ಹುರುಳಿ ಸೊಪ್ಪು ಚಕ್ರಕ್ಕೆ ಸಿಲುಕಿ ಬೆಂಕಿಗಾಹುತಿಯಾದ ಕಾರು; 6 ಮಂದಿ ಅಪಾಯದಿಂದ ಪಾರು

Prasthutha|

ಚಾಮರಾಜನಗರ: ರಸ್ತೆಯ ಮೇಲೆ ಒಣಗಲು ಹರಡಿದ್ದ ಹುರುಳಿ ಸೊಪ್ಪು ಚಕ್ರಕ್ಕೆ ಸಿಲುಕಿ ಕಾರಿಗೆ ಬೆಂಕಿ ಹೊತ್ತಿ ಕೊಂಡಿದ್ದು, ಅದೃಷ್ಟವಶಾತ್ 6ಮಂದಿ ಪಾರಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಹೊನ್ನೇಗೌಡನಹಳ್ಳಿ-ಗೋಪಾಲಪುರ ರಸ್ತೆಯಲ್ಲಿ ನಡೆದಿದೆ.

- Advertisement -

ಕೇರಳದ ಕಾರು  ಹೊನ್ನೇಗೌಡನಹಳ್ಳಿ- ಗೋಪಾಲಪುರ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆ ಮೇಲೆ ಒಣಗಲು ಹಾಕಿದ್ದ ಹುರುಳಿ ಸೊಪ್ಪು ಕಾರಿನ ಚಕ್ರಕ್ಕೆ ಸುತ್ತಿಕೊಂಡು ಕ್ಷಣಮಾತ್ರದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳದಲ್ಲಿದ್ದ ಕೆಲವರು ಬೆಂಕಿ ನಂದಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ  ಬಂದು ಬೆಂಕಿ ನಂದಿಸಿದ್ದಾರೆ.

ರಸ್ತೆಯಲ್ಲಿ ಒಣಗಲು ಹಾಕುವುದನ್ನು ನಿಷೇಧಿಸಿದ್ದರೂ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ರೈತರು ಕಾನೂನನ್ನು ಗಾಳಿಗೆ ತೂರಿ  ಒಣಗಿಸುತ್ತಿರುವುದು ಕಂಡು ಬರುತ್ತಿದೆ. ಸ್ವಂತ ಕಣ ಇದ್ದರೂ ಕೂಡ ಹೆಚ್ಚಿನ ರೈತರು ನೇರವಾಗಿ ಹುರುಳಿಯನ್ನು ತಂದು ರಸ್ತೆಗೆ ಹಾಕುತ್ತಾರೆ. ಇದರ ಮೇಲೆ ವಾಹನಗಳು ಹಾದು ಹೋದಾಗ ಕಾಳುಗಳು ಉದುರುತ್ತವೆ. ಆ ನಂತರ ಬಳ್ಳಿಗಳನ್ನು ತೆಗೆದು ಕಾಳುಗಳನ್ನು ತೆಗೆದು ಸ್ವಚ್ಛಗೊಳಿಸಿ ಚೀಲಗಳಲ್ಲಿ ತುಂಬಿಸಿ ಮನೆಗೆ ಕೊಂಡೊಯ್ಯುತ್ತಾರೆ.

- Advertisement -

ರಸ್ತೆಯಲ್ಲಿ ಹುರುಳಿ  ಒಣಗಲು ಹಾಕದಂತೆ ಈಗಾಗಲೇ ಪೊಲೀಸರು ಸೂಚನೆ ನೀಡಿದ್ದರೂ ಸಹ ರೈತರು ರಸ್ತೆಯಲ್ಲಿ ಹಾಕುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳಬೇಕೆಂದು ಸವಾರರು ಒತ್ತಾಯಿಸಿದ್ದಾರೆ.

Join Whatsapp