ಪುತ್ರನಿಗೆ ಕಾಂಗ್ರೆಸ್ ಟಿಕೆಟ್: ಬಿಜೆಪಿಯ ಎಲ್ಲಾ ಜವಾಬ್ದಾರಿಗಳಿಂದಲೂ ಎ.ಮಂಜು ‘ಬಿಡುಗಡೆ’

Prasthutha|

ಪುತ್ರನಿಗೆ ಕಾಂಗ್ರೆಸ್ ಪರಿಷತ್ ಟಿಕೆಟ್: ಬಿಜೆಪಿಯ ಎಲ್ಲಾ ಜವಾಬ್ಧಾರಿಗಳಿಂದಲೂ ಎ.ಮಂಜು ‘ಬಿಡುಗಡೆ’

- Advertisement -

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಮೂರೂ ಪಕ್ಷಗಳಲ್ಲೂ ಗೆಲುವಿನ ತಂತ್ರಗಾರಿಗೆ ಜೋರಾಗಿಯೇ ನಡೆಯುತ್ತಿದೆ. ಕುಟುಂಬದ ರಾಜಕಾರಣದ ಪ್ರಭಾವ ಈ ಚುನಾವಣೆಯಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿರುವ 20 ಅಭ್ಯರ್ಥಿಗಳ ಪಟ್ಟಿಯಲ್ಲಿ 12 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಆಶ್ಚರ್ಯವೆಂದರೆ, ಕಳೆದ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಸೇರಿದ್ದ ಎ.ಮಂಜು ಅವರ ಪುತ್ರ ಡಾ. ಮಂಥರ್ ಗೌಡಗೆ ಕಾಂಗ್ರೆಸ್ B ಫಾರಂ ನೀಡಿದೆ. ವಿಧಾನ ಪರಿಷತ್ತಿನ ಕೊಡಗು ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಥರ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ತಂದೆ ಎ ಮಂಜು ಬಿಜೆಪಿ ಸೇರಿದ್ದರೂ, ಪುತ್ರ ಮಂಥರ್ ಗೌಡ ಕಾಂಗ್ರೆಸ್ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಮುಂದುವರಿದಿದ್ದರು.

- Advertisement -
ಮಂಥರ್ ಗೌಡ

ಈ ಬೆಳವಣಿಗೆಯ ನಡುವೆ ಬಿಜೆಪಿ ರಾಜ್ಯ ಶಿಸ್ತು ಸಮಿತಿಯು, ಪಕ್ಷದಲ್ಲಿ ನೀಡಲಾಗಿದ್ದ ಎಲ್ಲಾ ಜವಾಬ್ಧಾರಿಗಳಿಂದಲೂ ಮಂಜು ಅವರನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಈ ಕುರಿತಾಗಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇತ್ತೀಚಿನ ಕೆಲ ಬೆಳವಣಿಗೆಗಳಿಂದ ಕೆಲವೊಂದು ಸಂಶಯಗಳು ಉಂಟಾಗಿದೆ. ಈ ಕಾರಣದಿಂದಾಗಿ ಮಂಡ್ಯ ಜಿಲ್ಲೆಯ ಪ್ರಭಾರಿ ಹಾಗೂ ಇನ್ನುಳಿದ ಎಲ್ಲಾ ಜವಾಬ್ಧಾರಿಗಳಿಂದ ಮಂಜು ಅವರನ್ನು ಮುಕ್ತಗೊಳಿಸಲಾಗಿದೆ ಎಂದು ಶಿಸ್ತು ಸಮಿತಿ ಆದೇಶದ ಪ್ರತಿಯಲ್ಲಿ ಉಲ್ಲೇಖಿಸಿದೆ.

ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ಎಂ.ಪಿ.ಅಪ್ಪಚ್ಚು ರಂಜನ್ ಅವರ ಸಹೋದರ ಸುಜಾ ಕುಶಾಲಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ನಿಂದ ಹೆಚ್.ಯು. ಇಸಾಕ್ ಖಾನ್ ಸ್ಪರ್ಧೆಯಲ್ಲಿದ್ದಾರೆ.

Join Whatsapp