ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಮತ್ತೊಂದು ಜೀವ ಬಲಿ

Prasthutha|

ಕೊಡಗು: ನಿನ್ನೆ(ಭಾನುವಾರ) ಬಾಲಕನ ಜೀವ ಬಲಿ ಪಡೆದ ಹುಲಿ ಇಂದು(ಸೋಮವಾರ) ಬೆಳಗ್ಗೆ 7 ಗಂಟೆ ಸುಮಾರಿಗೆ ಬಾಡಗ ಗ್ರಾಮದ ಲೈನ್ ಮನೆ ಬಳಿ 75 ವರ್ಷದ ರಾಜು ಎಂಬುವವರನ್ನು ಹೊಂಚು ಹಾಕಿ ಬಲಿ ಪಡೆದಿದೆ.

- Advertisement -

ಹುಲಿ ಮನುಷ್ಯರನ್ನು ಬಲಿ ಪಡೆಯುತ್ತಿರುವ ಹಿನ್ನೆಲೆ ಆಕ್ರೋಶಗೊಂಡಿರುವ ಗ್ರಾಮಸ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇಂದು ಶಾಸಕ ಕೆ ಜಿ. ಬೋಪಯ್ಯ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ನರಭಕ್ಷಕ ಹುಲಿ ಭೇಟೆಗೆ ಅರಣ್ಯ ಇಲಾಖೆಗೆ ಅನುಮತಿ ನೀಡುವಂತೆ ಕೋರಲಿದ್ದಾರೆ.

- Advertisement -

 ಯುವಕ ಬಲಿ

ಹಾಡಹಗಲೇ ಹದಿಹರೆಯದ ಯುವಕನೊಬ್ಬ ನಿನ್ನೆ ಹುಲಿ ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಪೊನ್ನಂಪೇಟೆ ತಾಲೂಕಿನ ಕುಟ್ಟ ಸಮೀಪದ ಪಾಲ್ಕೇರಿ ಗ್ರಾಮದಲ್ಲಿ ನಡೆದಿದೆ.

ವೀರಹೊಸನಹಳ್ಳಿಯ ಸೊಳ್ಳೆಪುರದ  ಚೇತನ್​ (18) ಮೃತಪಟ್ಟವರು. ಮಗನನ್ನು ಹುಡುಕಲು ಹೋಗಿದ್ದಾಗ ತಂದೆ ಮೇಲೂ ಹುಲಿ ದಾಳಿ ನಡೆಸಿದ್ದು ಅದೃಷ್ಟವಶಾತ್ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಟ್ಟ ಸಮೀಪದ ನಾಲರಿಯ ಎನ್.ಪೂಣಚ್ಚ ಎಂಬವರಿಗೆ ಸೇರಿದ ತೋಟಕ್ಕೆ ಕಾಫಿ ಕೊಯ್ಲು ಮಾಡಲು ಚೇತನ್ ಬಂದಿದ್ದು, ನಿನ್ನೆ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಹುಲಿ ಅವರ ಮೇಲೆ ಎರಗಿತ್ತು. ತೋಟದ ಸಮೀಪ ಹುಲಿ ನಡೆಸಿದ ದಾಳಿಗೆ  ಚೇತನ್ ಸಾವಿಗೀಡಾಗಿದ್ದರು.

ಚೇತನ್ ಮೈಸೂರು ಜಿಲ್ಲೆಯ ಪಂಚವಳ್ಳಿ ಗ್ರಾಮದ ಯುವಕ ಎಂದು ತಿಳಿದುಬಂದಿದೆ.  ಚೇತನ್ ಹುಡುಕಿಕೊಂಡು ಬಂದ ಅವರ ತಂದೆಯ ಮೇಲೂ ವ್ಯಾಘ್ರ ಎರಗಿತ್ತು. ಆದರೆ ಅದೃಷ್ಟವಶಾತ್​ ತಂದೆ ಮಧು ಹುಲಿ ಬಾಯಿಂದ ತಪ್ಪಿಸಿಕೊಂಡು ಬಂದಿದ್ದರು. ಮಗನನ್ನು ಹುಡುಕುವ ಸಂದರ್ಭ ಹುಲಿ ದಾಳಿ ಮಾಡಿದ್ದು ಸಣ್ಣಪುಟ್ಟ ಗಾಯದೊಂದಿಗೆ ಮಧು ಪಾರಾಗಿದ್ದಾರೆ.  ಮೃತ ಯುವಕನ ಕುಟುಂಬಕ್ಕೆ ಅರಣ್ಯಾಧಿಕಾರಿಗಳು ಪರಿಹಾರ ರೂಪದಲ್ಲಿ 2.50 ಲಕ್ಷದ ಚೆಕ್ ವಿತರಣೆ ಮಾಡಿದ್ದಾರೆ. ಒಟ್ಟು 15 ಲಕ್ಷ ಪರಿಹಾರದ ಭರವಸೆ ನೀಡಲಾಗಿದೆ. ಸದ್ಯ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp