ಮೂರನೇ ಬಾರಿ ವಿಚಾರಣೆಗೆ ಹಾಜರಾದ ಆಯಿಷಾ ಸುಲ್ತಾನಾ | ಕೊಚ್ಚಿಗೆ ಹಿಂದಿರುಗಲು ಅವಕಾಶ

Prasthutha|

ಕೊಚ್ಚಿ: ಲಕ್ಷದ್ವೀಪ ಪೊಲೀಸರು ದಾಖಲಿಸಿರುವ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಆಯಿಷಾ ಸುಲ್ತಾನಾ ಅವರನ್ನು ಮೂರನೇ ಬಾರಿ ವಿಚಾರಣೆ ನಡೆಸಿ ಬಿಡುಗಡೆಗೊಳಿಸಲಾಗಿದ್ದು, ಕೊಚ್ಚಿಗೆ ಹಿಂದಿರುಗಲು ನಟಿಗೆ ಕವರತ್ತಿ ಪೊಲೀಸರು ಅನುಮತಿ ನೀಡಿದ್ದಾರೆ.

- Advertisement -

ಇಂದು ಬೆಳಿಗ್ಗೆ ಕವರತ್ತಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಟಿಯನ್ನು ವಿಚಾರಣೆ ನಡೆಸಲಾಗಿದ್ದು, ಬೆಳಿಗ್ಗೆ 9:45 ಕ್ಕೆ ಪ್ರಾರಂಭವಾದ ವಿಚಾರಣೆಯು ಮಧ್ಯಾಹ್ನ 12:30 ತನಕ ನಡೆಯಿತು. ಬುಧವಾರ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಕೇರಳ ಹೈಕೋರ್ಟ್ ನಿರ್ದೇಶನದಂತೆ ಅವರನ್ನು ಬಂಧಿಸದೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕವರತ್ತಿ ಪೊಲೀಸರು ಕೊಚ್ಚಿಗೆ ಹಿಂದಿರುಗಲು ನಟಿಗೆ ಅನುಮತಿ ನೀಡಿದ್ದಾರೆ.

ನಾಳೆ ಕ್ವಾರಂಟೈನ್ ಪೂರ್ಣಗೊಂಡ ಬಳಿಕ ಶನಿವಾರ ಕೊಚ್ಚಿಗೆ ಹೋಗಬಹುದು ಎಂದು ಕವರತ್ತಿ ಪೊಲೀಸರು ತಿಳಿಸಿದ್ದಾರೆ ಎಂದು ಆಯಿಷಾ ಸುಲ್ತಾನಾ ಹೇಳಿದ್ದಾರೆ. ಆಯಿಷಾ ಸುಲ್ತಾನಾ ಅವರು ಶನಿವಾರ ಕೊಚ್ಚಿಗೆ ಹೋಗುವುದಾಗಿ ತಿಳಿಸಿದ್ದು, ಇನ್ನು ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟೀಸು ನೀಡಿಲ್ಲ ಎಂದು ತಿಳಿಸಿದ್ದಾರೆ. ಆಯಿಷಾ ತನ್ನ ವಕೀಲರೊಂದಿಗೆ ವಿಚಾರಣೆಗೆ ಹಾಜರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಈ ಹಿಂದೆ ನೀಡಿದ ವಿವರಣೆಗಳನ್ನೇ ಅವರು ನೀಡಿದ್ದಾರೆ ಎನ್ನಲಾಗಿದೆ.

- Advertisement -

ಚಾನೆಲ್ ನಲ್ಲಿ ನಡೆದ ಚರ್ಚೆಯ ವೇಳೆ ಕೇಂದ್ರ ಸರ್ಕಾರ ಲಕ್ಷದ್ವೀಪದಲ್ಲಿ ಜೈವಿಕ ಶಸ್ತ್ರಾಸ್ತ್ರ(ಬಯೋ ವೆಪನ್) ಗಳನ್ನು ಬಳಸುತ್ತಿದೆ ಎಂದು ಆಯಿಷಾ ಸುಲ್ತಾನಾ ಹೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಲಕ್ಷದ್ವೀಪ ಘಟಕದ ಅಧ್ಯಕ್ಷ ಸಿ.ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನ ಮೇಲೆ ನಟಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು.

Join Whatsapp