ಅಗ್ನಿಪಥ ಯೋಜನೆ ಆರೆಸ್ಸೆಸ್ ಕೂಸು: ಎಚ್.ಡಿ. ಕುಮಾರಸ್ವಾಮಿ

Prasthutha|

ರಾಮನಗರ: ಕೇಂದ್ರ ಸರ್ಕಾರ ಜಾರಿಗೆ ತಂದ ಅಗ್ನಿಪಥ ಯೋಜನೆಯ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದ ಬೆನ್ನಲ್ಲೇ , ಇದೀಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅಗ್ನಿಪಥ ಯೋಜನೆಯು ಆರೆಸ್ಸೆಸ್ ಕೂಸು ಎಂದು ಟೀಕಿಸಿದ್ದಾರೆ.

- Advertisement -

ಚನ್ನಪಟ್ಟಣದಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಯಾರು ಸಲಹೆ ನೀಡಿದರೋ ಗೊತ್ತಿಲ್ಲ. ಸಂಸತ್ ನಲ್ಲಿ ಎಂದೂ ಈ ಬಗ್ಗೆ ಚರ್ಚೆ ನಡೆದಿಲ್ಲ. ಹೊಸತಾಗಿ 10 ಲಕ್ಷ ಸೈನಿಕರನ್ನು ಆಯ್ಕೆ ಮಾಡಿ 4 ವರ್ಷದಲ್ಲಿ ಶೇ 75ರಷ್ಟು ಜನರನ್ನು ಸೇನೆಯಿಂದ ಹೊರಗೆ ಕಳುಹಿಸುತ್ತಾರೆ. ಹಾಗಾದರೆ ನಂತರದಲ್ಲಿ ಅವರ ಪಾಡೇನು? ಎಂದು ಪ್ರಶ್ನಿಸಿದರು.

ಕವಾಯತು ಮಾಡಿ ಕೆಲವರನ್ನು ಕಾರ್ಯಕರ್ತರೆಂದು ಇಟ್ಟುಕೊಂಡಿರುವ ಆರೆಸ್ಸೆಸ್  ಅವರೆಲ್ಲರನ್ನೂ ಈ ಮೂಲಕ ಸೇನೆಗೆ ಸೇರಿಸಲು ಸಂಚು ನಡೆಸಿದೆ. ಹೊಸತಾಗಿ ಆಯ್ಕೆ ಮಾಡುವ 10 ಲಕ್ಷ ಸೈನಿಕರ ಪೈಕಿ 2.5 ಲಕ್ಷ ಮಂದಿಯನ್ನು ಸೇನೆಯಲ್ಲಿಯೇ ಉಳಿಸಿಕೊಂಡು ಆ ಮೂಲಕ ಇಡೀ ಸೇನೆಯನ್ನು ಆರೆಸ್ಸೆಸ್ ಹಿಡಿತಕ್ಕೆ ತೆಗೆದುಕೊಳ್ಳುವುದು. ಉಳಿದ 7.5 ಲಕ್ಷ ಮಂದಿಯನ್ನು ದೇಶದೆಲ್ಲೆಡೆ ಕಳುಹಿಸಿ ಆ ಮೂಲಕ ಇಡೀ ದೇಶವನ್ನು ಆರೆಸ್ಸೆಸ್ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ಇದ್ದಂತೆ ಇದೆ. ಆರೆಸ್ಸೆಸ್ ಸಹ ನಾಜಿ ಕಾಲದಲ್ಲೇ ಆರಂಭ ಆಗಿದ್ದು, ಭಾರತದಲ್ಲೂ ನಾಜಿ ಆಡಳಿತ ತರಲು ಹೊರಟಂತೆ ಇದೆ  ಎಂದು ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.

- Advertisement -

ಕೆಲವು ಆಂತರಿಕ ವಿಚಾರಗಳಿಂದ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸೋತಿದೆ. ಆದರೆ ಇದಕ್ಕೂ ವಿಧಾನಸಭೆ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಆಗಸ್ಟ್ 15ರಿಂದ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Join Whatsapp