ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆಗೆ ರಾಜ್ಯಪಾಲ ಅಂಕಿತ

Prasthutha|

ಬೆಂಗಳೂರು: ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆಗೆ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.

- Advertisement -


ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸುವ ಸಲುವಾಗಿ ಜಾರಿಗೆ ತರಲಾಗಿರುವ ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಕಾಯ್ದೆ–2021 ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ-2021 ಜಾರಿಗೆ ಬಂದಿದೆ.

ರಾಜ್ಯದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು, ನ್ಯಾಯಾಲಯ, ನ್ಯಾಯಮಂಡಳಿ, ಪ್ರಾಧಿಕಾರದ ಯಾವುದೇ ತೀರ್ಪು ಅಥವಾ ಆದೇಶ ಇದ್ದರೂ ಕಾಯ್ದೆ ಜಾರಿಯಾದ ದಿನದವರೆಗೆ ಅಸ್ತಿತ್ವದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು (ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ, ಬೌದ್ಧ ವಿಹಾರ, ಮಜರ್ ಇತರೆ) ಸಂರಕ್ಷಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

- Advertisement -


ಆದರೆ ತೆರವಿಗೆ ಸಂಬಂಧಪಟ್ಟಂತೆ ಯಾವುದೇ ಪ್ರಕರಣವು ಯಾವುದೇ ನ್ಯಾಯಾಲಯದಲ್ಲಿ ಇತ್ಯರ್ಥದ ಹಂತದಲ್ಲಿದ್ದರೆ ಸಂರಕ್ಷಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರವು ಭವಿಷ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಪರವಾನಗಿ ಇಲ್ಲದೆ ಅವಕಾಶ ನೀಡುವಂತೆ ಇಲ್ಲ. ಆದರೆ ಕಾನೂನು ಹಾಗೂ ಸರ್ಕಾರ ಆಗಾಗ ವಿಧಿಸುವ ಷರತ್ತುಗಳಿಗೆ ಒಳಪಟ್ಟಂತೆ ಸಂರಕ್ಷಿತ ಕಟ್ಟಡಗಳಲ್ಲಿ ಧಾರ್ಮಿಕ ಚಟುವಟಿಕೆ ನಡೆಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಬಹುದು.

Join Whatsapp