ರಾಜ್ಯದ 3 ಪಾಲಿಕೆಗಳಲ್ಲೂ ಬಿಜೆಪಿಯದೇ ಅಧಿಕಾರ: ನಳಿನ್ ಕುಮಾರ್ ಕಟೀಲ್

Prasthutha|

ಬೆಂಗಳೂರು: ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ಭಾರತೀಯ ಜನತಾ ಪಾರ್ಟಿಯೇ ಅಧಿಕಾರ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ಕುಮಾರ್ ಕಟೀಲ್ ತಿಳಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 3 ಪಾಲಿಕೆಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ. ಬೆಳಗಾವಿಯಲ್ಲಿ ಮೊದಲ ಬಾರಿಗೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿದ್ದು ರಾಷ್ಟ್ರೀಯ ವಿಚಾರಧಾರೆ, ಬಿಜೆಪಿಯ ಉತ್ತಮ ಆಡಳಿತವನ್ನು ಜನರು ಬೆಂಬಲಿಸಿದ್ದಾರೆ ಎಂದು ವಿವರಿಸಿದರು.

- Advertisement -


ಹುಬ್ಬಳ್ಳಿ- ಧಾರವಾಡದಲ್ಲಿ ನಮ್ಮ ಆಡಳಿತ ಮುಂದುವರಿಯುತ್ತಿದೆ. ಈ ಅವಳಿ ನಗರಕ್ಕೆ ಯಡಿಯೂರಪ್ಪ ಅವರು ಅತಿ ಹೆಚ್ಚು ಅನುದಾನ ನೀಡಿದ್ದರು. ಬೆಳಗಾವಿಯಲ್ಲೂ ನಮ್ಮ ಶಾಸಕರು, ಜನಪ್ರತಿನಿಧಿಗಳ, ಕಾರ್ಯಕರ್ತರ ಪ್ರಯತ್ನ ಫಲ ನೀಡಿದೆ ಎಂದರು.
ಕಲಬುರ್ಗಿ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಂತಿತ್ತು. ಅಲ್ಲಿಯೂ ಅತಿ ಹೆಚ್ಚು ಸ್ಥಾನ ಗಳಿಸಿದ್ದೇವೆ. ಲೋಕಸಭೆ ಮತ್ತು ಇತರ ಚುನಾವಣೆಗಳಲ್ಲಿ ಬಂದ ಫಲಿತಾಂಶದ ಮಾದರಿ ಮುಂದುವರಿದಿದೆ ಎಂದು ಅಭಿಪ್ರಾಯಪಟ್ಟರು.


ಕೇಂದ್ರ ಸರಕಾರದ ಸಾಧನೆಗಳು, ಯಡಿಯೂರಪ್ಪ ಅವರ ಎರಡು ವರ್ಷಗಳ ಆಡಳಿತ, ಬಸವರಾಜ ಬೊಮ್ಮಾಯಿ ಅವರ ಕಲ್ಯಾಣ ಕರ್ನಾಟಕದ ಚಿಂತನೆಯ ಆಡಳಿತದಿಂದ ಜನಾಶೀರ್ವಾದ ನಮಗೆ ಸಿಕ್ಕಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಟವೆಲ್ ಹಾಕಬೇಡಿ ಎಂಬ ಸ್ಪಷ್ಟ ಸಂದೇಶವನ್ನು ಜನರು ಕಾಂಗ್ರೆಸ್ ಪಕ್ಷದವರಿಗೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ವಿಫಲರಾಗಿದ್ದಾರೆ ಎಂಬ ಸಂದೇಶ ಹೋಗಬೇಕೆಂಬ ಉದ್ದೇಶದಿಂದ ಸಿದ್ದರಾಮಣ್ಣ ಅವರು ಈ ಬಾರಿ ಹೆಚ್ಚಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರಲಿಲ್ಲ ಎಂದು ತಿಳಿಸಿದರು.

- Advertisement -


2 ಸರಕಾರಗಳ ಅಭಿವೃದ್ಧಿ ಕಾರ್ಯಗಳು, ವ್ಯವಸ್ಥಿತ ಚುನಾವಣಾ ತಂತ್ರಗಾರಿಕೆ, ಸಂಘಟನಾ ಪ್ರಯತ್ನ- ನಮಗೆ ಉತ್ತಮ ಫಲ ಕೊಟ್ಟಿದೆ. ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಉಸ್ತುವಾರಿಗಳೂ ಆದ ನಿರ್ಮಲ್ ಕುಮಾರ್ ಸುರಾಣಾ ಅವರ ನೇತೃತ್ವದಲ್ಲಿ ವಿವಿಧ ತಂಡಗಳ ಜನಪ್ರತಿನಿಧಿಗಳ, ಕಾರ್ಯಕರ್ತರ ಪರಿಶ್ರಮದಿಂದ ನಾವು ಗೆಲುವು ಸಾಧಿಸಿದ್ದೇವೆ ಎಂದರು.
3 ನಗರಪಾಲಿಕೆಗಳು, ಕೆಲವು ಉಪ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಇದಕ್ಕಾಗಿ ಮತದಾರರನ್ನು ಅಭಿನಂದಿಸುವುದಾಗಿ ಹಾಗೂ ನಮಗೆ ಆಶೀರ್ವಾದ ಮಾಡಿದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

Join Whatsapp