ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು, ಆಯ್ಕೆಯ ಸ್ವಾತಂತ್ರ್ಯದೊಂದಿಗೆ ನಿಲ್ಲುತ್ತೇವೆ: ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಒಕ್ಕೂಟ

Prasthutha|

ಬೆಂಗಳೂರು: ಕಳೆದೆರಡು ತಿಂಗಳುಗಳಿಂದ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು  ನಿರಾಕರಿಸುವ ಮೂಲಕ ಅವರನ್ನು ಶಿಕ್ಷಣ ಸಂಸ್ಥೆಗಳಿಂದ ಬಲವಂತವಾಗಿ ಹೊರಗುಳಿಯುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ವರದಿಯಾದ ಘಟನೆಗಳಲ್ಲಿ ಒಂಟಿ ಮುಸ್ಲಿಂ ಹುಡುಗಿಯನ್ನು ಹಿಂಬಾಲಿಸಿದ, ತರಗತಿಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಘಟನೆಗಳು ಅತ್ಯಂತ ಖಂಡನೀಯ. ವಿದ್ಯಾರ್ಥಿಗಳ ಶಿಕ್ಷಣ ಹಕ್ಕು ಮತ್ತು ಆಯ್ಕೆಯ ಸ್ವಾತಂತ್ರ್ಯದ ಹಕ್ಕಿಗಾಗಿ, ನಾವು ವಿದ್ಯಾರ್ಥಿ-ಯುವಜನರ ಸಂಘಟನೆಗಳು ಮುಸ್ಲಿಂ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ನಮ್ಮ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ ಎಂದು ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಒಕ್ಕೂಟ ತಿಳಿಸಿದೆ.

- Advertisement -

 ತರಗತಿಯ ಕೊಠಡಿಗಳು ಎಲ್ಲರೂ ಸಮಾನವಾಗಿ ಭಾಗಿಯಾಗುವ ಸ್ಥಳಗಳಾಗಿವೆ. ತರಗತಿಗಳಲ್ಲಿ ಅಂತಹ ವಾತಾವರಣವನ್ನು ಒದಗಿಸುವ ಮೂಲಕವೇ ವೈಯಕ್ತಿಕ ಆಚರಣೆಗಳು ಹಾಗೂ ಸಂಸ್ಕೃತಿಯನ್ನು ಪರಸ್ಪರರು ಗೌರವಿಸುತ್ತಾ ವೈವಿಧ್ಯತೆಯ ಕಲಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಧರ್ಮ, ಜಾತಿಯನ್ನು ಅಥವಾ ಸಿದ್ಧಾಂತಗಳನ್ನು ಗಣನೆಗೆ ಪಡೆಯದೇ ಸುರಕ್ಷಿತವಾದ ಕಲಿಕೆಯ ಸ್ಥಳಗಳಾಗಿರಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

ಹಿಜಾಬ್ ಅನ್ನು ಸಮವಸ್ತ್ರದ ಬದಲಾಗಿ ಧರಿಸುತ್ತಿಲ್ಲ. ಇದು ಕೇವಲ ಒಂದು ಬಟ್ಟೆಯ ತುಂಡು, ಅದು ಒಂದು ಹೆಣ್ಣುಮಗಳ ಶಿರವನ್ನು ಮಾತ್ರ ಮರೆಮಾಚುತ್ತದೆ. ತನ್ನ ಸ್ವಂತ ಆಯ್ಕೆಯಿಂದ ಹೆಣ್ಣುಮಕ್ಕಳು ಧರಿಸುವ ಹಿಜಾಬ್ ಯಾರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಅಥವಾ ಇತರರ ನಂಬಿಕೆಗೆ ಧಕ್ಕೆ ಮಾಡುವುದಿಲ್ಲ. ಯಾರು ಏನು ಧರಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಅದನ್ನು ನಾವೆಲ್ಲರೂ ಗೌರವಿಸಬೇಕು. ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯವನ್ನು ಯಾರೂ ಕೂಡಾ ಉಲ್ಲಂಘಿಸುವಂತಿಲ್ಲ ಎಂದು ಒಕ್ಕೂಟ ತಿಳಿಸಿದೆ.

