ಪ.ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಪ್ರಯತ್ನ ನಡೆದಿದೆ: ಡಿಕೆಶಿ ಆರೋಪ

Prasthutha|

ಬೆಂಗಳೂರು: ಮತದಾರರ ಪಟ್ಟಿಯ ಅಕ್ರಮದ ಮೂಲಕ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಿಜೆಪಿಯವರು ಹಾನಿ ಮಾಡುತ್ತಿದ್ದಾರೆ. ಇವಿಎಂ ತಿರುಚಿದಂತೆ ಖಾಸಗಿ ಸಂಸ್ಥೆಗಳನ್ನು ಬಳಸಿಕೊಂಡು ಈ ಅಕ್ರಮ ಮಾಡಲಾಗುತ್ತಿದ್ದು, ಎಲ್ಲವೂ ತನಿಖೆ ಆಗಬೇಕು. ಮತದಾರರ ಪಟ್ಟಿ ಮರುಪರಿಷ್ಕರಣೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

- Advertisement -

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಮಾಹಿತಿ ಕಳವು ಪ್ರಕರಣದ ವಿಚಾರವಾಗಿ ನಾವು ಕೇಂದ್ರ ಚುನಾವಣಾ ಆಯೋಗಕ್ಕೇ ದೂರು ನೀಡಿದ್ದು, ಅದು ಉಪ ಆಯುಕ್ತರನ್ನು ತನಿಖೆಗೆ ನೇಮಿಸಿದೆ. ತನಿಖಾಧಿಕಾರಿಗಳು ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸೇರಿ ಅಕ್ರಮ ನಡೆಸಿದ್ದಾರೆ ಎಂದು ಕೆಲವು ಚುನಾವಣಾ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.ಸರ್ಕಾರ ತನ್ನ ಬಳಿ ಇಲ್ಲದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು 7-8 ಸಾವಿರ ಬಿಎಲ್’ಒ ಗಳನ್ನು ನೇಮಿಸಿ, ಮತದಾರ ಮಾಹಿತಿ ಕದಿಯಲು ಪ್ರಯತ್ನಿಸಿದೆ. ಬಿಜೆಪಿಗೆ ಅನುಕೂಲವಾಗುವಂತೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಕಾನೂನು ಬಾಹಿರವಾಗಿ ಕಲೆ ಹಾಕಿರುವ ಮಾಹಿತಿಯನ್ನು ಹಿಂಪಡೆಯಬೇಕು ಎಂದು ಆಯೋಗ ಆದೇಶ ನೀಡಿದೆ. ಈ ಮಾಹಿತಿಗಳು ಖಾಸಗಿ ಸಂಸ್ಥೆಗಳು ಹಾಗೂ ಟ್ರಸ್ಟ್ ಹಾಗೂ ಬಿಜೆಪಿ ನಾಯಕರ ಬಳಿ ಇವೆ. ಇದು ಕ್ರಿಮಿನಲ್ ಅಪರಾಧವಾಗಿದ್ದು, ಇದರಲ್ಲಿ ಯಾರೆಲ್ಲಾ ಭಾಗಿ ಆಗಿದ್ದಾರೆ, ಯಾರೆಲ್ಲಾ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂದು ತನಿಖೆ ಮಾಡಬೇಕು. ಕೆಲವು ಬಿಜೆಪಿ ಶಾಸಕರು ದೊಡ್ಡ ಅಭಿಯಾನದ ಮೂಲಕ ಈ ಮಾಹಿತಿ ಕಳವು ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಹಣ, ಚೆಕ್ ನೀಡಿರುವ ದಾಖಲೆ ಕೂಡ ಇದೆ ಎಂದು ಶಿವಕುಮಾರ್ ಆರೋಪಿಸಿದರು.

- Advertisement -

ಮತದಾರರಲ್ಲಿ ಜಾಗೃತಿ ಮೂಡಿಸುವ, ಪಾಲಿಕೆ ಹೆಸರಿನಲ್ಲಿ ಈ ಅಕ್ರಮ ನಡೆದಿದೆ. ರಾಜ್ಯದ ಇತಿಹಾಸದಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಕ್ರಮ ಆಗಿದೆ. ಪೊಲೀಸ್, ಇಂಜಿನಿಯರ್, ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ, ಅಂಕಪಟ್ಟಿ ಅಕ್ರಮ ಮಾಡಿದ್ದಲ್ಲದೆ ಈಗ ಮತಪಟ್ಟಿಯಲ್ಲೂ ಅಕ್ರಮ ಮಾಡಲು ನಕಲಿ ಬಿಎಲ್’ಒ ಅಧಿಕಾರಿಗಳ ನೇಮಕ ಮಾಡಿ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯವಾಗಿ ಪರಿವರ್ತನೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.

ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ನಾನು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ. ಈ ಅಕ್ರಮ ಕೇವಲ 3 ಕ್ಷೇತ್ರದಲ್ಲಿ ಮಾತ್ರವಲ್ಲ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ, ರಾಜ್ಯದ 224 ಕ್ಷೇತ್ರಗಳಲ್ಲಿ ನಡೆದಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಮತ ತೆಗೆಯುವ ಪ್ರಯತ್ನ ನಡೆದಿದೆ. ಈ ಬಗ್ಗೆ ಜನ ಜಾಗೃತರಾಗಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಹೆಸರನ್ನು ಬಹಿರಂಗಪಡಿಸಬೇಕು. ಸಿದ್ದರಾಮಯ್ಯ ಅವರ ಕಾಲದಲ್ಲಿ ಅಕ್ರಮ ನಡೆದಿದೆ ಎಂದು ದೂರು ನೀಡಿದ್ದಾರಂತೆ. ತಪ್ಪು ಮಾಡಿದ್ದರೆ ಶಿಕ್ಷೆ ನೀಡಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಏನಾದರೂ ಜನಪ್ರತಿನಿಧಿ ಕಾಯ್ದೆ ಹಾಗೂ ಸಂವಿಧಾನ ಉಲ್ಲಂಘಿಸಿ ಈ ಅಕ್ರಮ ಮಾಡಿದ್ದರೆ ನಮ್ಮನ್ನು ಶಿಕ್ಷೆಗೆ ಗುರಿಪಡಿಸಿ ಎಂದು ಅವರು ಸವಾಲು ಹಾಕಿದರು.

ಈ ಅಕ್ರಮದ ಮೂಲಕ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿ ಮಾಡುತ್ತಿದ್ದಾರೆ. ಇವಿಎಂ ತಿರುಚುವಂತೆ ಅವರು ಹೇಳಿಕೊಟ್ಟಿದ್ದಾರೆ. ಖಾಸಗಿ ಸಂಸ್ಥೆಗಳನ್ನು ಬಳಸಿಕೊಂಡು ಈ ಅಕ್ರಮ ಮಾಡಲಾಗುತ್ತಿದ್ದು, ಎಲ್ಲವೂ ತನಿಖೆ ಆಗಬೇಕು. ಮತದಾರರ ಪಟ್ಟಿ ಮರುಪರಿಷ್ಕರಣೆ ಆಗಬೇಕು ಎಂದು ಡಿಕೆಶಿ ಆಗ್ರಹಿಸಿದರು.

ಸರ್ಕಾರಿ ಸಿಬ್ಬಂದಿ, ಅಂಗನವಾಡಿ ಅಥವಾ ಶಿಕ್ಷಕರ ಹೊರತಾಗಿ ಬೇರಾರೂ ಬಿಎಲ್’ಒ ಆಗಿ ನೇಮಕವಾಗಲು ಸಾಧ್ಯವಿಲ್ಲ. ಯಾವುದೇ ಮತ ಸೇರ್ಪಡೆ ಅಥವಾ ವರ್ಗಾವಣೆ ಮಾಡುವಾಗ ಫಾರಂ 6, 7, 8 ಅಗತ್ಯ. ಆದರೆ ಇವರು ಕಚೇರಿಯಲ್ಲಿ ಕೂತು ಎಲ್ಲವನ್ನೂ ಬದಲಿಸಿದ್ದಾರೆ. ಏನೇ ಆದರೂ ಚುನಾವಣಾ ಆಯೋಗ ಎಲ್ಲಾ ಮತದಾರರ ಪಟ್ಟಿಯನ್ನು ಮರುಪರಿಶೀಲನೆ ಮಾಡಬೇಕು. ಎರಡು ಮತ ಇದ್ದರೆ ಅಂತಹ ಮತವನ್ನು ತೆಗೆದು ಹಾಕಿ. ಸೋಲುವ ಭೀತಿಯಿಂದಲೇ ಬಿಜೆಪಿ ಸರ್ಕಾರವು ಪಾಲಿಕೆ ಚುನಾವಣೆ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಮಾಡಿಲ್ಲ. ಸೋಲುವ ಭೀತಿಯಲ್ಲಿ ಮತದಾನ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುವುದಾದರೆ ಇಂತಹ ಭ್ರಷ್ಟ, ದುಷ್ಟ ಸರ್ಕಾರವನ್ನು ಜನ ಕ್ಷಮಿಸ ಬಾರದು. ಚುನಾವಣಾ ಆಯೋಗ ಉನ್ನತ ಮಟ್ಟದ ತನಿಖೆ ಮಾಡಿ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು ಎಂದು ಅವರು ಹೇಳಿದರು.

ಚುನಾವಣಾ ಆಯೋಗ ತನಿಖೆಯನ್ನು ಕೇವಲ 3 ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಮತದಾರರ ಪಟ್ಟಿ ಪರಿಷ್ಕರಣೆಯನ್ನು ರಾಜಕೀಯ ಪಕ್ಷಗಳ ಸ್ಥಳೀಯ ಪ್ರತಿನಿಧಿಗಳನ್ನು ಇಟ್ಟುಕೊಂಡು ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ನಾಳೆ 27ರಂದು ಮಧ್ಯಾಹ್ನ 3.30ಕ್ಕೇ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಜತೆ ಜೂಮ್ ಸಭೆಯನ್ನು ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ನಾವು ಜಾಗೃತರಾಗಿ ಇರಬೇಕು. ಮಹದೇವಪುರ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಮತದಾರರ ಮಾಹಿತಿ ಸಂಗ್ರಹಣೆ ಮಾಡಲಾಗಿದೆ. ಇಡೀ ಬೆಂಗಳೂರಿನಲ್ಲಿ ಈ ರೀತಿ ಅಕ್ರಮ ಎಸಗಲಾಗಿದೆ. ಹೀಗಾಗಿ ಈ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Join Whatsapp