ಅಬ್ದುಲ್ ನಾಸಿರ್ ಮಅದನಿ ಪುತ್ರ ಸಲಾಹುದ್ದೀನ್ ಅಯ್ಯೂಬಿ ಈಗ ಕೇರಳ ಹೈಕೋರ್ಟ್ ವಕೀಲ

Prasthutha|

“ತಂದೆಯ ಜೈಲು ವಾಸ ನನ್ನಲ್ಲಿ ಎಂದೂ ತುಂಬಲಾಗದ ಶೂನ್ಯ ಸೃಷ್ಟಿಸಿತ್ತು- ಸಲಾಹುದ್ದೀನ್

- Advertisement -

ಕೊಚ್ಚಿ: 1998ರಲ್ಲಿ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಚೇರ್ಮನ್ ಅಬ್ದುಲ್ ನಾಸಿರ್ ಮಅದನಿಯವರನ್ನು ಬಂಧಿಸಿ, ಕೊಯಮುತ್ತೂರು ಜೈಲಿಗೆ ಕಳುಹಿಸಿದಾಗ ಅವರ ಮಗ ಸಲಾಹುದ್ದೀನ್ ಅಯ್ಯೂಬಿ ಕೇವಲ 10 ತಿಂಗಳ ಮಗು. ಜೈಲಿನಲ್ಲಿರುವ ತಂದೆಯನ್ನು ಸಲಾಹುದ್ದೀನ್ ಆಗಾಗ ಭೇಟಿಯಾಗುತ್ತಾ ಬೆಳೆಯುತ್ತಾನೆ. ಎಳೆಯ ಪ್ರಾಯದಲ್ಲೇ ತಂದೆಯ ಅನುಪಸ್ಥಿತಿ ಮಗುವನ್ನು ತೀವ್ರವಾಗಿ ಕಾಡಿತ್ತು.
ಸಲಾಹುದ್ದೀನ್ ತಂದೆಯ ಜೊತೆಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಕಳೆದಿದ್ದಾನೆ. ಆದರೆ ಅವಕಾಶವಾದಾಗಲೆಲ್ಲ ಭದ್ರ ಕಾವಲಿನ ಜೈಲಿಗೆ ಹೋಗಿ ಕಂಬಿಗಳ ಹಿಂದೆ ಇದ್ದ ತಂದೆಯೊಡನೆ ಬೆರೆತು ಮಾತಾಡಿ ಅವರ ಟೊಪ್ಪಿ ಮತ್ತು ಅದ್ಭುತ ಗಡ್ಡವನ್ನು ನೆನಪಿಟ್ಟುಕೊಂಡು ಬರುತ್ತಿದ್ದ.
ಸಲಾಹುದ್ದೀನ್ ಅವರಿಗೆ ತಂದೆಯ ಭಾಷಣ, ಪ್ರವಚನ, ಜ್ಞಾನ, ಬೇರೆಯವರ ಬಗೆಗಿನ ಕಾಳಜಿ ಇತ್ಯಾದಿ ವಿಷಯಗಳು ಕೇರಳದ ಉದ್ದಗಲಕ್ಕೂ ಹೆಮ್ಮೆ ಪಡುವಂತೆ ದೊರೆಯುತ್ತಿತ್ತು. ಅದೆಲ್ಲ ದೊಡ್ಡ ಜ್ಞಾನ ನಿಧಿ ಅವರಿಗೆ. ಪ್ರತಿದಿನ ಭಾರತದ ನ್ಯಾಯಾಂಗ ವ್ಯವಸ್ಥೆ ಎಸಗಿದ ಅನ್ಯಾಯ, ತಂದೆಯಿದ್ದರೂ ದೂರ ಇರಬೇಕಾದ ನೋವು ಸಲಾಹುದ್ದೀನ್ ಅವರನ್ನು ಕಾಡುತ್ತಲೇ ಇದೆ.
ವಿಚಾರಣಾಧೀನ ಕೈದಿಯಾಗಿ ತನ್ನ ಜೀವನದ ಬಹುಭಾಗವನ್ನು ಜೈಲಿನಲ್ಲಿ ಕಳೆದ ಅಬ್ದುಲ್ ನಾಸಿರ್ ಮಅದನಿ ಅವರ ಪುತ್ರ ಸಲಾಹುದ್ದೀನ್ ಅಯ್ಯುಬಿ ಕೇರಳ ಹೈಕೋರ್ಟ್’ನಲ್ಲಿ ವಕೀಲರಾಗಿ ನೋಂದಾಯಿತರಾಗಿದ್ದಾರೆ.
