ಬಿಜೆಪಿ ಸರ್ಕಾರ ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ದೇಶದ ರಾಜಧಾನಿಯನ್ನಾಗಿ ಮಾಡಿದೆ: ಡಿ.ಕೆ.ಶಿವಕುಮಾರ್

Prasthutha|

- Advertisement -

ಬೆಂಗಳೂರು; ಬಿಜೆಪಿ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ದೇಶದ ರಾಜಧಾನಿಯನ್ನಾಗಿ ಮಾಡಿದೆ. ನಮ್ಮ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರಸಗೊಬ್ಬರ, ಔಷಧಿ ಬೆಲೆ ಏರಿಕೆಯಾಗಿದೆ. ಇವರ ಭದುಕು ಭದ್ರಪಡಿಸಬೇಕು. ರೈತರ ಜತೆಗೆ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೇಶದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಿರುದ್ಯೋಗ ನಿಭಾಯಿಸಿ ಯುವ ಸಮೂಹಕ್ಕೆ ಉದ್ಯೋಗ ಸಿಗುವಂತೆ ಮಾಡಬೇಕು. ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ ಜನರ ಬದುಕಿನಲ್ಲಿ ನೆಮ್ಮದಿ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.

- Advertisement -

ಭಾರತ ಐಕ್ಯತಾ ಯಾತ್ರೆ ಕುರಿತು ಪಕ್ಷದ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಪಕ್ಷದ ಪದಾಧಿಕಾರಿಗಳು ಹಾಗೂ ಶಾಸಕರ ಜತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಭೆ ಮಾಡಿ ವಿವರವಾಗಿ ಚರ್ಚಿಸಿದ್ದಾರೆ. ಕುವೆಂಪು ಹೇಳಿದಂತೆ ಈ ದೇಶದಲ್ಲಿ ಸಾಮರಸ್ಯ ವೃದ್ಧಿಯಾಗಿ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು. ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಕುಸಿತದಿಂದ ಜನರ ಆದಾಯ ಕುಸಿದು ವೆಚ್ಚ ಗಗನಕ್ಕೆರುತ್ತಿದೆ ಎಂದರು.

ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಆಗಬಹುದಿತ್ತು, ಮಂತ್ರಿ ಆಗಬಹುದಿತ್ತು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರಬಹುದಿತ್ತು. ಆದರೆ ಅವರು ಯಾವುದೇ ಅಧಿಕಾರ ಬಯಸದೇ ಪಕ್ಷ ಹಾಗೂ ದೇಶ ಉಳಿಸಲು ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ. ನಮ್ಮ ನಾಯಕರು ದಂಡಿಯಾತ್ರೆ ಮೂಲಕ ಹೋರಾಟ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು. ನೀವು ನಾವೆಲ್ಲ ಅವರ ಮಾರ್ಗದರ್ಶನದಂತೆ ನಡೆಯುತ್ತಿದ್ದೇವೆ. ನಾವು ಮೇಕೆದಾಟು ಪಾದಯಾತ್ರೆ ಮಾಡಿದೆವು. ಇದರಿಂದ ಹಳೇ ಮೈಸೂರು ಭಾಗದ ಜನರಿಗೆ ಧೈರ್ಯ ತುಂಬುವ ಪ್ರಯತ್ನ ನಡೆಯಿತು. ನವ ಸಂಕಲ್ಪ ಶಿಬಿರದಲ್ಲಿ ನಾನು ಸಲಹೆ ಕೊಟ್ಟಾಗ ಸೋನಿಯಾ ಗಾಂಧಿ ಅವರು ಅದನ್ನು ಒಪ್ಪಿ ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲು ಸೂಚಿಸಿದರು. ಕೆಲವು ಕ್ಷೇತ್ರದಲ್ಲಿ 225 ಕಿ.ಮೀ ಪಾದಯಾತ್ರೆ ಮಾಡಲಾಗಿದೆ ಎಂದರು.

ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮಾಡಿದ ಸೇವೆಯನ್ನು ಆಡಳಿತ ಪಕ್ಷ ಕೂಡ ಮಾಡಲು ಸಾಧ್ಯವಾಗಲಿಲ್ಲ. ಜನರನ್ನು ರಕ್ಷಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತರಲು ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಅತ್ಯುತ್ತಮ ಗೆಲುವು ದಾಖಲಿಸಿದೆ. ರಾಜ್ಯದ ಶಿಕ್ಷಕರು, ಪಧವೀದರರು, ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಈ ಸಾಧನೆಗೆ ನಾವು ಕಾರಣವಲ್ಲ. ನಿಮ್ಮ ಶ್ರಮದ ಫಲ ಈ ಗೆಲುವು ಎಂದರು.

ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ 21 ದಿನ ಸಮಯ ನೀಡಿ ಪಾದಯಾತ್ರೆ ಮಾಡುತ್ತಿರುವುದು ನಮಗೆ ಶಕ್ತಿಯಾಗುತ್ತದೆ. ರಾಜ್ಯದ ಎಲ್ಲ ಶಾಸಕರು ತಮಗೆ ನಿಗದಿ ಮಾಡಿರುವ ದಿನದಂದು ಈ ಯಾತ್ರೆಗೆ ತಮ್ಮ ಖರ್ಚಿನಲ್ಲಿ ಕನಿಷ್ಠ 5 ಸಾವಿರ ಜನರನ್ನು ಕಡ್ಡಾಯವಾಗಿ ಕರೆತರಬೇಕು. ಪರಾಜಿತ ಅಭ್ಯರ್ಥಿಗಳು ತಮ್ಮದೇ ಪೋಸ್ಟರ್ ಹಾಕಿಕೊಂಡು ಹೆಚ್ಚಿನ ಜನರನ್ನು ಒಗ್ಗೂಡಿಸಬೇಕಕು. ದೂರದ ಕ್ಷೇತ್ರದ ಜನರಿಗೂ ಅವಕಾಶ ನೀಡಲಾಗಿದೆ. ಒಂದೊಂದು ದಿನ 10 ಕ್ಷೇತ್ರಗಳಿಗೆ ಅವಕಾಶ ನೀಡಲಾಗಿದೆ. ಆ ಮೂಲಕ 224 ಕ್ಷೇತ್ರಗಳಿಗೂ ಅವಕಾಶ ನೀಡಲಾಗಿದೆ. ಈ ನಾಯಕರುಗಳು ತಮ್ಮ ಜನರನ್ನು ಕರೆತಂದು ಭಾಗವಹಿಸಿ, ಸ್ಥಳೀಯ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸುದ್ದಿ ಪ್ರಕಟವಾಗುವಂತೆ ನೋಡಿಕೊಳ್ಳಬೇಕು ಎಂದರು.

ನೀವೆಲ್ಲರೂ ವಿಧಾನಸೌಧದಲ್ಲಿ ಓಡಾಡಬೇಕು, ಅಧಿಕಾರ ಅನುಭವಿಸಬೇಕು ಎಂಬುದು ನಮ್ಮ ಆಸೆ. ನೀವಿಲ್ಲದಿದ್ದರೆ ನಾವು ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕನ್ಯಾಕುಮಾರಿಯಲ್ಲಿ ಸೆ. 7 ರಂದು ಪಾದಯಾತ್ರೆ ಆರಂಭಿಸುತ್ತಿದ್ದಾರೆ. ನಾವು ಕೆಲವು ನಾಯಕರು ಹೋಗಿ ಭಾಗವಹಿಸಿ ವಾಪಸ್ಸಾಗುತ್ತೇವೆ. 7 ರಂದು ಸಂಜೆ 5 ಗಂಟೆಗೆ ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ ಸದ್ಭಾವನಾ ಯಾತ್ರೆ ಮಾಡಬೇಕು. 8, 9 ಹಾಗೂ 10 ರಂದು ಎಲ್ಲ 224 ಕ್ಷೇತ್ರಗಳಲ್ಲಿ ಒಂದೊಂದು ದಿನ ಭಾರತ ಜೋಡೋ ಯಾತ್ರೆ ವಿಚಾರವಾಗಿ ಬ್ಲಾಕ್ ಮಟ್ಟದಲ್ಲಿ ತಯಾರಿ ಸಭೆ ಮಾಡಬೇಕು. ಈ ಸಭೆಯಲ್ಲಿ ಸಂಯೋಜಕರು ಇರುತ್ತಾರೆ. ಜಿಲ್ಲಾ, ಬ್ಲಾಕ್, ಪಂಚಾಯಿತಿ ಮಟ್ಟದಲ್ಲಿ ಎಲ್ಲರಿಗೂ ಉಸ್ತುವಾರಿ ಜವಾಬ್ದಾರಿ ನೀಡಿ.

