ನಟ ವಿಜಯ್ ಬಿಜೆಪಿಯ ʻಸಿʼ ಟೀಂ: ಡಿಎಂಕೆ ಟೀಕೆ

Prasthutha|

- Advertisement -

ಚೆನ್ನೈ: 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಬೇಕೆಂಬ ಗುರಿ ಹೊಂದಿರುವ ತಮಿಳಗ ವೆಟ್ರಿ ಕಳಗಂ ವಿರುದ್ಧ ಡಿಎಂಕೆ ಹಾಗೂ ಎಐಡಿಎಂಕೆ ನಾಯಕರು ಮುಗಿಬಿದ್ದಿದ್ದಾರೆ.

ವಿಜಯ್‌ ನಾಯಕತ್ವದ ಟಿವಿಕೆ ಪಕ್ಷವು ಬಿಜೆಪಿಯ ʻಸಿʼಟೀಂ ಎಂದು ಡಿಎಂಕೆ ಕರೆದರೆ, ಎಐಡಿಎಂಕೆ ಹೊಸ ಬಾಟಲಿಯಲ್ಲಿ ಹಳೆಯ ವೈನ್‌ ಮಿಕ್ಸ್‌ ಮಾಡಿದಂತಿದೆ ಎಂದು ಟೀಕಿಸಿದೆ.

- Advertisement -

ತಮಿಳಿಗ ವೆಟ್ರಿಕಳಗಂ ಪಕ್ಷದ ತತ್ವ ಸಿದ್ಧಾಂತಗಳು ವಿವಿಧ ಪಕ್ಷಗಳ ಪ್ರಸ್ತುತ ರಾಜಕೀಯ ನಿಲುವುಗಳ ಕಾಕ್‌ಟೈಲ್ ಆಗಿದೆ ಎಂದು ಗುಡುಗಿರುವ ಎಐಎಡಿಎಂಕೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ ನೀಡಿ ಮೈಯಮ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.‌

ಭಾನುವಾರ ನಡೆದ ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ್ದ ವಿಜಯ್ ಅವರು, ಬಿಜೆಪಿ ಹಾಗೂ ಭ್ರಷ್ಟ ಡಿಎಂಕೆಯು ನಮ್ಮ ಸೈದ್ಧಾಂತಿಕ ಮತ್ತು ರಾಜಕೀಯ ವಿರೋಧಿಗಳು ಎಂದು ಘೋಷಿಸಿದ್ದರು. ಇದೇ ವೇಳೆ ಜಾತ್ಯತೀತತೆ ಮತ್ತು ‘ಸಾಮಾಜಿಕ ನ್ಯಾಯವು ಟಿವಿಕೆಯ ಸಿದ್ಧಾಂತಗಳು ಎಂದು ಪ್ರಕಟಿಸಿದರು.

ನಟ ವಿಜಯ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ಕಾನೂನು ಸಚಿವ ರಘುಪತಿ, ವಿಜಯ್‌ ಅವರ ತಮಿಳಿಗ ವೆಟ್ರಿ ಕಳಗಂ ಪಕ್ಷವು. ಎ ಟೀಂ, ಬಿ ಟೀಂ ಅಲ್ಲ, ಬಿಜೆಪಿಯ ಸಿ ಟೀಂ. ದ್ರಾವಿಡ ಮಾದರಿಯ ಆಡಳಿತವನ್ನು ಜನರ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಡಿಎಂಕೆ ನಾಯಕ ಇವಿಕೆಎಸ್ ಇಳಂಗೋವನ್ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ನೀತಿಗಳನ್ನು ವಿಜಯ್ ಕಾಪಿ ಮಾಡಿ, ಹೊಸದಾಗಿ ಘೋಷಿಸಿದ್ದಾರೆ. ಅವರು (ವಿಜಯ್) ಏನು ಹೇಳಿದ್ದಾರೋ ಅದನ್ನು ನಾವು ಈಗಾಗಲೇ ಹೇಳಿದ್ದೇವೆ ಮತ್ತು ನಾವು ಅನುಸರಿಸುತ್ತಿದ್ದೇವೆ. ನಮ್ಮ ಪಕ್ಷವು (ಡಿಎಂಕೆ) ಜನರ ಸಮಸ್ಯೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿದೆ. ಆದರೆ, ವಿಜಯ್ ಅವರ ಪಕ್ಷವು ರಾಜಕೀಯಕ್ಕೆ ಪ್ರವೇಶಿಸಿದ ತಕ್ಷಣವೇ ಅಧಿಕಾರದಲ್ಲಿರಲು ಹಾತೊರೆಯುತ್ತಿದೆ. ಇದಲ್ಲದೇ, ಟಿವಿಕೆ ನಾಯಕರು ಡಿಎಂಕೆ ನಾಯಕರಂತೆ ಜೈಲಿಗೆ ಹೋಗಿ ಜನರಿಗಾಗಿ ಹೋರಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.




Join Whatsapp