ಕ್ಷುಲ್ಲಕ ವಿಷಯಕ್ಕೆ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ ಯತ್ನ: ಬಜರಂಗದಳದ ಐವರ ಬಂಧನ

Prasthutha|

ಸುಳ್ಯ: ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಪೊಲೀಸರು ಬಜರಂಗ ದಳದ ಐವರನ್ನು ಬಂಧಿಸಿದ್ದಾರೆ.

- Advertisement -


ಬಜರಂಗ ದಳದ ಕಾರ್ಯಕರ್ತರಾದ ಅಭಿಲಾಷ್, ಸುನೀಲ್, ಸುಧೀರ್, ಶಿವ ಮತ್ತು ರಂಜಿತ್ ಬಂಧಿತ ಆರೋಪಿಗಳಾಗಿದ್ದಾರೆ. ಸದಾಶಿವ, ರಂಜಿತ್ ಮತ್ತು ಭಾಸ್ಕರ್ ಎಂಬವರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುಳ್ಯದ ಬೆಳ್ಳಾರೆಯ ಕಳಂಜ ಎಂಬಲ್ಲಿ ಕಳೆದ ರಾತ್ರಿ ನಡೆದಿದ್ದು, ಮಾರಣಾಂತಿಕ ಹಲ್ಲೆಯಿಂದ ಗಂಭೀರ ಗಾಯಗೊಂಡ ಮಸೂದ್ (19) ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.


ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ನಿವಾಸಿಯಾದ ಮಸೂದ್ ಒಂದು ತಿಂಗಳ ಹಿಂದೆ ಸುಳ್ಯದ ಕಳಂಜ ಗ್ರಾಮದಲ್ಲಿರುವ ತನ್ನ ಅಜ್ಜ ಅಬ್ಬು ಮುಕ್ರಿ ಅವರ ಮನೆಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದ. ನಿನ್ನೆ ಸಂಜೆ ಸುಧೀರ್ ಮತ್ತು ಮಸೂದ್ ನಡುವೆ ಹೊಡೆದಾಟ ನಡೆದಿದೆ. ಇದೇ ವಿಷಯ ಮುಂದಿಟ್ಟು ಆರೋಪಿಗಳು ರಾತ್ರಿ ಮಸೂದ್ ನನ್ನು ಮಾತುಕತೆಯಲ್ಲಿ ಪ್ರಕರಣ ಮುಗಿಸುವುದಾಗಿ ಕರೆಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡು ಅಸ್ವಸ್ಥನಾಗಿ ಬಿದ್ದಿದ್ದ ಮಸೂದ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

- Advertisement -


ಯುವಕ ಮಸೂದ್ ನ ಸ್ಥಿತಿ ಗಂಭೀರವಾಗಿದ್ದು, ಆತನ ಬಗ್ಗೆ ವೈದ್ಯರು ನಿಸ್ಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನನ್ನು ವೆನ್ ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲು ಕುಟುಂಬದವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Join Whatsapp