ಕೇರಳದ ಆಲುವಾದ ಭಾರತ್ ಮಾತಾ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್’ನಲ್ಲಿ ಸಲಾಹುದ್ದೀನ್ ಐದು ವರ್ಷಗಳ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿ, ವಕೀಲರಾಗಿ ಹೊರಬಂದಿದ್ದಾರೆ.
ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಮಅದನಿ ತನ್ನ ಮಗನ ಎನ್ರೋಲ್ ಮೆಂಟ್ ಸಮಾರಂಭವನ್ನು ಆಸ್ಪತ್ರೆಯ ಹಾಸಿಗೆಯಲ್ಲಿ ನೋಡಿ ಆನಂದಿಸಿದ್ದಾರೆ.
ಎರ್ನಾಕುಳಂನ ಕಳಮಶ್ಶೇರಿಯ ಆಶಿಶ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ಬಾರ್ ಕೌನ್ಸಿಲ್ ಆಫ್ ಕೇರಳ ಚೆಯರ್ಮ್ಯಾನ್ ಕೆ ಎನ್ ಅನಿಲ್ ಕುಮಾರ್, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಮನೋಜ್ ಕುಮಾರ್ ಎನ್, ಅಡ್ವೊಕೇಟ್ ಜನರಲ್ ಗೋಪಾಲಕೃಷ್ಣ ಕುರುಪ್ಪ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಪಿ.ಜಯಚಂದ್ರನ್, ನಜೀರ್ ಕೆ.ಕೆ ಮತ್ತು ಎಸ್.ಕೆ.ಪ್ರಮೋದ್ ಅವರ ಉಪಸ್ಥಿತಿಯಲ್ಲಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಡಯಾಸ್ ಅವರು ನೋಂದಣಿ ಪ್ರಮಾಣಪತ್ರವನ್ನು ನೀಡಿದರು.
ಹೀಗೆ, ನಿರಂತರ ನ್ಯಾಯ ನಿರಾಕರಣೆಯ ಅನೇಕ ಪ್ರಸಂಗಗಳ ನಡುವೆ, ಪ್ರತಿಕ್ರಿಯಿಸಿದ ಮಅದನಿ, ನನ್ನ ಮಗ ಇಂದು ನ್ಯಾಯ ಅನ್ಯಾಯಗಳನ್ನು ಬೇರ್ಪಡಿಸುವ ಕಪ್ಪು ಗೌನ್ ಧರಿಸಿದ್ದಾನೆ ಎಂದು ಭಾವೋದ್ರಿಕ್ತರಾದರು.
ಸಲಾಹುದ್ದೀನ್ ಅಯ್ಯೂಬಿ 10 ತಿಂಗಳ ಮಗುವಾಗಿದ್ದಾಗ ಮಅದನಿಯನ್ನು ಕೊಯಮತ್ತೂರು ಜೈಲಿನಲ್ಲಿರಿಸಲಾಗಿತ್ತು. ನಂತರ, ಅವನ ಪ್ರಪಂಚವು ಕೊಯಮತ್ತೂರು ಮತ್ತು ಸೇಲಂ ಜೈಲುಗಳಲ್ಲಿನ ಸಂದರ್ಶಕರ ಕೋಣೆಗಳು ಮತ್ತು ಅಲ್ಲಿನ ವಿವಿಧ ಮನಸ್ಥಿತಿಯ ಜೈಲು ಸಿಬ್ಬಂದಿಗಳಾಗಿದ್ದರು.
