿ ಸಮಸ್ಯೆಗಳನ್ನೆ ಸೃಷ್ಟಿ ಮಾಡಲಾಗಿದೆ. ಈ ಮೊದಲು ಬಜಪೆ ಚರ್ಚ್ ನಿಂದ ಈದ್ಗಾ ಮಸೀದಿವರೆಗೆ ಹದಿನಾಲ್ಕು ಮೀಟರ್ ನಂತೆ  ಚತುಷ್ಪಥ ರಸ್ತೆ, ರಸ್ತೆ ವಿಭಾಜಕ, ಸೂಕ್ತವಾದ ಚರಂಡಿ ವ್ಯವಸ್ಥೆ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸುವುದೆಂದು ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರು  ಎಸ್.ಡಿ.ಪಿ.ಐ ಮುಖಂಡರು  ಮನವಿ ಸಲ್ಲಿಸಲು ಹೋದಾಗ ರಸ್ತೆ ಕಾಮಗಾರಿ ಆರಂಭಿಸುವ ಮೊದಲು ಈ ರೀತಿಯಾಗಿ ಭರವಸೆಗಳನ್ನು ನೀಡಿದ್ದರು ಎಂದು ಅವರು ಹೇಳಿದರು.

- Advertisement -

ರಸ್ತೆ ಕಾಮಗಾರಿ ಆರಂಭವಾಗಿ ಕಿನ್ನಿಪದವು ನಿಸರ್ಗ ಹೋಟೆಲ್ ನಿಂದ ಹೊಸ ಪೆಟ್ರೋಲ್ ಬಂಕ್ ವರೆಗೆ ರಸ್ತೆಯ ಕೆಲಸ ಮುಗಿದು ಸಣ್ಣ ಪುಟ್ಟ ಕೆಲಸಗಳು ನಡೀತಿದೆ. ಆದರೆ ಭಜನಾ ಮಂದಿರದಿಂದ ಕೇಂದ್ರ ಮಸೀದಿವರೆಗೂ ಕೇವಲ ದ್ವಿಪಥ ಮಾತ್ರವಿದ್ದು ರಸ್ತೆ ವಿಭಾಜಕ ಇಲ್ಲ, ಚರಂಡಿ ಹಾಗೂ ಪಾದಾಚಾರಿ ಮಾರ್ಗ ಮಾಡಲು ಕೂಡ ಅಲ್ಲಿ ಸ್ಥಳವಿಲ್ಲ ಎಂದು ಇರ್ಷಾದ್ ಬಜ್ಪೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   ಇನ್ನು ಕಿನ್ನಿಪದವು ನಿಸರ್ಗ ಹೋಟೆಲ್ ನಿಂದ ಪೊರ್ಕೊಡಿ ದ್ವಾರದವರೆಗೂ ಸಾಗುವ ರಸ್ತೆಯು ಕಿರಿದಾಗುತ್ತ ಬರುತ್ತದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ನಿಸರ್ಗ ಹೋಟೆಲ್ ವರೆಗೆ  ಹದಿನಾಲ್ಕು ಮೀಟರ್ ಇದ್ದ ರಸ್ತೆಯು ಕಿನ್ನಿಪದವು ಪೆಟ್ರೋಲ್ ಬಂಕ್ ವರೆಗೆ ಹನ್ನೆರಡು ಮೀಟರ್ ಗೆ ಕಿರಿದಾಗುತ್ತದೆ. ಹಾಗೆಯೇ ಮುಂದುವರಿಯುತ್ತ ಹತ್ತು ಮತ್ತು ಎಂಟು ಮೀಟರ್ ಗೆ ರಸ್ತೆ ಕಾಮಗಾರಿಯು ಮುಂದುವರಿಯುತ್ತದೆ. ಇದಕ್ಕೆ ಕಾರಣ ಕೇಳಿದರೆ ಸಾಕಷ್ಟು ನಿಧಿ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

   ಈಗಾಗಲೇ ಎಸ್.ಡಿ.ಪಿ.ಐ ನಾಯಕರು ಹಾಗೂ ಬಜಪೆಯ ನಾಗರಿಕರು ಇದರ ಬಗ್ಗೆ ಅಪಸ್ವರ ಎತ್ತಿದ್ದಾರೆ. ಎಸ್.ಡಿ.ಪಿ.ಐ ನಾಯಕರು ಹೇಳಿಕೆಯನ್ನು ನೀಡಿದ್ದು ಹದಿನಾಲ್ಕು ಮೀಟರ್ ನಿಂದ ಕಿರಿದಾಗುತ್ತ ಎಂಟು ಮೀಟರ್ ವರೆಗೆ ಮಾಡುವ ರಸ್ತೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು ಇದು ಬಜಪೆ ಪಟ್ಟಣದ ಅಂದವನ್ನು ಕೆಡಿಸುತ್ತದೆ ಮಾತ್ರವಲ್ಲ ರಾಜ್ಯ ಹೆದ್ದಾರಿ ಆಗಿರುವುದರಿಂದ ಭಾರಿ ವಾಹನಗಳು ವೇಗವಾಗಿ ಓಡಾಡುತ್ತಿರುತ್ತವೆ ಇದರಿಂದ ಅಪಘಾತಗಳಿಗೆ ಎಡೆ ಮಾಡಿ ಕೊಟ್ಟಂತಾಗುತ್ತದೆ ಎಂದು ಎಸ್.ಡಿ.ಪಿ.ಐ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಇಸ್ಮಾಯಿಲ್ ಇಂಜಿನಿಯರ್ ಹೇಳಿದ್ದಾರೆ.

   ನಾವು ಮಾಡಿದ ಮನವಿಗಳಿಗೆ ನೀಡಿದ ಭರವಸೆಯಂತೆ ರಸ್ತೆಯನ್ನು ನಿರ್ಮಿಸಬೇಕು ಈಗ ನಡೆದಿರುವ ಕಾಮಗಾರಿಯಂತೆ ಹದಿನಾಲ್ಕು ಮೀಟರ್ ಗಳ ಚತುಷ್ಪಥ ರಸ್ತೆಯನ್ನು ನಿಧಿ ಲಭ್ಯತೆ ಇರುವವರೆಗೆ ಕಾಮಗಾರಿ ನಡೆಸಬೇಕು. ಅದರ ನಂತರ ಡಾಂಬರು ರಸ್ತೆಯನ್ನು ನಿರ್ಮಿಸಿ ನಿಧಿ ಬಂದ ಮೇಲೆ ಕಾಮಗಾರಿ ಆರಂಭಿಸಬೇಕು ಹಾಗೂ ಸುಸಜ್ಜಿತವಾದ ಚರಂಡಿ ವ್ಯವಸ್ಥೆ ಹಾಗೂ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು ಈ ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಯ ಪ್ರವರ್ತರಾಗಬೇಕೆಂದು ಇರ್ಷಾದ್ ಬಜ್ಪೆ ಒತ್ತಾಯಿಸಿದ್ದಾರೆ.

Join Whatsapp