ರತನ್ ಟಾಟಾ ಗೆ ಭಾರತ ರತ್ನ ನೀಡುವಂತೆ ಕೋರಿ ಮನವಿ; ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್

Prasthutha|

ಹೊಸದಿಲ್ಲಿ:  ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

- Advertisement -

ವ್ಯಕ್ತಿಯೊಬ್ಬರಿಗೆ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ನೀಡುವಂತೆ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡುವುದಿಲ್ಲ ಎಂದು ಹೈಕೋರ್ಟ್ ನ  ಹಂಗಾಮಿ ಚೀಫ್ ಜಸ್ಟೀಸ್ ವಿಪಿನ್ ಸಾಂಘಿ ನೇತೃತ್ವದ ಪೀಠ ಹೇಳಿದೆ.

ಭಾರತ ರತ್ನ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಕೋರ್ಟ್ ನಿರ್ದೇಶಿಸಬೇಕೇ? ಇದು ಯಾವ ರೀತಿಯ ಮನವಿ? ಎಂದು ಜಸ್ಟೀಸ್ ನವೀನ್ ಚಾವ್ಲಾ ಕೂಡಾ ಪ್ರಶ್ನಿಸಿದ್ದಾರೆ.

- Advertisement -

ಕನಿಷ್ಠ ಪಕ್ಷ ಕೋರ್ಟ್ ಸರ್ಕಾರಕ್ಕೆ ಮನವಿ ಮಾಡಬಹುದಾಗಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ, “ನೀವೆ ಹೋಗಿ ಮನವಿ ಮಾಡಿಕೊಳ್ಳಿ, ಇದರಲ್ಲಿ ಕೋರ್ಟ್ ಮಧ್ಯಪ್ರವೇಶಿಸುವ ಪ್ರಶ್ನೆ ಎಲ್ಲಿದೆ ಎಂದು ಹಂಗಾಮಿ ಚೀಫ್ ಜಸ್ಟೀಸ್ ಪ್ರತಿಕ್ರಿಯಿಸಿದ್ದಾರೆ.

ದಂಡದೊಂದಿಗೆ ಅರ್ಜಿಯನ್ನು ವಜಾಗೊಳಿಸುವುದಾಗಿ ಪೀಠ ಹೇಳಿದ ಬಳಿಕ ಅರ್ಜಿದಾರರ ವಕೀಲರು ಅರ್ಜಿಯನ್ನು ವಾಪಸ್ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.



Join Whatsapp