ನನಗೆ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ್ ಕಾರಣ: ಜಗದೀಶ್ ಶೆಟ್ಟರ್ ಆರೋಪ

Prasthutha|

ಹುಬ್ಬಳ್ಳಿ: ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೇ ನೇರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇರ ಆರೋಪ ಮಾಡಿದ್ದಾರೆ.

- Advertisement -


ಹುಬ್ಬಳ್ಳಿ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಗದೀಶ್ ಶೆಟ್ಟರ್, ಬಿಜೆಪಿಯ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಬಿ.ಎಲ್. ಸಂತೋಷ್ ಅವರ ಮಾನಸ ಪುತ್ರ. ಈ ಮಾನಸ ಪುತ್ರನಿಗೆ ಟಿಕೆಟ್ ನೀಡಲು ಸಂತೋಷ್ ನನ್ನಂತಹ ಹಿರಿಯ ನಾಯಕನನ್ನು ಪಕ್ಷದಿಂದ ಹೊರಹಾಕಿದರು ಎಂದು ಶೆಟ್ಟರ್ ಟೀಕಾಪ್ರಹಾರ ನಡೆಸಿದರು.


ಅಧಿಕಾರದ ಆಸೆಯಿಂದ ನಾನು ಕಾಂಗ್ರೆಸ್ ಸೇರಿಲ್ಲ. ಮೂಲ ಬಿಜೆಪಿಗರಿಗೆ ಆಗುತ್ತಿರುವ ಅನ್ಯಾಯದಿಂದಾಗಿ ನಾನೇ ಪಕ್ಷ ಬಿಡುವಂತಾಯಿತು. ಪಕ್ಷದಲ್ಲಿನ ಎಲ್ಲ ಬೆಳವಣಿಗೆಗಳ ಬಗ್ಗೆ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಶೆಟ್ಟರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

- Advertisement -


ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಕಾರಣ ಅಲ್ಲ. ಟಿಕೆಟ್ ತಪ್ಪಲು ಕಾರಣ ಆದವರ ಹೆಸರು ಹೇಳುವ ಸಮಯ ಈಗ ಬಂದಿದೆ ಎಂದ ಅವರು, ಸಾರ್ವಜನಿಕ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ, ಆಪಾದನೆಗಳಿಲ್ಲ. ಯಡಿಯೂರಪ್ಪ, ಅನಂತ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಈಗ ಯಡಿಯೂರಪ್ಪ ನಂತರ ರಾಜ್ಯದಲ್ಲಿ ಪ್ರಮುಖ ಲಿಂಗಾಯತ ನಾಯಕ ನಾನೇ. ಹೀಗಿರುವಾಗ ನನ್ನನ್ನು ಬಿಜೆಪಿಯಲ್ಲಿ ಈ ಮಟ್ಟಕ್ಕೆ ಕಡೆಗಣಿಸಿದ್ದು ತೀರಾ ನೋವುಂಟು ಮಾಡಿದೆ ಎಂದರು.



Join Whatsapp