ಬಿಜೆಪಿಯವರು ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ : ಪರಮೇಶ್ವರ್

Prasthutha|

ತುಮಕೂರು: ಬಿಜೆಪಿಯವರು ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಸಾಮಾಜಿಕ ನ್ಯಾಯ ನೀಡುವ ಬದ್ಧತೆ ಇಲ್ಲ. ಅವರ ಅಜೆಂಡಾದಲ್ಲಿಯೇ ಅದು ಇಲ್ಲ. ಅವರ ದೃಷ್ಟಿಕೋನವೇ ಬೇರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

- Advertisement -

ದಿವಂಗತ ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮದಿನ ಹಿನ್ನೆಲೆ ತುಮಕೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ. ಕಾಂಗ್ರೆಸ್ ಯವತ್ತೂ ಬಡವರ ಪರವಾಗಿದೆ. ಆದರೆ ಅದನ್ನು ಮತ್ತೆ ಮತ್ತೆ ಹೇಳಬೇಕಾಗಿದೆ. ಇವರೆಲ್ಲಾ ಅಲ್ಪಸಂಖ್ಯಾತರ ಪರ ಎಂದು ಟೀಕೆ ಮಾಡುತ್ತಾರೆ. ಹೌದಪ್ಪ. ಅಲ್ಪಸಂಖ್ಯಾತರು ಈ ದೇಶದಲ್ಲಿ ಹುಟ್ಟಿಲ್ವಾ? 15ರಿಂದ 17% ಅಲ್ಪಸಂಖ್ಯಾತರಿದ್ದಾರೆ ಅಂದರೆ ಎಷ್ಟು ಕೋಟಿ ಆಯ್ತು? ಕೋಟ್ಯಂತರ ಜನ ಇದ್ದಾರೆ, ಅವರು ಎಲ್ಲಿಗೆ ಹೋಗಬೇಕು? ಅವರ ವಿರುದ್ಧ ನೀವು ಮಾತನಾಡುತ್ತೀರಿ, ಅವರ ವಿರುದ್ಧ ನೀವು ಕಾರ್ಯಕ್ರಮ ಮಾಡುತ್ತೀರಿ ಎಂದರೆ ನಿಮಗೆ ಸಾಮಾಜಿಕ ನ್ಯಾಯ ಬದ್ಧತೆ ಏನೂ ಇಲ್ಲ ಎಂದು ಹರಿಹಾಯ್ದರು.

ಜೆಡಿಎಸ್‌ನವರು ಜಾತ್ಯಾತೀತ ಎಂದು ಇಟ್ಟುಕೊಂಡು ಅವರೂ ಬದಲಾಗಿದ್ದಾರೆ. ಕಾಂಗ್ರೆಸ್‌ನ ಬದ್ಧತೆ, ರಾಜೀವ್ ಗಾಂಧಿ, ದೇವರಾಜು ಅರಸು ಅವರ ಆಡಳಿತದ ಬಗ್ಗೆ ಎಲ್ಲರಿಗೂ ತಿಳಿಸಬೇಕು. ಬಿಜೆಪಿಯ ಸಮಾಜ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸಬೇಕು. ಬಿಜೆಪಿಯ ನಾಲ್ಕು ವರ್ಷದ ದುರಾಡಳಿತ ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಬರುವಂತೆ ಮಾಡಿದೆ. ಕಳೆದ ಸರ್ಕಾರದಲ್ಲಿ ಯಾವ ಅಭಿವೃದ್ಧಿ ಕಾರ್ಯವೂ ಆಗಿಲ್ಲ. ಶೋಷಿತ ಸಮುದಾಯಗಳನ್ನು ಮೇಲೆತ್ತುವ ಕೆಲಸ ಆಗಿಲ್ಲ. ಬಡವರನ್ನು ಶಕ್ತಿವಂತರನ್ನಾಗಿ ಮಾಡಬೇಕು ಎಂದು ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಹಣ ಖರ್ಚಾಗುತ್ತಿದೆ, ಅಭಿವೃದ್ಧಿಗೆ ದುಡ್ಡಿಲ್ಲ ಎನ್ನುವವರು ಸಾಮಾನ್ಯ ಜನರ ವಿರೋಧಿಗಳು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದರು.

- Advertisement -

ನನಗೆ ಒಂದು ಜವಾಬ್ದಾರಿ ನೀಡಲಾಗಿದೆ. ದೆಹಲಿಗೆ ಕರೆದು ರಾಹುಲ್ ಗಾಂಧಿ, ಖರ್ಗೆ ನನಗೆ ಜವಾಬ್ದಾರಿ ನೀಡಿದ್ದಾರೆ. ತುಮಕೂರು ಕ್ಷೇತ್ರದ ಗೆಲುವಿನ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹಾಕಿದ್ದಾರೆ. ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇಬೇಕು. ನೀವು ಈ ಕಚೇರಿಯಿಂದ ಹೊರಬೀಳುವಾಗ ಸಂಕಲ್ಪ ಮಾಡಿಕೊಂಡು ಹೋಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.



Join Whatsapp