ಬೆಳ್ತಂಗಡಿ: ಪ್ರತ್ಯೇಕ ಬೈಕ್ ಅಪಘಾತ; ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Prasthutha|

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

- Advertisement -

ಬೆಳ್ತಂಗಡಿ ತಾಲೂಕು ಕರಾಯ ಮುರಿಯಾಲ ನಿವಾಸಿ ಕೆ.ಎಂ.ಅಬೂಬಕ್ಕರ್ ಅವರ ಪುತ್ರ ಮುಹಮ್ಮದ್ ಶಫೀಕ್ (20) ಹಾಗೂ ಕಲ್ಲೇರಿ ಕುಪ್ಪೆಟ್ಟಿಯ ಇಬ್ರಾಹೀಂ ಖಂಡಿಗ ಅವರ ಪುತ್ರ ಸಫ್ವಾನ್ (19) ಮೃತ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ಮೃತದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

ಶಫೀಕ್ ಅವರು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಬಿಬಿಎಂ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಮನೆಯಿಂದ ಬೈಕ್ ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಮಡಂತ್ಯಾರ್ ಕಡೆಯಿಂದ ಬರುತ್ತಿದ್ದ ಮತ್ತೊಂದು ಬೈಕ್ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಶಫೀಕ್ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್, ಇಂದ್ರಪ್ರಸ್ಥ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪೂರೈಸಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ. ಬಸ್ಸಿನಲ್ಲೇ ಪ್ರತಿನಿತ್ಯ ಕಾಲೇಜಿಗೆ ತೆರಳುತ್ತಿದ್ದ ಶಫೀಕ್ ಸೋಮವಾರ ಬೈಕ್ ನಲ್ಲಿ ತೆರಳಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಟಿಪ್ಪರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತ್ಯು

ತಂದೆಯನ್ನು ಕೆಲಸದ ಸ್ಥಳಕ್ಕೆ ಬೈಕ್ ನಲ್ಲಿ ಡ್ರಾಪ್ ಮಾಡಿ ಮನೆಗೆ ಬರುತ್ತಿದ್ದಾಗ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ.

ಕಲ್ಲೇರಿ ನಿವಾಸಿ ಇಬ್ರಾಹೀಂ ಖಂಡಿಗ ಅವರ ಪುತ್ರ ಸಫ್ವಾನ್ (19) ಮೃತ ವಿದ್ಯಾರ್ಥಿ. ಇವರು ತುಂಬೆಯಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದರು. ಇಂದು ಬೆಳಗ್ಗೆ 9.30ರ ಸುಮಾರಿಗೆ ತಂದೆಯನ್ನು ಕೆಲಸದ ಸ್ಥಳಕ್ಕೆ ಬೈಕ್ ನಲ್ಲಿ ಬಿಟ್ಟು ಮನೆಗೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಮೃತಪಟ್ಟ ಸಫ್ವಾನ್ ಮತ್ತು ಶಫೀಕ್

ಸಫ್ವಾನ್ ಮತ್ತು ಶಫೀಕ್ ಸಂಬಂಧಿಕರಾಗಿದ್ದು, ಇಬ್ಬರು ಯುವಕರನ್ನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ.

ಸಫ್ವಾನ್ ಅವರ ಅಂತ್ಯಸಂಸ್ಕಾರ ಮುರುಗೋಳಿ ಮಸೀದಿಯ ಖಬರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Join Whatsapp