ಕೌಟುಂಬಿಕ ಕಲಹ ಹಿನ್ನೆಲೆ: ನಾಲ್ವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ, ಓರ್ವ ಸಾವು

Prasthutha|

ಯಾದಗಿರಿ: ವ್ಯಕ್ತಿಯೋರ್ವ ತನ್ನ ಮಾವ ಸೇರಿದಂತೆ ನಾಲ್ವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈಯ್ಯಲು ಯತ್ನಿಸಿದ ಘಟನೆ ಯಾದಿಗಿರಿ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ನಡೆದಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿ, ಮೂವರು ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ. ಶರಣಪ್ಪ ಕೊಲೆ ಆರೋಪಿ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ ತನ್ನ ಮಾವ ಮತ್ತು ಅವರೊಂದಿಗೆ ಬಂದ ಮೂವರನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾನೆ. ಶರಣಪ್ಪ ಮತ್ತು ಪತ್ನಿ ಹುಲಿಗೆಮ್ಮ ನಡುವೆ ಕೌಟುಂಬಿಕ ಕಲಹ ಉಂಟಾಗುತ್ತಿತ್ತು. ಈ ಬಗ್ಗೆ ಮಾತುಕತೆ ನಡೆಸಲು ಹುಲಿಗೆಮ್ಮ ಅವರ ತಂದೆ ಹಾಗೂ ಮೂವರು ಸಂಬಂಧಿಕರು ಶರಣಪ್ಪ ಅವರ ಮನೆಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ.

- Advertisement -


ನೀವಿಬ್ಬರೂ ಜಗಳವಾಡಬಾರದು, ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಹುಲಿಗೆಮ್ಮ ಅವರ ತಂದೆ ಮತ್ತು ಅವರೊಂದಿಗೆ ಬಂದವರು ಶರಣಪ್ಪಗೆ ಕಿವಿಮಾತು ಹೇಳಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ನೀವಿಬ್ಬರೇ ಮನೆಯೊಳಗೆ ಕುಳಿತು ಚರ್ಚಿಸಿ ಇತ್ಯರ್ಥಪಡಿಸಬೇಕು ಎಂದು ಹೇಳಿದ್ದಾರೆ. ಅಷ್ಟರಲ್ಲಿ ಏಕಾಏಕಿ ಕೋಪಗೊಂಡ ಶರಣಪ್ಪ ನಾಲ್ವರಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಾಗಿಲಿನ ಚಿಲಕ ಹಾಕಿದ್ದಾನೆ.


ಘಟನೆಯಲ್ಲಿ ನಾಗಪ್ಪ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುತ್ತಪ್ಪ, ಶರಣಪ್ಪ ಗಂಭೀರ ಗಾಯಗೊಂಡಿದ್ದು, ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp