ಶಾಸಕರೇ ಲೆಕ್ಕ ಕೊಡಿ: ಚಿಕ್ಕಪೇಟೆಯಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಪರಿಶೋಧನಾ ಯಾತ್ರೆ

Prasthutha|

ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅನುದಾನ ಹಾಗೂ ಅಭಿವೃದ್ಧಿಯ ಲೆಕ್ಕ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯು ಕ್ಷೇತ್ರದ ವಿವಿಧ ರಸ್ತೆಗಳಲ್ಲಿ ಶನಿವಾರದಂದು ಪರಿಶೋಧನಾ ಯಾತ್ರೆ ನಡೆಸಿತು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಉಪಾಧ್ಯಕ್ಷ ಭಾಸ್ಕರ್ ರಾವ್  ಸಮ್ಮುಖದಲ್ಲಿ ನಗರದ ರಾಮಕೃಷ್ಣ ಆಶ್ರಮ ವೃತ್ತದಲ್ಲಿನ ವಿವೇಕಾನಂದ ಪ್ರತಿಮೆ ಮುಂಭಾಗದಿಂದ ಪ್ರಾರಂಭವಾಯಿತು.

- Advertisement -

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಯುವ ಘಟಕದ ಅಧ್ಯಕ್ಷ ಪ್ರಕಾಶ್ ನಾಗರಾಜ್, “ಪರಿಶೋಧನಾ ಯಾತ್ರೆಯ ಮಧ್ಯೆ ಅನೇಕ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಪ್ರಾಥಮಿಕ ಕೇಂದ್ರಗಳಿಗೆ ಭೇಟಿ ನೀಡಲಾಗಿದೆ. ಇವುಗಳಲ್ಲಿ ಸರ್ಕಾರ ಹಾಗೂ ಶಾಸಕರ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಕ್ಷೇತ್ರದ ಕೊಳಗೇರಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಲ್ಲದೇ ಸಾವಿರಾರು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಬಗೆಹರಿಸಿ, ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದರಲ್ಲಿ ಶಾಸಕ ಉದಯ್ ಗರುಡಾಚಾರ್ ಸಂಪೂರ್ಣ ವಿಫಲರಾಗಿದ್ದಾರೆ” ಎಂದು ಹೇಳಿದರು.

“ತಮ್ಮ ಮಾಲೀಕತ್ವದ ವಿವಿಧ ಉದ್ಯಮಗಳನ್ನು ವಿಸ್ತರಿಸುವುದರಲ್ಲೇ ನಿರತರಾಗಿರುವ ಶಾಸಕ ಉದಯ್ ಗರುಡಾಚಾರ್ರವರಿಗೆ ಕ್ಷೇತ್ರದ ಜನರ ಕಷ್ಟಗಳು ಕಾಣಿಸುತ್ತಿಲ್ಲ. ಅವರ ಮಾವೆರಿಕ್ ಹೋಲ್ಡಿಂಗ್ಸ್ ರಿಯಲ್ ಎಸ್ಟೇಟ್ ಕಂಪನಿಗೆ ಲಾಭ ಮಾಡಿಕೊಳ್ಳಲು ಬಿಡಿಎ ವಸತಿ ಸಂಕೀರ್ಣಗಳನ್ನು ಲಪಟಾಯಿಸುತ್ತಿದ್ದಾರೆ. ಉದಯ್ ಗರುಡಾಚಾರ್ರವರು ಆಸ್ತಿ ವಿವರಗಳನ್ನು ಮಾಹಿತಿ ಮುಚ್ಚಿಟ್ಟು, ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂತಹ ಭ್ರಷ್ಟರನ್ನು ಮತ್ತೊಮ್ಮೆ ಗೆಲ್ಲಿಸಬೇಕೇ ಎಂಬ ಬಗ್ಗೆ ಕ್ಷೇತ್ರದ ಜನತೆ ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ” ಎಂದು ಪ್ರಕಾಶ್ ನಾಗರಾಜ್ ಹೇಳಿದರು.

- Advertisement -

“ಪರಿಶೋಧನಾ ಯಾತ್ರೆಯು ಕೇವಲ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಚಿಕ್ಕಪೇಟೆ ಕ್ಷೇತ್ರದಲ್ಲಿ ಅನೇಕ ಜನಾಂಧೋಲನಗಳನ್ನು ಏರ್ಪಡಿಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ. ಭ್ರಷ್ಟ ಶಾಸಕರಿಗೆ ಹಿನ್ನಡೆ ಉಂಟುಮಾಡಿ, ಪ್ರಾಮಾಣಿಕ ಜನಪ್ರತಿನಿಧಿಗಳು ಕ್ಷೇತ್ರದಿಂದ ಆಯ್ಕೆಯಾಗುವಂತೆ ಮಾಡುತ್ತೇವೆ” ಎಂದು ಪ್ರಕಾಶ್ ನಾಗರಾಜ್ ಹೇಳಿದರು.

Join Whatsapp