ದೇಶದಲ್ಲಿ ರಸಗೊಬ್ಬರ, ಬಿತ್ತನೆ ಬೀಜದ ಕೊರತೆಯಿಲ್ಲ: ಸಚಿವೆ ಶೋಭಾ ಕರಂದ್ಲಾಜೆ

Prasthutha|

ಬೆಂಗಳೂರು: ದೇಶದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆಯಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

- Advertisement -

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಚುರುಕಾಗಿದ್ದು, ಆಯಾ ರಾಜ್ಯಗಳ ಬೇಡಿಕೆಗೆ ಅನುಸರವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಲಾಗಿದೆ ಎಂದರು.

ರಾಜ್ಯದ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರಕ್ಕೆ ತಲುಪಿಲ್ಲ. ಮಳೆ, ಪ್ರವಾಹ ಸಂಪೂರ್ಣವಾಗಿ ತಗ್ಗಿದ ನಂತರ ಬೆಳೆ ನಷ್ಟದ ವಿವರ ಸ್ಪಷ್ಟವಾಗಲಿದೆ. ಅನೇಕ ಜಿಲ್ಲೆಗಳಲ್ಲಿ ಪ್ರವಾಹದಿಂದ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಮತ್ತೊಮ್ಮೆ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು. ಎಲ್ಲ ರಾಜ್ಯಗಳು ಬೆಳೆ ನಷ್ಟದ ವರದಿ ನೀಡಿದ ನಂತರ ಪರಿಹಾರ ನೀಡಲಾಗುವುದು, ಅಗತ್ಯವಿದ್ದರೆ ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು.



Join Whatsapp