ತಾಯ್ನಾಡಿಗೆ ಮರಳಲಾಗದೆ ಆತ್ಮಹತ್ಯೆಯೇ ದಾರಿಯೆಂದು ಭಾವಿಸಿದ ಯುವಕನಿಗೆ ಆಸರೆಯಾದ ಐ.ಎಸ್.ಎಫ್. | ಕಾರ್ಮಿಕ ನ್ಯಾಯಾಲಯದಲ್ಲಿ ಹೋರಾಡಿ ಯಶಸ್ಸು

Prasthutha|

ದಮ್ಮಾಮ್: ಪ್ರಾಯೋಜಕರ ಕಿರುಕುಳದಿಂದಾಗಿ ಸೌದಿ ಅರೇಬಿಯಾದಿಂದ ತವರಿಗೆ ಮರಳಲಾಗದೆ ಆತ್ಮಹತ್ಯೆಯೇ ದಾರಿಯೆಂದು ಭಾವಿಸಿದ್ದ ಯುವಕನೊಬ್ಬನನ್ನು ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್ ಘಟಕ, ಸೌದಿ ಕಾರ್ಮಿಕ ನ್ಯಾಯಾಲಯದಲ್ಲಿ ಹೋರಾಡಿ ತಾಯ್ನಾಡಿಗೆ  ಕಳುಹಿಸಲು ಯಶಸ್ವಿಯಾಗಿದೆ.

- Advertisement -

ತುಮಕೂರಿನ 37ರ ಹರೆಯದ ಜಂಶೀರ್‌ ಅಹ್ಮದ್, ಅಲ್ ಬಸ್ಸಾಮ್ ಟ್ರಾವೆಲ್ ಆಂಡ್ ಟೂರಿಸಂನ ಚಾರ್ಟೆಡ್ ವಿಮಾನದ ಮೂಲಕ ಮೇ 3೦ರಂದು ಸೌದಿ ಅರೇಬಿಯಾದಿಂದ ತೆರಳಿದ್ದು, ಮೇ 31ರಂದು ತವರು ತಲುಪಿದ್ದಾರೆ.

ಜಂಶೀರ್ ಕಳೆದ 9 ವರ್ಷಗಳಿಂದ ವಿವಿಧ ರೆಸ್ಟಾರೆಂಟ್ ಗಳಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಎರಡೂವರೆ ವರ್ಷಗಳಿಂದ ಖತೀಫ್ ನ ಯಾಸ್ಮೀನ್ ಶಮಿ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಐದೂವರೆ ವರ್ಷಗಳಿಂದ ಅವರು ತಾಯ್ನಾಡಿಗೆ ಹೋಗಿರಲಿಲ್ಲ. ಇದೀಗ ಕಳೆದ ನಾಲ್ಕು ತಿಂಗಳುಗಳಿಂದ ಅವರ ತಾಯಿ ತೀವ್ರ ಕಾಯಿಲೆ ಪೀಡಿತರಾಗಿ ಆಸ್ಪತ್ರೆಯಲ್ಲಿದ್ದು, ಅವರ ಪ್ರಾಯೋಜಕರು ಅವರನ್ನು ತವರಿಗೆ ಮರಳಲು ಎಕ್ಸಿಟ್ ವೀಸಾ ನೀಡದೆ ಸತಾಯಿಸುತ್ತಿದ್ದರು. 

- Advertisement -

ತವರಿನಿಂದ ವೈದ್ಯರು ಮತ್ತು ಕುಟುಂಬಸ್ಥರು ಕರೆ ಮಾಡಿದರೂ ಪ್ರಾಯೋಜಕ ಈ ಬಗ್ಗೆ ಗಮನ ಕೊಡುತ್ತಿರಲಿಲ್ಲ. ಜಂಶೀರ್ ಇಕಾಮ ಕಳೆದ ನಾಲ್ಕು ತಿಂಗಳುಗಳ ಹಿಂದೆ ಅವಧಿ ಮುಗಿದಿದ್ದು ಪ್ರಾಯೋಜಕನು ನವೀಕರಿಸಿರಲಿಲ್ಲ. ಅತ್ತ  ಜೀವನ್ಮರಣ ಹೋರಾಟದ ನಡುವೆಯಿದ್ದ ತಾಯಿಯನ್ನು ಕಾಣಲು ತವರಿಗೆ ಮರಳಲಾಗದ ಜಂಶೀರ್ ಅಂತಿಮವಾಗಿ ತನ್ನ ದಯನೀಯ ಪಾಡನ್ನು ವಿವರಿಸಿ ವಾಟ್ಸಪ್ ನಲ್ಲಿ ಕಣ್ಣೀರಿಟ್ಟು ಆತ್ಮಹತ್ಯೆಯೇ ದಾರಿಯೆಂದು ವೀಡಿಯೊ  ಬಿಟ್ಟಿದ್ದ.

