ಅಕ್ರಮದಲ್ಲಿ ತಹಶೀಲ್ದಾರ್ ಸೇರಿ ಅಧಿಕಾರಿಗಳು ಭಾಗಿಯಾಗಿರುವ ಶಂಕೆ.! ಸಿ.ಎಸ್.ಗೆ ಇಮೇಲ್ ಮಾಡಿದ ಶಾಲಾ ಅಭಿವೃದ್ಧಿ ಸಮಿತಿ.

Prasthutha|

ಸುಳ್ಯ: ಕಡಬ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇನ್ಯ ಇಲ್ಲಿನ ಶಾಲಾ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿರುವ ಬಗ್ಗೆ, ಈಗಾಗಲೇ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ದೂರು ನೀಡುತಿದ್ದರೂ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಕಡಬ ತಾಲೂಕು ತಹಶೀಲ್ದಾರ್ ರವರಿಗೆ ಈ ವಿಷಯದ ಬಗ್ಗೆ ಅನೇಕ ಬಾರಿ ಲಿಖಿತ ದೂರನ್ನು ಸಲ್ಲಿಸಿದ್ದರೂ ಈ ತನಕ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಎಲ್ಲರೂ ಭ್ರಷ್ಟಾಚಾರದಲ್ಲಿ ಭಾಗಿಯರುವುದು ಪ್ರತ್ಯಕ್ಷವಾಗಿ ಕಂಡುಬರುತ್ತಿದೆ. ತಾವು ಮತ್ತೊಮ್ಮೆ ಈ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಕೇನ್ಯ ಶಾಲಾಭಿವೃದ್ಧಿ ಸಮಿತಿ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಇಮೇಲ್ ಮಾಡಿದೆ.

- Advertisement -

ಕೇನ್ಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಆವರಣ ಗೋಡೆಯೊಳಗಿರುವ ಜಮೀನನ್ನು ಸ್ಥಳೀಯ ಖಾಸಗಿ ವ್ಯಕ್ತಿಯೊರ್ವರೂ ಅಕ್ರಮವಾಗಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿ, ಪ್ರಧಾನ ಮಂತ್ರಿಗಳಿಗೂ ದೂರು ನೀಡಲಾಗಿತ್ತು. ಕೂಡಲೇ ಇದರ ಬಗ್ಗೆ ತನಿಖೆ ಮಾಡಲು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಜನವರಿ 20, 2022 ರಂದು ಸರಕಾರದ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಲ್ಲಿ ಅಕ್ರಮ ಕಾಮಗಾರಿ ನಿರಂತರವಾಗಿ ನಡೆಯುತ್ತಿದ್ದು, ಇದೀಗ ಮನೆ ನಿರ್ಮಿಸಲು ಭೂಪರಿವರ್ತನೆ ಮಾಡಿಸಿಕೊಂಡು ಬಲ್ಪ ಗ್ರಾಮ ಪಂಚಾಯತ್ ನಿಂದ ಅನುಮತಿಯನ್ನು ಪಡೆಯಲಾಗಿದೆ ಎನ್ನಲಾಗಿದ್ದು, ಆದರೆ ಅನುಮತಿ ಪಡೆದ ಜಾಗ ಮತ್ತು ಮನೆ ನಿರ್ಮಿಸುತ್ತಿರುವ ಜಾಗ ಬೇರೆ ಬೇರೆ ಆಗಿರುತ್ತದೆ ಎನ್ನಲಾಗಿದೆ. ಈಗಾಗಲೇ ಇದರ ಬಗ್ಗೆ ಪಂಚಾಯತ್ ಗೆ 6ನೇ ಸಲ ದೂರು ನೀಡಿದ್ದು , ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಇದೀಗ ಮನೆ ನಿರ್ಮಾಣ ಕಾರ್ಯವು ಶೇಕಡ 80 % ರಷ್ಟು ಈಗಾಗಲೇ ಮುಗಿದಿದೆ. ಇಲ್ಲಿ ಕಾನೂನು ಮತ್ತು ಅಧಿಕಾರಿ ವರ್ಗಕ್ಕೂ ಬೆಲೆ ನೀಡದೆ ನಿರಂತರವಾಗಿ ಅಕ್ರಮ ನಡೆಸುತ್ತ ಬಂದಿರುವುದು ಬೇಸರದ ವಿಷಯವಾಗಿದ್ದು, ಕಡಬ ತಾಲೂಕು ತಹಶೀಲ್ದಾರ್ ಗೆ ಈ ವಿಷಯದ ಬಗ್ಗೆ ಅನೇಕ ಬಾರಿ ಲಿಖಿತ ದೂರನ್ನು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ 7 ವರ್ಷಗಳಿಂದ ಈ  ವಿಷಯದ ಬಗ್ಗೆ ನಿರಂತರವಾಗಿ ದೂರನ್ನು ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಕಡಬ ತಹಶೀಲ್ದಾರ್ ಸೇರಿದಂತೆ ಎಲ್ಲರೂ ಭ್ರಷ್ಟಾಚಾರದಲ್ಲಿ ಭಾಗಿಯರುವುದು ಪ್ರತ್ಯಕ್ಷವಾಗಿ ಕಂಡುಬರುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

- Advertisement -

 ಆದ್ದರಿಂದ  ಮತ್ತೊಮ್ಮೆ ಈ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕಾಗಿ ಮತ್ತು ಇದರಲ್ಲಿ ದೊಡ್ಡ ಮಟ್ಟದ ಅಕ್ರಮ ಕಂಡುಬರುತ್ತಿರುವುದರಿಂದ ಈಗ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಗಾಗಿ ವಿನಂತಿಸುತ್ತಿದ್ದೇವೆ ಎಂದು ಕೇನ್ಯ ಶಾಲಾಭಿವೃದ್ಧಿ ಸಮಿತಿ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರನ್ನು ಇಮೇಲ್ ಮಾಡಿದೆ.



Join Whatsapp