- Advertisement -

 ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಗಳ ಪ್ರವೇಶವನ್ನು ನಿರಾಕರಿಸುವುದು ಅವರ ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ. ಮತ್ತು ಅದು ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಕಾರಣವಾಗಲಿದೆ.  ವಿದ್ಯಾರ್ಥಿನಿಯರನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯ ಸೋರಿಕೆಯೂ  ಅವರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಹಾನಿಯಾಗುವ ಸಂಭವವಿದೆ. ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಭಾರತದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಧಾರ್ಮಿಕ ಆಯ್ಕೆಗಳನ್ನು “ಪ್ರತಿಪಾದಿಸಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು” ಮಾನ್ಯತೆ ನೀಡಿದೆ. ಭಾರತದ ನಾಗರಿಕರಾಗಿ, ಎಲ್ಲರಿಗೂ ಖಾತರಿಪಡಿಸಿದ ಹಕ್ಕುಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಭಾರತವು ಬಹುತ್ವ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶವು ಎಲ್ಲಾ ನಾಗರಿಕರಿಗೆ ಸಮಾನವಾಗಿ ಸೇರಿದೆ. ಸಾಮರಸ್ಯ, ಸಹಬಾಳ್ವೆ ಮತ್ತು ಒಳಗೊಳ್ಳುವ ಸಂಸ್ಕೃತಿಯ ಗೌರವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆ ನಮ್ಮ ಶಕ್ತಿಯಾಗಿದೆ. ಯುವ ಮತ್ತು ಬೆಳೆಯುತ್ತಿರುವ ಮಕ್ಕಳ ಮನಸ್ಸುಗಳಲ್ಲಿ ದ್ವೇಷದ ಬೀಜಗಳನ್ನು ಬಿತ್ತುವ ಮೂಲಕ ವಿದ್ಯಾರ್ಥಿಗಳಲ್ಲಿ ಸೃಷ್ಟಿಸುತ್ತಿರುವ ವಿಷಪೂರಿತ ಮನೋಭಾವವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಅದು ತಿಳಿಸಿದೆ.

ನಾವು ಒಬ್ಬರಿಗೊಬ್ಬರು ಸ್ನೇಹಿತರಾಗಿದ್ದೇವೆ ಮತ್ತು ಪರಸ್ಪರ ಗೌರವ ಹಾಗೂ ನಂಬಿಕೆಯ ಮೂಲಕ ಸಮಾಜಕ್ಕೆ ಮತ್ತು ನಮ್ಮ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಬಹುದು ಎಂಬುದನ್ನು ಅರಿತುಕೊಳ್ಳಲು ರಾಜ್ಯಾದ್ಯಂತ ಕಾಲೇಜಿನ ವಿದ್ಯಾರ್ಥಿಗಳಿಗೆ ನಾವು ಕರೆ ನೀಡುತ್ತೇವೆ ಎಂದು ವಿದ್ಯಾರ್ಥಿ ನಾಯಕರು ತಿಳಿಸಿದ್ದಾರೆ.

ಸದ್ಯ ಕೋರ್ಟಿನಲ್ಲಿರುವ ಈ ವಿವಾದವು ಭಾರತದ ಸಂವಿಧಾನ ಖಾತರಿಪಡಿಸಿದ ವೈಯಕ್ತಿಕ ಹಕ್ಕುಗಳನ್ನು ತುಳಿಯುವ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲವೆಂದು  ಹಾಗೂ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುತ್ತದೆ ಎಂಬುದನ್ನು ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯದಿಂದ ನಾವು ಪ್ರಾಮಾಣಿಕವಾಗಿ ನಂಬಿದ್ದೇವೆ ಮತ್ತು ನಿರೀಕ್ಷಿಸುತ್ತಿದ್ದೇವೆ ಎಂದು ವಿದ್ಯಾರ್ಥಿ ಮತ್ತು ಯುವಜನರ ಸಂಘಟನೆಗಳ ಒಕ್ಕೂಟ  ತಿಳಿಸಿದೆ.

ಈ ಪತ್ರಕ್ಕೆ  ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS), ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ, ಕರ್ನಾಟಕ (SIO), ಸ್ಟೂಡೆಂಟ್ಸ್ ಕ್ರಿಶ್ಚಿಯನ್ ಮೂವ್ಮೆಂಟ್ ಆಫ್ ಇಂಡಿಯಾ (SCMI),  ಭ್ರಾತೃತ್ವ ಆಂದೋಲನ ಕರ್ನಾಟಕ (Fraternity  Movement Karnataka), ವಿದ್ಯಾರ್ಥಿ, ಜನತಾದಳ ಜಾತ್ಯಾತೀತ (VJDS), ಛಾತ್ರ್ ಯುವ ಸಂಘರ್ಷ ಸಮಿತಿ (CYSS), ಸಂಶೋಧನಾ ವಿದ್ಯಾರ್ಥಿಗಳ ವಿಚಾರವಾದಿ ಗೆಳೆಯರ ಬಳಗ, ಬೆಂಗಳೂರು ವಿಶ್ವವಿದ್ಯಾಲಯ,  ವಿದ್ಯಾರ್ಥಿ ಹೋರಾಟಗಾರರಾದ ಸುನಿಲ್ ಕುಮಾರ್ ಗುನ್ನಾಪುರ, ನಿವೇದಾ ಮತ್ತು ಶಾಲಮ್ ಗೌರಿ ಸಹಿ ಹಾಕಿದ್ದಾರೆ.



Join Whatsapp