ರಾಜ್ಯದಲ್ಲಿ 21 ದಿನಗಳ ಕಾಲ ನಡೆಯುವವರಿಗೆ ಅವಕಾಶ ನೀಡುತ್ತೇವೆ. ಅದರ ಜತೆಗೆ ನೀವು ನಿಮ್ಮ ಕ್ಷೇತ್ರದಲ್ಲೂ ಸಂಘಟನೆ ಆಗುತ್ತಿರಬೇಕು. ನೀವು ಇದಕ್ಕೆ ನೋಂದಣಿ ಮಾಡಿಕೊಳ್ಳಬೇಕು. ನೀವು ಒಂದು ದಿನವಾದರೂ ನಡೆಯಬಹುದು, 21 ದಿನವಾದರೂ ಬರಬಹುದು. ಕೇವಲ ಫೋಟೋಗೆ ಬರುವವರು ಖಂಡಿತಾ ಬರಬೇಡಿ. ಯಾರೆಲ್ಲಾ ಸಭೆ ಮಾಡಿ ತೀರ್ಮಾನ ಕೈಗೊಳ್ಳುತ್ತೀರೋ ಅವರು ಕಂಟ್ರೋಲ್ ರೂಮ್ ಗೆ ಮಾಹಿತಿ ಕಳುಹಿಸಬೇಕು ಎಂದರು.

ಬ್ಲಾಕ್, ಡಿಸಿಸಿ ಅಧ್ಯಕ್ಷರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳು ಯಾರೆಲ್ಲ ನಡೆಯಲು ಸಮರ್ಥರೋ ಅವರ ಪಟ್ಟಿಯನ್ನು ನೀಡಿ. ಎಲ್ಲ ಕ್ಷೇತ್ರಗಳಿಗೆ ಕೆಲವರನ್ನು ಉಸ್ತುವಾರಿ ವಹಿಸುತ್ತೇವೆ. ಎಐಸಿಸಿ ಕಾರ್ಯದರ್ಶಿಗಳು ಈಗಾಗಲೇ ತೀರ್ಮಾನಿಸಿದ್ದು, ಬ್ಲಾಕ್ ಅಧ್ಯಕ್ಷರಿಂದ ಹಿಡಿದು ಹೊಸತಾಗಿ ನೇಮಕಗೊಂಡಿರುವ ಪದಾಧಿಕಾರಿಗಳ ಕೆಲಸಗಳನ್ನು ಪರಿಶೀಲಿಸಲಾಗುವುದು. ಬ್ಲಾಕ್ ಅಧ್ಯಕ್ಷರೇ ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಹೀಗಾಗಿ ನಿಮ್ಮನ್ನು ಕರೆಸಿ ಮಾತನಾಡುತ್ತಿದ್ದೇವೆ ಎಂದರು.

ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು. ನಂತರ ಮಾರ್ಗ ಮಧ್ಯೆಯಲ್ಲಿ ಸಣ್ಣ ಪುಟ್ಟ ಸಭೆಗಳನ್ನು ಮಾಡಲಾಗುವುದು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಯಾರು ಸಹಕಾರ ನೀಡುವುದಿಲ್ಲವೋ ನಮ್ಮ ಸಂಯೋಜಕರುಗಳಿಗೆ ತಿಳಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಎಲ್ಲರ ಜತೆ ಸಂಪರ್ಕ ಸಾಧಿಸಿ ಎಲ್ಲರ ಕೆಲಸದ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Join Whatsapp