ಸುಳ್ಯ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಎಬಿವಿಪಿ ಗೂಂಡಾಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ: ಎಸ್ ಡಿಪಿಐ

Prasthutha|

ಸುಳ್ಯ: ಕಾಲೇಜೊಂದರ ವಿದ್ಯಾರ್ಥಿನಿಯ ಜೊತೆ ಮಾತನಾಡಿದನೆಂಬ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಯ ಮೇಲೆ ಎಬಿವಿಪಿಯ ಗೂಂಡಾಗಳು ಕ್ರೂರವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನುಷ ಕೃತ್ಯವೂ ಆಘಾತಕಾರಿ ಹಾಗೂ ಖಂಡನೀಯ. ಪೋಲಿಸ್ ಇಲಾಖೆ, ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕೆಂದು ಎಸ್ ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ.

- Advertisement -

ತರಗತಿಯ ಸ್ನೇಹಿತೆ ವಿಧ್ಯಾರ್ಥಿನಿ ಜೊತೆ ಮಾತನಾಡಿದ ಕಾರಣಕ್ಕೆ ಅದೇ ಕಾಲೇಜಿನ ಎಬಿವಿಪಿ ಗೂಂಡಾಗಳು ತರಗತಿಯಿಂದ ಕರೆಸಿ ಕ್ರೌರ್ಯ ಮೆರೆದು ಹಿಗ್ಗಾ-ಮುಗ್ಗಾ ಥಳಿಸಿ ಅನೈತಿಕ ಪೊಲೀಸ್ ಗಿರಿಯನ್ನು ನಡೆಸಿದ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಮಾತ್ರವಲ್ಲ ವಿದ್ಯಾರ್ಥಿ ಮತ್ತು ವಿಧ್ಯಾರ್ಥಿನಿಯನ್ನು ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಮಾನ ಹರಾಜು ಮಾಡಿದ ಎಬಿವಿಪಿ ಕಾರ್ಯಕರ್ತರು ಮಾನವೀಯತೆಯ ಶತ್ರುಗಳು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪೋಲಿಸ್ ಇಲಾಖೆ ಸಂತ್ರಸ್ತ ವಿದ್ಯಾರ್ಥಿಗೆ ಮಾನಸಿಕ ಧೈರ್ಯ ತುಂಬಿ ಪ್ರಕರಣ ದಾಖಲಿಸಿರುವುದು ಅಭಿನಂದನಾರ್ಹ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ ರಾಜಕೀಯ ಒತ್ತಡಕ್ಕೆ ಮಣಿದು ಲಘು ಸೆಕ್ಷನ್ ಗಳನ್ನು ಹಾಕಿ ಪ್ರಕರಣವನ್ನು ಕೇವಲವಾಗಿಸದೇ ಕೊಲೆಯತ್ನ ಪ್ರಕರಣವನ್ನು ದಾಖಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಕಾಲೇಜು ಆಡಳಿತ ಸಮಿತಿ ಹಲ್ಲೆ ನಡೆಸಿದ ಎಬಿವಿಪಿ ಗೂಂಡಾಗಳನ್ನು ಕಾಲೇಜಿನಿಂದ ವಜಾಗೊಳಿಸಬೇಕೆಂದು ಎಸ್ ಡಿಪಿಐ ಪ್ರಕಟಣೆಯಲ್ಲಿ ಆಗ್ರಹಿಸಿದೆ.



Join Whatsapp