ಬೆಕ್ಕು ಕಚ್ಚಿ ವೈದ್ಯರ ಪತ್ನಿ ಸೇರಿ ಇಬ್ಬರು ಮಹಿಳೆಯರ ಸಾವು

Prasthutha|

ವಿಜಯವಾಡ (ಆಂಧ್ರಪ್ರದೇಶ): ಬೆಕ್ಕು ಕಚ್ಚಿ ವೈದ್ಯರೊಬ್ಬರ ಪತ್ನಿ ಸೇರಿ ಇಬ್ಬರು ಮಹಿಳೆಯರು ದುರಂತ ಅಂತ್ಯ ಕಂಡ ಘಟನೆ ವಿಜಯವಾಡದಲ್ಲಿ ಸಂಭವಿಸಿದೆ.

- Advertisement -

 ವಿಜಯವಾಡದ ಕೃಷ್ಣಾ ಜಿಲ್ಲೆಯ ಮೊವ್ವ ಮಂಡಲದ ವೇಮುಲಮಾಡದ ಎಸ್ ಸಿ ಕಾಲನಿಯ ಆರ್ಎಂಪಿ ವೈದ್ಯ ಬೊದ್ದು ಬಾಬುರಾವ್ ಪತ್ನಿ ನಾಗಮಣಿ (43) ಹಾಗೂ ನಿವೃತ್ತ ಆರ್ ಟಿಸಿ ಕಂಡಕ್ಟರ್ ಸಾಲಿ ಭಾಗ್ಯರಾವ್ ಪತ್ನಿ ಕಮಲಾ (64) ಮೃತ ದುರ್ದೈವಿಗಳು. ಈ ಇಬ್ಬರು ಮಹಿಳೆಯರಿಗೆ 2 ತಿಂಗಳ ಹಿಂದೆ ಬೆಕ್ಕು ಕಚ್ಚಿತ್ತು. ಇಬ್ಬರೂ ಟಿಟಿ ಇಂಜೆಕ್ಷನ್ ತೆಗೆದುಕೊಂಡಿದ್ದರಾದರೂ ಇತ್ತೀಚಿಗೆ ಇವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಕಮಲಾ ಮತ್ತು ನಾಗಮಣಿ ಇಬ್ಬರನ್ನೂ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮಾ.5ರಂದು ಗುಂಟೂರು ಜಿಲ್ಲೆಯ ಮಂಗಳಗಿರಿ ಎನ್ ಆರ್ ಐ ಆಸ್ಪತ್ರೆಯಲ್ಲಿ ಕಮಲಾ ಕೊನೆಯುಸಿರೆಳೆದರು. ಅತ್ತ ವಿಜಯವಾಡದ ಕಾರ್ಪೋರೇಟ್ ಆಸ್ಪತ್ರೆಯಲ್ಲಿ ನಾಗಮಣಿ ಮೃತಪಟ್ಟಿದ್ದಾರೆ. ಮಹಿಳೆಯರಿಬ್ಬರಿಗೂ ರೇಬಿಸ್ ಸೋಂಕು ತಗುಲಿತ್ತು. ದೇಹಪೂರ ವಿಷ ವ್ಯಾಪಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯಾಧಿಕಾರಿ ಡಾ.ಶಾಂತಿ ಶಿವರಾಮ ಕೃಷ್ಣರಾವ್ ತಿಳಿಸಿದ್ದಾರೆ.

ಹುಚ್ಚು ನಾಯಿ ಬೆಕ್ಕು ಕಚ್ಚಿತ್ತು: ಹುಚ್ಚು ನಾಯಿ ಕಚ್ಚಿದ್ದ ಬೆಕ್ಕೇ ಕೆಲ ದಿನಗಳ ಬಳಿಕ ನಾಗಮಣಿ ಮತ್ತು ಕಮಲಾ ಅವರನ್ನು ಕಚ್ಚಿತ್ತು. ಬೆಕ್ಕಿಗೆ ರೇಬಿಸ್ ಇರುವ ಬಗ್ಗೆ ಅರಿಯದ ಮಹಿಳೆಯರು ಆ ವೇಳೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ. ಆ ಹುಚ್ಚು ನಾಯಿ ಸತ್ತ ಕೆಲವೇ ದಿನಗಳಲ್ಲಿ ಆ ಬೆಕ್ಕು ಕೂಡ ಸತ್ತಿದೆ. ಇದೀಗ ಮಹಿಳೆಯರೂ ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.



Join Whatsapp