‘ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಒಗ್ಗೂಡಬೇಕು’: ಋಷಿಕುಮಾರ ಸ್ವಾಮೀಜಿ

Prasthutha|

ಚಿತ್ರದುರ್ಗ: ‘ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣ ಆಗಲೇಬೇಕು. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಒಗ್ಗೂಡಬೇಕು’ ಎಂದು ಕಾಳಿಕಾ ಯುವಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಋಷಿಕುಮಾರ ಸ್ವಾಮೀಜಿ ಹೇಳಿದ್ದಾರೆ.

- Advertisement -

ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಿಂದೂಪರ ಸಂಘಟನೆಗಳ ಮಹಾ ಒಕ್ಕೂಟ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು ‘ರಾಜ್ಯದಲ್ಲಿ ಮತಾಂತರ ಸಾಮಾನ್ಯವಾಗಿ ಬಿಟ್ಟಿದೆ. ಮೊದಲೆಲ್ಲಾ ಕೇವಲ ದಲಿತರನ್ನು ಮಾತ್ರ ಸೆಳೆದುಕೊಳ್ಳುತ್ತಿದ್ದ ಅನ್ಯ ಧರ್ಮೀಯರು ಈಗ ಎಲ್ಲ ಜಾತಿಗಳನ್ನೂ ಮತಾಂತರ ಮಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಹಿಂದೂಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಬೇರೊಂದು ಧರ್ಮಕ್ಕೆ ತಲೆಬಾಗಬೇಕಾಗುತ್ತದೆ. ಆದ್ದರಿಂದ ಈ ವಿಚಾರವಾಗಿ ಹಿಂದೂ ಪರ ಸಂಘಟನೆಗಳು ಒಗ್ಗೂಡಲೇಬೇಕಿದೆ’ ಎಂದರು.

‘ಹಿಂದೂಗಳಲ್ಲಿ ಒಗ್ಗಟ್ಟಿನ ಕೊರತೆಯಿದೆ. ಇದರಿಂದ ಅನ್ಯ ಧರ್ಮೀಯರು ಲಾಭ ಪಡೆಯುತ್ತಿದ್ದಾರೆ. ಜಾತ್ಯತೀತ ಎನ್ನುವ ಅನೇಕ ಮಠಾಧೀಶರೂ ಹಿಂದೂಗಳ ಪರವಾಗಿ ನಿಲ್ಲುತ್ತಿಲ್ಲ. ದೇಶದೊಳಗೆ ಹಿಂದೂ ಸಂಘಟನೆಗಳು ಜಾಗೃತರಾಗದಿದ್ದರೆ ಉಳಿಗಾಲವಿಲ್ಲ. ಭಾರತ ಹಿಂದೂ ರಾಷ್ಟ್ರವಾಗಬೇಕು ಎಂಬ ಸಂಕಲ್ಪದೊಂದಿಗೆ ಈ ಮಹತ್ಕಾರ್ಯಕ್ಕೆ ಮುಂದಾಗಿದ್ದೇವೆ. ಅನೇಕರ ಉದ್ದೇಶ ಒಂದೇ ಆಗಿದ್ದರೂ ಸಂಘಟನೆಗಳು ಮಾತ್ರ ಬೇರೆ-ಬೇರೆಯಾಗಿವೆ. ಮೊದಲ ಹಂತದಲ್ಲಿ ರಾಜ್ಯದಲ್ಲಿನ 64 ಹಿಂದೂಪರ ಸಂಘಟನೆ ಒಂದೇ ವೇದಿಕೆಯಲ್ಲಿ ತರಲು ಶ್ರಮಿಸುತ್ತಿದ್ದೇವೆ’ ಎಂದರು.

- Advertisement -

ರಾಷ್ಟ್ರೀಯ ದಲಿತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಓಬಳೇಶ್ ಉಗ್ರನರಸಿಂಹ, ಶ್ರೀರಾಮ ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಭಾರಿ ಗಂಗಾಧರ, ವಂದೇ ಮಾತರಂ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಮಾಲತೇಶ್ ಅರಸ್, ಸಮಸ್ತ ವಿಶ್ವ ಧರ್ಮರಕ್ಷಾ ಸೇನಾ ಸಂಸ್ಥಾಪಕ ಯೋಗಿ ಸಂಜೀತ್
ಸುವರ್ಣ ಈ ವೇಳೆ ಉಪಸ್ಥಿತರಿದ್ದರು.

Join Whatsapp