ವೀಡಿಯೊದಲ್ಲಿದ್ದ ಯುವಕನ ದಯನೀಯ ಸ್ಥಿತಿಯನ್ನು ಅರಿತ ಇಂಡಿಯನ್ ಸೋಶಿಯಲ್ ಫೋರಂ ಕೂಡಲೇ ಕಾರ್ಯಪ್ರವೃತವಾಗಿ ಆತನನ್ನು ಪತ್ತೆಹಚ್ಚಿತು. ಪ್ರಾಯೋಜಕನನ್ನು ಸಂಪರ್ಕಿಸಿ ಜಂಶೀರ್ ನನ್ನು ತವರಿಗೆ ಕಳುಹಿಸುವಂತೆ ಮನವೊಲಿಸಲು ಪ್ರಯತ್ನಿಸಿದರೂ ಆತ ಬಗ್ಗಿರಲಿಲ್ಲ. ಪ್ರಯತ್ನವನ್ನು ನಿಲ್ಲಿಸದ ಐ.ಎಸ್.ಎಫ್ ಕೂಡಲೇ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲು ಹತ್ತಿತು.

ಐ.ಎಸ್‌.ಎಫ್, ದಮ್ಮಾಮ್, ಕರ್ನಾಟಕ ಘಟಕದ ಕಮ್ಯುನಿಟಿ ಡೆವೆಲಪ್ ಮೆಂಟ್ ಡಿಪಾರ್ಟ್ ಮೆಂಟ್ ನ  ಯಾಸೀನ್ ಗುಲ್ಬರ್ಗಾ ಮತ್ತು  ಇಬ್ರಾಹೀಂ ಕೃಷ್ಣಾಪುರ ಅವರು ಕಾರ್ಮಿಕ ನ್ಯಾಯಾಲಯದಲ್ಲಿ ಕೇಸು ಹೂಡಿದ್ದರು.  ಮೊದಲು ಅಲ್ ಖೋಬರ್ ಕಾರ್ಮಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದು ನಂತರ ಆತನ ಪ್ರಾಯೋಜಕನ ಊರಾದ ಜುಬೈಲ್ ಗೆ ತೆರಳಿ ಅಲ್ಲಿನ ಐ.ಎಸ್.ಎಫ್ ಮುಖಂಡ ನಝೀರ್ ತುಂಬೆ ನೆರವಿನೊಂದಿಗೆ ಕಾರ್ಮಿಕ ನ್ಯಾಯಾಲಯದಲ್ಲಿ ಕೇಸು ಹೂಡಿದ್ದರು. ಕಾರ್ಮಿಕ ನ್ಯಾಯಾಲಯದಲ್ಲಿ ಯುವಕನಿಗೆ ನ್ಯಾಯ ದೊರಕಿದ್ದು ನಂತರ ತವರಿಗೆ ಮರಳಿಸಲು ಜವಾಝಾತ್ ನಲ್ಲಿ ಸಂಬಂಧಿಸಿದ ದಾಖಲೆ ಪತ್ರಗಳ ಪ್ರಕ್ರಿಯೆಯನ್ನು ಐ.ಎಸ್.ಎಫ್‌ ಪೂರೈಸಿತು.

ದಾನಿಗಳ ನೆರವಿನಿಂದ  ತವರಿಗೆ ಮರಳಲು ಬೇಕಾದ ಟಿಕೆಟ್  ಒದಗಿಸಿತು ಮತ್ತು ಝಕಾತ್ ಹಣವನ್ನು ಸಂಗ್ರಹಿಸಿ ಆತನಿಗೆ ನೀಡುವ ಮೂಲಕ ನೆರವಾಯಿತು. ಇದರೊಂದಿಗೆ ಆತ್ಮಹತ್ಯೆಯೇ ದಾರಿಯೆಂದ ಯುವಕನ ಬಾಳಿಗೆ ಐಎಸ್.ಎಫ್ ಆಸರೆ ಒದಗಿಸಿದೆ. ತವರು ಸೇರಿರುವ ಜಂಶೀರ್ ಮತ್ತು ಆತನ‌ ಕುಟುಂಬ ಐ.ಎಸ್.ಎಫ್ ಗೆ ಕೃತಜ್ನತೆ ಸಲ್ಲಿಸಿದೆ.



Join Whatsapp