ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಬಹುಜನ ಸಮಾಜ ಪಾರ್ಟಿ ಬೆಂಬಲ

Prasthutha|

ಬೆಂಗಳೂರು: ಏಳನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿರುವ ಮುಷ್ಕರವನ್ನು ಬಹುಜನ ಸಮಾಜ ಪಾರ್ಟಿ ಬೆಂಬಲಿಸುತ್ತದೆ ಎಂದು ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದ್ದಾರೆ.

- Advertisement -


ಕೂಡಲೇ ಸರ್ಕಾರವು ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸಬೇಕೆಂದು ಬಿಎಸ್ಪಿ ಆಗ್ರಹಿಸುತ್ತದೆ ಎಂದಿದ್ದಾರೆ.
ಬಜೆಟ್’ಗೆ ಮೊದಲು ಸರ್ಕಾರಿ ನೌಕರರ ಸಂಘದ ಜೊತೆ ಮಾತುಕತೆ ನಡೆಸಿದ್ದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಬಜೆಟ್ ಮಂಡಿಸುವಾಗ 7 ನೇ ವೇತನ ವರದಿ ಜಾರಿಗೆ ಸಂಬಂಧಿಸಿದಂತೆ ಕೇವಲ 6,000 ಕೋಟಿ ರೂಪಾಯಿಗಳನ್ನು ಕಾಯಿದಿರಿಸಿರುವುದಾಗಿ ಘೋಷಣೆ ಮಾಡಿದ್ದರು. ಆದರೆ ಬಜೆಟ್’ನ ಪ್ರತಿಗಳಲ್ಲಿ ಈ ಘೋಷಣೆಗೆ ಸಂಬಂಧಿಸಿದ ವಿಚಾರ ದಾಖಲಾಗಿಲ್ಲ. ಆ ಮೂಲಕ ಮುಖ್ಯಮಂತ್ರಿ ಸದನದಲ್ಲಿ ಸುಳ್ಳು ಹೇಳಿದ್ದರು ಎಂದು ಟೀಕಿಸಿದ್ದಾರೆ.


ಈಗಾಗಲೇ ಸರ್ಕಾರದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳ ಕಾರ್ಯಭಾರವನ್ನು ಈಗಿರುವ ನೌಕರರೇ ಹೆಚ್ಚುರಿಯಾಗಿ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ನೌಕರರು ಈ ಹೆಚ್ಚುವರಿ ಕಾರ್ಯ ಭಾರದಿಂದಾಗಿ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮುಖಾಂತರ ಈ ಅಧಿಕ ಕಾರ್ಯದ ಹೊರೆಯನ್ನು ಇಳಿಸಬೇಕು ಹಾಗೂ ರಾಜ್ಯದ ಯುವಜನತೆಗೆ ಉದ್ಯೋಗ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನು ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್’ಗಡದಂತ ರಾಜ್ಯಗಳು ತಮ್ಮ ಸರ್ಕಾರಿ ನೌಕರಿಗೆ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ರಾಜ್ಯದಲ್ಲೂ ಸಹ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಕಳೆದ ಹಲವಾರು ದಿವಸಗಳಿಂದ ಎನ್ ಹೆಚ್ ಎಂ ನೌಕರರು ತಮ್ಮನ್ನು ಕಾಯಂ ಗೊಳಿಸಬೇಕೆಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಪಂಜಾಬ್ ಸೇರಿದಂತೆ ಹಲವಾರು ರಾಜ್ಯಗಳು ಎನ್ ಹೆಚ್ ಎಂ ನೌಕರರನ್ನು ಕಾಯಂಗೊಳಿಸಲು ಮುಂದಾಗಿವೆ. ಅದೇ ರೀತಿ ರಾಜ್ಯ ಸರ್ಕಾರವು ಸಹ ಎನ್ ಹೆಚ್ ಎಂ ನೌಕರರನ್ನು ಖಾಯಂ ಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಬಿಎಸ್ಪಿ ಆಗ್ರಹಿಸುತ್ತದೆ ಎಂದಿದ್ದಾರೆ.

- Advertisement -


ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ಈಡೇರಿಸ ಬೇಕು. ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಆರೋಗ್ಯ ಮತ್ತು ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಹಲವಾರು ತಿಂಗಳುಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ. ತಕ್ಷಣ ಅವರ ಬೇಡಿಕೆಯನ್ನು ಮಾನವೀಯ ದೃಷ್ಟಿಯಿಂದ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಬಿಎಸ್ಪಿ ಒತ್ತಾಯಿಸುತ್ತದೆ ಎಂದಿದ್ದಾರೆ.


ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದ ನಡುವೆ ಅಗಾಧವಾದ ಅಂತರವಿದ್ದು, ತಕ್ಷಣ ರಾಜ್ಯ ಸರ್ಕಾರವು ವೇತನ ತಾರತಮ್ಯವನ್ನು ನಿವಾರಿಸಬೇಕು. ನೌಕರರ ವೇತನ ಮತ್ತು ಪಿಂಚಣಿ ವಿಚಾರ ಬಂದಾಗ ಸರ್ಕಾರವು ಆರ್ಥಿಕ ಹೊರೆ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುವುದು ಸರಿಯಲ್ಲ. ಸರ್ಕಾರದ 40% ಕಮಿಷನ್ ವ್ಯವಹಾರವನ್ನು ಮಟ್ಟ ಹಾಕಿದರೆ ಹಾಗೂ ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದರೆ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬಹುದು. ನೌಕರರ ಬೇಡಿಕೆ ಈಡೇರಿಕೆ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎಂದು ಎಂ. ಕೃಷ್ಣಮೂರ್ತಿ ಎಚ್ಚರಿಕೆ ನೀಡಿದ್ದಾರೆ.



Join Whatsapp