ವಿವಿಧ ರೀತಿಯ ದೈಹಿಕ ಮತ್ತು ಮಾನಸಿಕ ಕಿರುಕುಳದ ನಡುವೆ ನನ್ನ ಮಗ ತನ್ನ ಬಾಲ್ಯವನ್ನು ಕಳೆಯಬೇಕಾಗಿ ಬಂತು. ಪತ್ನಿ ಸೂಫಿಯಾಗೆ ಕಿರುಕುಳ ನೀಡಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳನ್ನು ತನ್ನ ಪುಟ್ಟ ಕೈಗಳಿಂದ ತಡೆಯಲು ಪ್ರಯತ್ನಿಸಿದ ಆತ ಜೈಲಿನ ಅಂಗಳಕ್ಕೆ ಎಸೆಯಲ್ಪಟ್ಟಿದ್ದ. ಆ ರಕ್ತ ಸೋರುತ್ತಿದ್ದ ಆತನ ಮುಖವು ಇನ್ನೂ ನನ್ನ ಮನದಾಳದಲ್ಲಿ ಮರೆಯಲಾಗದ ನೆನಪಾಗಿ ಉಳಿದಿದೆ ಎಂದು ಮಅದನಿ ಹೇಳಿದರು.
ಇಂದು, ಉತ್ತಮ ಅಂಕಗಳೊಂದಿಗೆ ಎಲ್ ಎಲ್ ಬಿ ತೇರ್ಗಡೆಯಾದ ಸಂತೋಷವನ್ನು ದಾಖಲಿಸುವಾಗ ಅಲ್ಲಿಗೆ ತಲುಪಲು ಆತ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ತನ್ನ ಜೀವನದಲ್ಲಿ ಆತ ತುಂಬಾ ಅಸುರಕ್ಷಿತನಾಗಿದ್ದ.
ಎರ್ನಾಕುಲಂನ ದೇವೈಕಲ್ ವಿದ್ಯೋದಯ ಶಾಲೆಯಲ್ಲಿ ಎಲ್ ಕೆಜಿ ಅಧ್ಯಯನ, ನಿಲಂಬೂರ್ ಪೀವೀಸ್’ನಲ್ಲಿ ಯುಕೆಜಿ ಮತ್ತು ಪ್ರಥಮ ದರ್ಜೆ ಅಧ್ಯಯನ ಮತ್ತು ನಂತರ 9 ಮತ್ತು 10 ನೇ ತರಗತಿಯಲ್ಲಿ ಪೀವೀಸ್’ನಲ್ಲಿ ಪಡೆದ ತರಗತಿಗಳು ಮಾತ್ರ ಎಲ್ ಎಲ್ ಬಿಗೆ ಮೊದಲು ಅವರಿಗೆ ಸುರಕ್ಷಿತವಾಗಿ ಲಭ್ಯವಿದ್ದವು. ನನ್ನ ದೈನಂದಿನ ಆಸ್ಪತ್ರೆ ವಾಸ್ತವ್ಯ ಮತ್ತು ಉದ್ವಿಗ್ನ ಹಗಲು ರಾತ್ರಿಗಳ ನಡುವೆ ಅವರು ಕಷ್ಟಪಟ್ಟು ಸಂಪಾದಿಸಿದ ಸಾಧನೆಗಳನ್ನು ಮಅದನಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಮಅದನಿ ಜೀವಂತ ಹುತಾತ್ಮರಾಗಿದ್ದು, ಆರೋಪಿಯ ವಿಚಾರಣೆಯ ಹಕ್ಕನ್ನು ನಿರಾಕರಿಸಿದ ಜೈಲು ಮತ್ತು ಆಸ್ಪತ್ರೆಯಲ್ಲಿ ನರಕವನ್ನು ಅನುಭವಿಸುತ್ತಾರೆ. ಒಂದರ್ಥದಲ್ಲಿ, ಮಅದನಿ ಭಾರತೀಯ ನ್ಯಾಯಾಂಗದ ಬಲಿಪಶುವೂ ಹೌದು. ಮಅದನಿ ಮತ್ತು ನಾಗರಿಕ ಸಮಾಜವು ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದೆ, ಅವರು ತಪ್ಪು ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದರೆ ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ಸಿದ್ಧರಿದ್ದೇವೆ, ಆದರೆ ಅದಕ್ಕಾಗಿ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
“ತಂದೆಯ ಜೈಲು ವಾಸ ನನ್ನಲ್ಲಿ ಎಂದೂ ತುಂಬಲಾಗದ ಶೂನ್ಯ ಸೃಷ್ಟಿಸಿತ್ತು. ಅದನ್ನು ಭರಿಸಲು ಬೇರೇನೂ ಇರಲಿಲ್ಲ. ಈದ್ ದಿನಗಳಲ್ಲಿ ನಾನು ಅವರಿಗಾಗಿ ಹಂಬಲಿಸುತ್ತಿದ್ದೆ. ವಿದ್ವಾಂಸರಿಂದ ಮಾರ್ಗದರ್ಶನ ಪಡೆಯುತ್ತಿದ್ದೆ” ಎಂದು ಎರ್ನಾಕುಲಂ ಜಿಲ್ಲೆಯ ಕಾಳೂರ್’ನ ಎರಡು ಮಹಡಿಯ ಮನೆಯ ಅತಿಥಿ ಕೋಣೆಯಲ್ಲಿ ಸಲಾಹುದ್ದೀನ್ ಹೇಳಿದರು.
