2B ಮೀಸಲಾತಿ ರದ್ದು: ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ನಡೆಸುತ್ತಿರುವ ತಾರತಮ್ಯ ನೀತಿಯ ಮುಂದುವರಿದ ಭಾಗ – ಲಬೀದ್ ಶಾಫಿ

Prasthutha|

ಬೆಂಗಳೂರು: 2ಬಿ ಅಡಿಯಲ್ಲಿ ಮುಸ್ಲಿಮರಿಗಿದ್ದ ಮೀಸಲಾತಿಯನ್ನು ರದ್ದು ಪಡಿಸಿರುವ ಸರ್ಕಾರದ ನಡೆಯನ್ನು ಒಪ್ಪಲು ಖಂಡಿತ ಸಾಧ್ಯವಿಲ್ಲ. ಇದು ರಾಜಕೀಯ ಪ್ರೇರಿತ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ನಡೆಸುತ್ತಿರುವ ತಾರತಮ್ಯ ನೀತಿಯ ಮುಂದುವರಿದ ಭಾಗವಾಗಿದೆ ಎಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -


ಸರ್ಕಾರವು ಈ ತೀರ್ಮಾನವನ್ನು ಶೀಘ್ರವಾಗಿ ಹಿಂಪಡೆಯಬೇಕು ಹಾಗೂ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಮುಸ್ಲಿಮರ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಈಗಿರುವ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.


ರಾಜ್ಯದಲ್ಲೂ ಲೆಸ್ಲಿ ಮಿಲ್ಲರ್ ಆಯೋಗ, ನಾಗನಗೌಡ ಆಯೋಗ, ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗಗಳನ್ನು ಕಾಲಕಾಲಕ್ಕೆ ರಚಿಸಿ ಸಮೀಕ್ಷೆ ನಡೆಸಿ, ಅನುಷ್ಠಾನಗೊಳಿಸಲಾಯಿತು. ಇವೆಲ್ಲ ಆಯೋಗದ ವರದಿಯಲ್ಲೂ ಮುಸ್ಲಿಂ ಸಮುದಾಯವು ತೀರಾ ಹಿಂದುಳಿದ ವರ್ಗವೆಂದು ಉಲ್ಲೇಖಗೊಂಡಿದೆ. ದಲಿತರಿಗಿಂತ ಮುಸ್ಲಿಮರು ತೀರಾ ಹಿಂದುಳಿದಿದ್ದಾರೆಂದು ನ್ಯಾ.ಸಾಚಾರ್ ವರದಿ ಪ್ರತಿಪಾದಿಸಿದೆ. ಆದರೆ ಮುಸ್ಲಿಮರು ಮುಂದುವರಿದವರು ಎಂದು ಈಗ ಸರ್ಕಾರ ರಾತೋರಾತ್ರಿ ತೀರ್ಮಾನಿಸಿರುವುದು ಆಘಾತಕಾರಿಯಾಗಿದೆ.

- Advertisement -


ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ತೆಗೆದುಹಾಕುವ ಕರ್ನಾಟಕ ಸರ್ಕಾರದ ಕ್ರಮವು ವಿಷಾದನೀಯ. ಸರ್ಕಾರಿ ಉದ್ಯೋಗಗಳಲ್ಲಿ ಸಮುದಾಯದ ಪ್ರಾತಿನಿಧ್ಯ ಕಡಿಮೆಯಿದ್ದು ಈ ಸಂದರ್ಭದಲ್ಲಿ 2B ಅಡಿಯಲ್ಲಿ ಮುಸ್ಲಿಮರಿಗೆ ಪ್ರಸ್ತುತ 4% ಕೋಟಾವನ್ನು ಹೆಚ್ಚಿಸುವ ಕುರಿತು ಚಿಂತಿಸಬೇಕೇ ವಿನಹ ರದ್ದು ಮಾಡುವುದು ಅಕ್ಷಮ್ಯವಾಗಿದೆ ಎಂದು ಹೇಳಿದ್ದಾರೆ.


ಮುಸ್ಲಿಮರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ ಇದು ಸುಲಭಸಾಧ್ಯ ಅಲ್ಲ. ಬೇರೆ ರಾಜ್ಯಗಳಲ್ಲಿಯೂ ಮುಸ್ಲಿಮರು ಇರುವ ಕಾರಣ ಒಂದು ರಾಜ್ಯದ ವ್ಯಾಪ್ತಿಯಲ್ಲಿ ಮೀಸಲಾತಿ ಮರುಹಂಚಿಕೆ ಮಾಡಲು ಸಾಧ್ಯ ಇಲ್ಲ ಎಂಬುವುದನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಳ್ಳಬೇಕು.


ಹಿಂದುಳಿದ ಜಾತಿಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಸರಕಾರದ ಉದ್ದೇಶವೇ ? ಜಾತ್ಯಾತೀತ ನೆಲೆಗಟ್ಟಿನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸರಕಾರ ವಿಫಲವಾಗಿದೆ. ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಅತ್ಯಂತ ಘೋರ ದುರಂತವಾಗಿದೆ. ಈ ಕೂಡಲೇ ಸರಕಾರ ರದ್ದು ಮಾಡಿರುವ ಮುಸ್ಲಿಮರ 2 B ಮೀಸಲಾತಿ ಆದೇಶವನ್ನು ಹಿಂಪಡೆಯಬೇಕು ಎಂದು ಲಬೀದ್ ಶಾಫಿ ತಿಳಿಸಿದ್ದಾರೆ.

Join Whatsapp