ನನ್ನ ತಂದೆಯೇ ಕಾನೂನು ಕಲಿಯಲು ಸ್ಫೂರ್ತಿ. ನನ್ನ ತಂದೆಯ ಬದುಕಿನಲ್ಲಿ ನ್ಯಾಯ ಸಿಗಲಿಲ್ಲ. ಇಡೀ ದೇಶದ ಕಾನೂನು ಎಟುಕದವರ ಮುಖ ನನ್ನ ಮುಂದೆ ಬರುತ್ತಿದ್ದುದರಿಂದ ನಾನು ಲಾ ಡಿಗ್ರಿಯನ್ನೇ ಆಶಿಸಿ ಪಡೆದೆ ಎನ್ನುತ್ತಾರೆ ಸಲಾಹುದ್ದೀನ್.
ಸಲಾಹುದ್ದೀನ್ ಅವರ ತಂದೆ ಅಬ್ದುಲ್ ನಾಸಿರ್ ಮಅದನಿಯವರು ಓರ್ವ ಗಣ್ಯ ಮುಸ್ಲಿಂ ರಾಜಕೀಯ ನಾಯಕರಾಗಿದ್ದರು; ಮುಸ್ಲಿಂ ಸೇವಕ ಸಂಘ ಮತ್ತು ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಸ್ಥಾಪಕರು. 1998ರ ಮಾರ್ಚ್ 31ರಂದು ಕೊಯಮುತ್ತೂರಿನಲ್ಲಿ ನಡೆದ ಬಾಂಬ್ ಸ್ಫೋಟ ಸಂಬಂಧ ಅವರನ್ನು ಬಂಧಿಸಲಾಗಿತ್ತು. 2007ರ ಆಗಸ್ಟ್ ನಲ್ಲಿ 9 ವರ್ಷಗಳ ಜೈಲು ವಾಸದ ಬಳಿಕ ಎಲ್ಲ ಆರೋಪಗಳಿಂದ ಮಅದನಿಯವರು ಮುಕ್ತರಾಗಿ ಹೊರಬಂದಿದ್ದರು.
ಆದರೆ 2008ರ ಬೆಂಗಳೂರು ಬಾಂಬ್ ಸ್ಫೋಟದ ಸಂಬಂಧ 2010ರ ಆಗಸ್ಟ್’ನಲ್ಲಿ ಅವರನ್ನು ಮತ್ತೆ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಯಿತು. 2014ರ ಜುಲೈಯಲ್ಲಿ ಮಅದನಿಯವರಿಗೆ ಆರೋಗ್ಯ ಕೆಟ್ಟಿದ್ದ ಕಾರಣ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಬೆಂಗಳೂರು ಬಿಡಬಾರದು, ಸಾಕ್ಷಿ ಮೊದಲಾದವರ ಭೇಟಿ ನಿಷೇಧ ಇತ್ಯಾದಿ ಷರತ್ತಿನ ಜಾಮೀನು ಅದಾಗಿದೆ.
ಇದರ ನಡುವೆ 2005ರ ಸೆಪ್ಟೆಂಬರ್’ನಲ್ಲಿ ಕೇರಳದ ಕಲಮಚೇರಿಯಲ್ಲಿ ತಮಿಳುನಾಡಿನ ಬಸ್ಸೊಂದನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಅದನಿಯವರ ಪತ್ನಿ ಸೂಫಿಯಾ ಮಅದನಿಯವರನ್ನು 2009ರ ಡಿಸೆಂಬರ್’ನಲ್ಲಿ ಅವರ ಮನೆಯಿಂದ ಬಂಧಿಸಲಾಯಿತು. ಅನುಮತಿ ಇಲ್ಲದೆ ಎರ್ನಾಕುಲಂ ಜಿಲ್ಲೆ ಬಿಡುವುದಿಲ್ಲ ಎಂಬ ಷರತ್ತಿನ ಮೇಲೆ ಅವರು ಎನ್’ಐಎ ಕೋರ್ಟಿನಿಂದ ಕೆಲ ದಿನಗಳಲ್ಲೇ ಜಾಮೀನು ಪಡೆದರು. ಸಕ್ಕರೆ ಕಾಯಿಲೆ, ಮೂತ್ರ ಸಮಸ್ಯೆ ಇತ್ಯಾದಿಯಿಂದ ಬಳಲುತ್ತಿದ್ದ ಗಂಡನನ್ನು ಬೆಂಗಳೂರಿನಲ್ಲಿ ನೋಡಿಕೊಳ್ಳಲು ಶ್ರೀಮತಿ ಮಅದನಿಯವರು ಜಾಮೀನನ್ನು 2014ರಲ್ಲಿ ನಿಯಮ ಸಡಿಲಗೊಳಿಸಲಾಯಿತು.
ಕೇರಳದ ಕೊಲ್ಲಂ ಜಿಲ್ಲೆಯ ಅನ್ವರಿಶ್ಯೇರಿಯಲ್ಲಿ 1992ರ ಆಗಸ್ಟ್ ನಲ್ಲಿ ಆರೆಸ್ಸೆಸ್ ನವರ ಬಾಂಬು ದಾಳಿಯಿಂದ ಮಅದನಿಯವರು ತಮ್ಮ ಬಲಗಾಲು ಕಳೆದುಕೊಂಡಿದ್ದರು. ಆರೋಗ್ಯ ಕಾರಣಕ್ಕೆ ತಮ್ಮ ಕೇರಳದ ಊರಿಗೆ ಹೋಗಲು ಅನುಮತಿ ಕೋರಿ ಮಅದನಿಯವರು 2021ರ ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮಅದನಿ ಅಪಾಯಕಾರಿ ಮನುಷ್ಯ ಎಂದು ಕರೆದ ಆಗಿನ ಸಿಜೆಐ ಅರ್ಜಿ ಮಾನ್ಯ ಮಾಡಲಿಲ್ಲ.
ಬೆಳೆದ ವ್ಯಕ್ತಿಗಳು ಜೈಲಲ್ಲಿ ಇರುವುದು, ಮಕ್ಕಳು ಅವರನ್ನು ದೂರದಿಂದಲೆ ನೋಡಿ ಬೆಳೆಯುವುದು ಮಾಮೂಲು. ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ಭೇಟಿಯಾಗಲು ಬಿಡುತ್ತಾರೆ ಎಂದೇ ಬಾಲ್ಯದಲ್ಲಿ ಸಲಾಹುದ್ದೀನ್ ಭಾವಿಸಿದ್ದರು.
“ನಾನು ನೇರವಾಗಿ ಅವರನ್ನು ನೋಡಬೇಕು, ಅವರ ಕಣ್ಣಿನ ಒಳ ಉತ್ಸಾಹ ನೋಡಬೇಕು” ಎನ್ನುತ್ತಾರೆ ಸಲಾಹುದ್ದೀನ್.
ಮಅದನಿಯವರು ಈಗ ತೀವ್ರ ಆರೋಗ್ಯ ಸಮಸ್ಯೆಗಳಿಂದಾಗಿ ವೈದ್ಯರ ನಿತ್ಯ ಸಂಪರ್ಕದಲ್ಲಿ ಇದ್ದಾರೆ.
“ನಾನು ದೀರ್ಘ ಕಾಲ ನನ್ನ ತಂದೆ ಹೆತ್ತವರಿಂದ ದೂರ ಇರಬೇಕಾಯಿತು. ಇದಕ್ಕೆ ಅನ್ಯಾಯದ ಇಲ್ಲಿನ ಕಾನೂನು ವ್ಯವಸ್ಥೆಗಳೇ ಕಾರಣ” ಎನ್ನುತ್ತಾರೆ ಸಲಾಹುದ್ದೀನ್.
ಒಂಬತ್ತನೆಯ ತರಗತಿಯಲ್ಲಿ ಓದುವಾಗಿನಿಂದಲೇ ಕಾನೂನು ತಜ್ಞನಾಗಲು ಸಲಾಹುದ್ದೀನ್ ಬಯಸಿದ್ದರು.

Join Whatsapp